ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ; ಉತ್ತೀರ್ಣಗೊಂಡ ಸರ್ಕಾರಿ ನೌಕರರಿಗೆ ಪ್ರೋತ್ಸಾಹ ಧನ
ಬೆಂಗಳೂರು, ಆಗಸ್ಟ್ 06; ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ಪ್ರೋತ್ಸಾಹ ಧನ ಮಂಜೂರು ಮಾಡುವ ಬಗ್ಗೆ ಆದೇಶ ಹೊರಡಿಸಲಾಗಿದೆ. ಕರ್ನಾಟಕದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
ಖಜಾನೆ ಆಯುಕ್ತರು, ಬೆಂಗಳೂರು ಇವರ ಪರವಾಗಿ ಈ ಸುತ್ತೋಲೆ ಪ್ರಕಟಿಸಲಾಗಿದೆ. ಸರ್ಕಾರದ ಅಧಿಸೂಚನೆ ದಿನಾಂಕ 7/3/2012, ಸರ್ಕಾರಿ ಆದೇಶ ಸಂಖ್ಯೆ 30/11/2019 ಮತ್ತು ಸರ್ಕಾರದ ಅಧಿಸೂಚನೆ ದಿನಾಂಕ 17/4/2021 ಉಲ್ಲೇಖಿಸಿ ಈ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರಿ ಆದೇಶಗಳಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿನಾಂಕ 22/03/2012 ರಂದು ಸೇವೆಯಲ್ಲಿದ್ದು, ದಿನಾಂಕ 17/4/2021ರೊಳಗೆ ಸದರಿ ಪರಿಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹ ಧನ ಪಾವತಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದೆ.
ಪ್ರೋತ್ಸಾಹ ಧನ ಬಿಡುಗಡೆ; ತಮ್ಮ ಕಛೇರಿಯಲ್ಲಿ (ಅಧೀನ ಉಪ ಖಜಾನೆಗಳನ್ನೊಳಗೊಂಡು) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದುವರೆಗೂ ಪ್ರೋತ್ಸಾಹ ಧನವನ್ನು ಪಡೆಯದೇ ಇರುವ ಅರ್ಹ ಅಧಿಕಾರಿಗಳು/ ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.
ಅಧಿಕಾರಿ/ ನೌಕರ ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಅವರಿಗೆ ಪ್ರೋತ್ಸಾಹ ಧನವನ್ನು ಪಾವತಿಸುವ ಸಲುವಾಗಿ ಲೆಕ್ಕ ಶೀರ್ಷಿಕೆ 2054-00-095-0-01 ಆಬ್ಜೆಕ್ಟ್ ಕೊಡ್ 015 ರಡಿಯಲ್ಲಿ ಬೇಕಾಗುವ ಅನುದಾನದ ಮಾಹಿತಿಯೊಂದಿಗೆ ದಿನಾಂಕ 5/8/2023ರ ಒಳಗಾಗಿ ಆಯುಕ್ತಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಅವಧಿ ವಿಸ್ತರಣೆ; ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಮತ್ತು ಉತ್ತೀರ್ಣರಾಗುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನೌಕರರು ಪರೀಕ್ಷೆ ತೆಗೆದುಕೊಂಡು ಉತ್ತೀರ್ಣವಾಗಲು ಅನುಕೂಲವಾಗುವಂತೆ ಇದಕ್ಕಾಗಿ ದಿನಾಂಕ 31-12-2023ರವರೆಗೆ ಸಮಯಾವಕಾಶ ವಿಸ್ತರಿಸಿ ಆದೇಶಿಸಿದೆ.
ಈ ಹಿಂದೆ 2022ರ ಅಂತ್ಯದ ತನಕ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಸುಮಾರು 2,00,000 ಅಧಿಕಾರಿಗಳು ಮತ್ತು ನೌಕರರುಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದ ಕಾರಣ ಸರ್ಕಾರವು ದಿನಾಂಕ 31/12/2023ರವರೆಗೆ ಸಮಯಾವಕಾಶ ವಿಸ್ತರಿಸಿದೆ.
ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ನಿಗಮ/ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಅನುತ್ತೀರ್ಣರಾದವರು ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಪರೀಕ್ಷೆ ತೆಗೆದುಕೊಂಡು ದಿನಾಂಕ 31/12/2023ರ ಒಳಗಾಗಿ ಉತ್ತೀರ್ಣರಾಗಬೇಕಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ ಎಂದು ಈಗಾಗಲೇ ಸರ್ಕಾರ ಹೇಳಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವ ಸರ್ಕಾರಿ ನೌಕರರು ಕೂಡಲೇ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಮನವಿ ಮಾಡಲಾಗಿದೆ.
ಆಯಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಮಾಹಿತಿ ನೀಡುವಂತೆ ಸಹ ತಿಳಿಸಲಾಗಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳದಿರುವ ಅಧಿಕಾರಿ/ ನೌಕರರುಗಳು https://clt.karnataka.gov.in ಹಾಗೂ ನಿಗಮ ಮಂಡಳಿಗಳ ನೌಕರರು https://nkclt.clt.karnataka.gov.in ವೆಬ್ಸೈಟ್ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿ, ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.












Click it and Unblock the Notifications