ಭಕ್ತರ ಸಮ್ಮುಖದಲ್ಲಿ ಚಿಕ್ಕರಸಿನಕೆರೆ ಬಸವನಿಗೆ ಅಂತ್ಯಸಂಸ್ಕಾರ
ಮದ್ದೂರು, ಮೇ 18: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ದೈವಿ ಸ್ವರೂಪ ಬಸವನ ಅಂತ್ಯ ಸಂಸ್ಕಾರ ಬುಧವಾರ ಸಂಜೆ ನೆರವೇರಿದೆ. ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರ ಸಮ್ಮುಖದಲ್ಲಿ ಕಾಲಭೈರವೇಶ್ವರನ ಪಾದ ಸೇರಿದ ಬಸವನಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಬೆಂಗಳೂರಿನ ಚಾಮರಾಜಪೇಟೆಯಿಂದ ಬಂದಿದ್ದ ಚೈತನ್ಯ ಶರ್ಮಾ ನೇತೃತ್ವದ 10 ಜನ ಪುರೋಹಿತರು. ವೇದ ಘೋಷಗಳೊಂದಿಗೆ ಬಸವನ ಅಂತ್ಯ ಸಂಸ್ಕಾರ ವಿಧಿ ವಿಧಾನ ಪೂರೈಸಿದರು. 800 ಕೆಜಿ ಉಪ್ಪು, 300 ಕೆಜಿ ವಿಭೂತಿ, 50 ಕೆಜಿ ಬಿಲ್ವಪತ್ರೆ ಬಳಕೆ ಮಾಡಿ ದೇವಸ್ಥಾನದ ಬಲಭಾಗದಲ್ಲಿ ಗುಂಡಿ ತೋಡಿ ಸಮಾಧಿ ಕಾರ್ಯ ನೆರವೇರಿಸಲಾಯಿತು.

ಒಬ್ಬ ಸ್ವಾಮೀಜಿ ಅಂತ್ಯಕ್ರಿಯೆಯಲ್ಲಿ ಬಳಸುವ ಎಲ್ಲಾ ವಿಧಾನಗಳನ್ನು ಕಾಲಭೈರವೇಶ್ವರ ಬಸವ ಅಂತ್ಯಕ್ರಿಯೆಯಲ್ಲೂ ಬಳಸಲಾಯಿತು. ಬೆಳಗ್ಗೆಯಿಂದಲೇ ಸುತ್ತ ಮುತ್ತಲ ಹಳ್ಳಿಗಳಲ್ಲಿ ಬಸವನ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಕೆಎಂ ದೊಡ್ಡಿ, ಆತಗೂರು, ನಿಡಘಟ್ಟ, ಹೆಮ್ಮನಹಳ್ಳಿ ದಾಟಿ ಬೆಂಗಳೂರಿಗೆ ಆಗಾಗ ಬೋರದೇವರ ಬಸವ ಬರುತ್ತಾನೆ. ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ಇಂದು ದೇಶ ವಿದೇಶಗಳಲ್ಲಿ ತನ್ನ ಖ್ಯಾತಿಯನ್ನು ಹಬ್ಬಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ.[ಬಸವನ ಕುರಿತ ಇನ್ನಷ್ಟು ವಿವರ ಇಲ್ಲಿ ಓದಿ]

ಸ್ಥಳ ಪುರಾಣ: ಬಹುಕಾಲದ ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಅಕ್ಕ-ತಂಗಿಯರಿದ್ದರು. ಅವರಿಬ್ಬರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು.
ಚಿಕ್ಕರಸಿನಕೆರೆಯಲ್ಲಿ ಶತಮಾನದ ದಿನಗಳ ಹಿಂದೆ ಹುತ್ತವೊಂದು ಬೆಳೆದುಕೊಡಿತ್ತು. ದೊಡ್ಡರಸಿನಕೆರೆ ಗ್ರಾಮದ ಬ್ರಹ್ಮಣರ ಕುಟುಂಬದ ಹಸುವೊಂದು ಮನೆಯಲ್ಲಿ ಹಾಲಿನ ಬದಲು ರಕ್ತವನ್ನು ನೀಡಿ ಚಿಕ್ಕರಸಿನಕೆರೆ ಬಳಿಗೆ ಬಂದು ಹುತ್ತದ ಬಳಿ ಹಾಲನ್ನು ಸುರಿಸುತ್ತಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಹುತ್ತವನ್ನು ಅಗೆದು ನೋಡುವಷ್ಟರಲ್ಲಿ ಭೂಮಿಯೊಳಗೆ ಶ್ರೀಕಾಲಭೈರವೇಶ್ವರ ಬಸವನ ವಿಗ್ರಹವು ದೊರೆತ್ತಿತ್ತು.

ನಂತರ ಗ್ರಾಮಸ್ಥರು ಆ ವಿಗ್ರಹವನ್ನು ಅಲ್ಲೆ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿದರು. ದೇವರ ಹೆಸರಿನಲ್ಲಿ ಬಸವ ಬಿಡುತ್ತ ಪ್ರತಿವರ್ಷವು ಜಾತ್ರಾಮಹೋತ್ಸವವು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವರಿಗೆ ಬೋರದೇವರೆಂಬ ಮತ್ತೂಂದು ಹೆಸರು.












Click it and Unblock the Notifications