ಕನ್ನಡ ರಾಜ್ಯೋತ್ಸವ ಆಚರಣೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ!
ಬೆಂಗಳೂರು, ನ 02: ಕನ್ನಡ ರಾಜ್ಯೋತ್ಸವದಂದು ನಾಡಧ್ವಜ ಹಾರಿಸದೆ ಇರುವ ಜಿಲ್ಲಾಡಳಿತಗಳ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಡಧ್ವಜದ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಇದೀಗ ನಾಡಧ್ವಜಾರೋಹಣ ಮಾಡದೇ ಇರುವುದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಹಲವಾರು ಜಿಲ್ಲಾಡಳಿತಗಳು ನಾಡಧ್ವಜಾರೋಹಣ ಮಾಡದೇ ಅಗೌರವ ತೋರಿಸಿರುವುದು ಖಂಡನೀಯ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮಕ್ಷಮದಲ್ಲಿಯೇ ನಾಡಧ್ವಜ ಹಾರಿಸಲಾಗಿದೆ. ಹೀಗಿರುವಾಗ ಜಿಲ್ಲಾಡಳಿತಗಳ ಉಪೇಕ್ಷೇ ಯಾರ ಕುಮ್ಮಕ್ಕಿನಿಂದ ನಡೆಯಿತು ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ನಾಡಧ್ವಜಾರೋಹಣ ಮಾಡುವ ಮೂಲಕ ಕನ್ನಡಿಗರ ಅಸ್ಮೀತೆಯನ್ನು ಎತ್ತಿಹಿಡಿದಿದ್ದರು. ಇದೀಗ ಮತ್ತೆ ಬಿಜೆಪಿ ಕಾಲದಲ್ಲಿ ಹಲವು ಜಿಲ್ಲಾಡಳಿತಗಳು ನಾಡಧ್ವಜಾರೋಹಣ ಮಾಡಿಲ್ಲ. ಇದು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಾಡಧ್ವಜ ವಿರೋಧಿಸಿದ್ದ ಸಿಟಿ ರವಿ
ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾರಿಸುವ ಸಂಪ್ರದಾಯವನ್ನು ಹಿಂದಿನ ಎಲ್ಲ ಸರ್ಕಾರಗಳು ಪಾಲಿಸುತ್ತಾ ಬಂದಿವೆ. ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರೇ ನಾಡಧ್ವಜಾರೋಹಣ ವಿರೋಧಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.

ಪೂರ್ವಾಗ್ರಹ ಪೀಡಿತ ಬಿಜೆಪಿ ಸರ್ಕಾರ
ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಲಾಗಿತ್ತು. ಅದನ್ನು ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಅದಾಗಿ ಎರಡು ವರ್ಷಗಳಾದರೂ ಅಂಗೀಕಾರ ನೀಡದೆ ಇರುವುದು ಕರ್ನಾಟಕದ ನಾಡಧ್ವಜದ ಬಗ್ಗೆ ಬಿಜೆಪಿಗೆ ಇರುವ ಪೂರ್ವಗ್ರಹಕ್ಕೆ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಧ್ವಜವನ್ನು ಕೇಳುತ್ತಿಲ್ಲ
ನಾವೇನು ಪ್ರತ್ಯೇಕ ಧ್ವಜವನ್ನು ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಆಗಿರುವ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯ ಕೇಂದ್ರ ನಾಯಕರ ಅಭಿಪ್ರಾಯವೇನೇ ಇರಲಿ, ಆ ಪಕ್ಷದ ಸ್ಥಳೀಯ ನಾಯಕರು ಪ್ರಧಾನ ಮಂತ್ರಿ ಮೇಲೆ ಒತ್ತಡ ಹೇರಿ ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
Recommended Video

ಕನ್ನಡ ಧ್ವಜಾರೋಹಣ ಮಾಡಿಲ್ಲ
ನಿನ್ನೆ (ನ.02) ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕೆಲವು ಜಿಲ್ಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾತ್ರ ಮಾಡಲಾಗಿದೆ. ಆದರೆ ಜೊತೆಗೆ ಕನ್ನಡ ಧ್ವಜಾರೋಹಣ ಮಾಡುವುದು ಸಂಪ್ರದಾಯ. ಆದರೆ ಕೆಲವು ಜಿಲ್ಲೆಗಳಲ್ಲಿ ಆ ಸಂಪ್ರದಾಯವನ್ನು ಮುರಿದು ರಾಷ್ಟ್ರಧ್ವಜಾರೋಹಣವನ್ನು ಮಾತ್ರ ಮಾಡಲಾಗಿದೆ. ಅದು ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications