Karnataka Weather: ಜೂನ್ 4ವರೆಗೆ ಮಳೆ ಮುಂದುವರಿಕೆ, ಕೆಲವೆಡೆ ಮಳೆ ಇಳಿಕೆ?
ಬೆಂಗಳೂರು, ಮೇ 31: ಕರ್ನಾಟಕದಾದ್ಯಂತ ಕೆಲವು ದಿನಗಳಿಂದ ಅಬ್ಬರಿಸಿದ್ದ ಮಳೆ ಕೆಲವು ಭಾಗಗಳಲ್ಲಿ ಇಳಿಕೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಕೇವಲ ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕವಾಗಿ ವರುಣಾರ್ಭಟ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕೆಲವು ದಿನಗಳಿಂದ ಕರಾವಳಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ ಒಳನಾಡಿನ ಜಿಲ್ಲೆಗಳಲ್ಲಿ ಭರ್ಜರಿ ಮಳೆ ದಾಖಲಾಗಿತ್ತು. ಇದೀಗ ನಾಳೆ ಜೂನ್ 02 ರಂದು ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಜೋರು ಮಳೆ ಬರಲಿದೆ. ಈ ಸಂಬಂಧ ಇಷ್ಟು ಜಿಲ್ಲೆಗಳಿಗೆ ನಾಳೆ ಒಂದು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹಳದಿ ಎಚ್ಚರಿಕೆ ಪಡೆದ ಈ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಭಾಗದ ಜಿಲ್ಲೆಗಳಲ್ಲಿ ಅಷ್ಟಾಗಿ ಜೋರು ಮಳೆ ಬರುವ ಬಗ್ಗೆ ಸಂದೇಶವಿದೆ. ಬಂದರೂ ತುಂತುರು ಇಲ್ಲವೇ ಹಗುರ, ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
ಹಲವೆಡೆ ಮಳೆ ಇಳಿಕೆ ಸಾಧ್ಯತೆ
ರಾಜ್ಯದಲ್ಲಿ ಶುಕ್ರವಾರ ಹೊರತಾಗಿ ಜೂನ್ 04 ರವರೆಗೆ ಹಲವು ಕಡೆಗಳಲ್ಲಿ ಮಳೆ ತುಸು ಕಡಿಮೆಯಾಗುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಅಲ್ಪ ಮಳೆ ಬರಬಹುದು ಎಂಬ ಮುನ್ಸೂಚನೆ ಇದೆ.
ಜೂನ್ 4ರ ನಂತರ ಎರಡು ದಿನ ಮತ್ತೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ, ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳಲ ಹಲವೆಡೆ ಧಾರಾಕಾರ ಮಳೆ ಮತ್ತೆ ಆರಂಭವಾಗುವ ಸಂಭವವಿದೆ.

ಉಳಿದಂತೆ ಮುಂದಿನ ಐದು ದಿನ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಸೇರಿ ಮೊದಲಾದ ಜಿಲ್ಲೆಗಲ್ಲಿ ಹಗುರದಿಂದ ಜೋರು ಮಳೆ, ಇನ್ನೂ ಒಂದೆರಡು ಕಡೆ ಅಧಿಕ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಮಳೆ ಮುನ್ಸೂಚನೆ ಏನಿದೆ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜೂನ್ 4ರವರೆಗೆ ಬಿರುಗಾಳಿ ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ. ಕಳೆದ ಭಾನುವಾರ ಸಂಜೆಯಿಂದ ಆರಂಭವಾಗಿರುವ ಮಳೆ ಪ್ರತಿನಿತ್ಯವು ಸುರಿಯುತ್ತಿದೆ. ಈ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ. ಕೆಲವೆಡೆ ಜೋರು ಮಳೆ ಬಂದರೆ, ಇನ್ನು ಒಂದೆರಡು ಪ್ರದೇಶಗಳಲ್ಲಿ ಹಗುರವಾಗಿ ಬೀಳಲಿದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಪ್ರತಿದಿನ ಮಧ್ಯಾಹ್ನ ನಂತರ ಮೋಡ ಕವಿದ ಹಾಗೂ ತಂಪು ವಾತಾವರಣ ಸೃಷ್ಟಿಯಾಗಲಿದೆ.












Click it and Unblock the Notifications