ವರ್ಷಾಂತ್ಯದೊಳಗೆ 'ಆರೋಗ್ಯ ಕರ್ನಾಟಕ' ಯೋಜನೆ ಜಾರಿ, ಸಿಎಂ ಘೋಷಣೆ
ಬೆಂಗಳೂರು, ಫೆಬ್ರವರಿ 16: 2018-19ರ ಕರ್ನಾಟಕ ರಾಜ್ಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಆರೋಗ್ಯ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.
ಅವುಗಳಲ್ಲಿ ಪ್ರಮುಖವಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಹೆಚ್ಚುವರಿ ವಾರ್ಡ್ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. 1000 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಇದಾಗಿರಲಿದೆ.
ಫೆಬ್ರವರಿಯಲ್ಲಿ 'ಆರೋಗ್ಯ ಕರ್ನಾಟಕ' (ಯೂನಿವರ್ಸಲ್ ಹೆಲ್ತ್ ಕವರೇಜ್) ಯೋಜನೆಯನ್ನು ಆರಂಭಿಸಲಾಗುವುದು ಮತ್ತು ವರ್ಷಾಂತ್ಯದೊಂದಳಗೆ ರಾಜ್ಯದಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ಪೆಟ್ ಸಿಟಿ ಸ್ಕ್ಯಾನ್ ಸೌಲಭ್ಯ, ಬೀದರ್ ಮತ್ತು ಗದಗ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪನೆ, ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7.81 ಕೋಟಿ ರೂಪಾಯಿ ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯ ಆರಂಭ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಗದಗ, ಕೊಪ್ಪಳ, ಚಾಮರಾಜನಗರದಲ್ಲಿ 90 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ, ಮೈಸೂರಿನ ಶುಶ್ರೂಷಾ ಕಾಲೇಜಿಗೆ 30 ಕೋಟಿ. ರೂ ವೆಚ್ಚದಲ್ಲಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣ, ಶುಶ್ರೂಷಾ ಶಾಲೆಗಳು ಮತ್ತು ಕಾಲೇಜುಗಳ ಉನ್ನತೀಕರಣಕ್ಕೆ ಬಜೆಟ್ ನಲ್ಲಿ 30 ಕೋಟಿ ರೂಪಾಯಿಗಳನ್ನು ಅನುದಾನ ಮುಖ್ಯಮಂತ್ರಿಗಳು ನೀಡಿದ್ದಾರೆ.
ಹಾಸನ, ಮೈಸೂರು, ಕಾರಾವರದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ, ರಾಜ್ಯ ಆರೋಗ್ಯ ಪರಿಷತ್ ಸ್ಥಾಪನೆ, ಗುಲ್ಬರ್ಗಾ ವೈದ್ಯಕೀಯ ಕಾಲೇಜಿನಲ್ಲಿ ಸುಟ್ಟಗಾಯಗಳ ಚಿಕಿತ್ಸಾ ಘಟಕ ಆರಂಭ ಮಾಡುವುದಾಗಿಯೂ ಸಿದ್ದರಾಮಯ್ಯ ಘೋಷಿಸಿದ್ದಾರೆ.












Click it and Unblock the Notifications