Karnataka Rain: ಈ ಜಿಲ್ಲೆಗಳಿಗೆ ಹಗುರ ಮಳೆ ಸಾಧ್ಯತೆ: ವಿಜಯಪುರದಲ್ಲಿ ಗಾಳಿ-ಮಳೆಗೆ ಬೆಳೆ ಹಾನಿ
ಬೆಂಗಳೂರು, ಏಪ್ರಿಲ್ 01: ಕರ್ನಾಟಕ ರಾಜ್ಯದಲ್ಲಿ ಕೆಲವು ಜಿಲ್ಲೆಗಳ ಹೊರತುಪಡಿಸಿದರೆ ಉಳಿದೆಲ್ಲ ಜಿಲ್ಲೆಗಳಲ್ಲಿ ಶಾಖದ ಅಲೆ ಮುನ್ಸೂಚನೆ ಇದೆ. ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಮುಂದಿನ 24 ಗಂಟೆಯಲ್ಲಿ ಅಲ್ಲಲ್ಲಿ ಹಗುರವಾಗಿ ಮಳೆ ಸುರಿಯುವ ಲಕ್ಷಣಗಳು ಇವೆ. ಮೋಡ ಕವಿದ ವಾತಾವರಣ ಹಿನ್ನೆಲೆಯಲ್ಲಿ ಇಲ್ಲಿ ಕೆಲವೆಡೆ ತಾಪಮಾನ ಚೂರು ಇಳಿಕೆ ಆಗಿದೆ. ಈಗಾಗಲೇ ವಿಜಯಪುರದಲ್ಲಿ ಸಿಡಿಲು ಸಹಿತ ಜೋರು ಮಳೆ ದಾಖಲಾಗಿದ್ದು, ಲಕ್ಷಾಂತರ ರೂಪಾಯಿ ತೋಟಗಾರಿಕೆ ಬೆಳೆಗೆ ಹಾನಿ ಆಗಿದೆ.

ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಧಾರವಾಡ, ಹಾವೇರಿ, ಗದಗ, ಕಲಬರಗಿ, ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶಾಖದ ಅಲೆ ಮುಂದುವರಿಯಲಿದೆ. ಇಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಬಿಸಿ ಗಾಳಿ ಏರಿಕೆ
ಕರ್ನಾಟಕದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ ದಾಖಲಾಗಿದೆ. ಇಲ್ಲಿ 41.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದ ಭಾನುವಾರ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಈ ವರ್ಷ ಬಿಸಿಲಿಗೆ ಮೃತಪಟ್ಟ ಮೊದಲ ಸಾವು ಎನ್ನಲಾಗುತ್ತಿದೆ.
ಮನುಷ್ಯರ ಜೀವಕ್ಕೆ ಕಂಟಕವಾಗುಷ್ಟರಮಟ್ಟಿನ ಬಿಸಿ ಗಾಳಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೀಸುತ್ತಿದೆ. ಇನ್ನೂ ಕೆಲವು ದಿನ ಇದೇ ರೀತಿ ವಾತಾವರಣ ಮುಂದುವರಿಯುವ ಲಕ್ಷಣಗಳು ಇವೆ. ರಾಯಚೂರು, ಬಾಗಲಕೋಟೆ, ಚಿಕ್ಕನಹಳ್ಳಿಯಲ್ಲೂ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆ: ಬೆಳೆ ಹಾನಿ
ಶನಿವಾರ ವಿಜಯಪುರದಲ್ಲಿ ಗುಡುಗು ಮಿಂಚು ಸಹಿತ ಜೋರು ಮಳೆ ಆಗಿದೆ. ಬಿರುಗಾಳಿ ಸಹಿತ ಬಂದ ಮಳೆಗೆ ಇಲ್ಲಿ ಬಾಳೆ ಹೊಲಕ್ಕೆ ಹಾನಿಯಾಗಿದೆ. ಬಾಲೆಗೊನೆ ನೆಲಕ್ಕುರುಳಿವೆ. ಬಾಳೆ ಜೊತೆಗೆ ಲಿಂಬೆ, ದ್ರಾಕ್ಷಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ತೋಟಗಾರಿಕಾ ಬೆಳೆಗೆ ಹಾನಿ ಆಗಿದೆ.
ಬೆಂಗಳೂರಿನಲ್ಲಿ ಭಾನುವಾರ 34 ರಿಂದ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಅಲ್ಲದೇ ಮಾರ್ಚ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ತಕ್ಕಮಟ್ಟಿಗೆ ಮಳೆ ಆಗಿದೆ. ಆದರೆ ರಾಜಧಾನಿಯಲ್ಲಿ ಮಾತ್ರ ಒಂದು ದಿನವೂ ಮಳೆ ಆಗಿಲ್ಲ. ಹೀಗಾಗಿ ಮಾರ್ಚ್ ನಲ್ಲಿ ಬೆಂಗಳೂರಿಗೆ ಶೂನ್ಯ ಮಳೆ ಎನ್ನಲಾಗುತ್ತಿದೆ.
ಈ ಮೂಲಕ ಇಡೀ ಮಾರ್ಚ್ ತಿಂಗಳು ಬೆಂಗಳೂರು ಒಣ ಹವೆಗೆ ಸಾಕ್ಷಿಯಾಗಿದೆ. ಬೆಂಗಳೂರಿಗೆ ಇನ್ನೂ ಎರಡು ವಾರದ ಶಾಖದ ಅಲೆ ಮುನ್ಸೂಚನೆ ನೀಡಲಾಗಿದೆ. ಮಳೆಯ ಯಾವ ಲಕ್ಷಣ ಇಲ್ಲ ಎಂದು ಸದ್ಯದ ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ.












Click it and Unblock the Notifications