Karnataka Rains: ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ: ಆರೇಂಜ್ ಅಲರ್ಟ್
ಬೆಂಗಳೂರು, ಮೇ 02: ಹವಾಮಾನದಲ್ಲಿ ಉಂಟಾಗಿದ್ದ ವೈಪರಿತ್ಯಗಳು ತೀವ್ರಗೊಂಡ ಕಾರಣಕ್ಕೆ ಮುಂದಿನ 48 ಗಂಟೆ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಮಳೆ ಬೀಳಲಿದೆ. ಹೀಗಾಗಿ ಕೆಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಹಾಗೂ ಇನ್ನೂ ಕೆಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ನಿರ್ಮಾಣವಾಗಿದ್ದ ಸುಳಿಗಾಳಿಯ ತೀವ್ರತೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದೊಂದು ದಿನದಿಂದ ಅದರ ತೀವ್ರತೆ ಹೆಚ್ಚಾಗಿದೆ. ಈ ಕಾರಣದಿಂದಲೇ ರಾಜ್ಯದ ಎಲ್ಲ ಭಾಗದಲ್ಲೂ ಮಳೆ ಜೋರಾಗಿ ಸುರಿಯುತ್ತಿದೆ.

ಮುಂದಿನ 48 ಗಂಟೆಯಲ್ಲಿ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಈ ಪೈಕಿ ನಾಲ್ಕು ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಾಳೆ ಮೇ 03 ರಂದು ಎಡೆಬಿಡೆದೇ ವ್ಯಾಪಕವಾಗಿ ಮಳೆ ಸುರಿಯಲಿದೆ. ಹೀಗಾಗಿ ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನೂ ಗುರುವಾರ ಮೇ 4ರಂದು ರಾಮನಗರ, ಮೈಸೂರು, ಚಾರಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಗುಡುಗ ಸಹಿತ ಮಳೆ ಅಬ್ಬರಿಸಲಿದೆ. ಹೀಗಾಗಿ ಈ ಮೂರು ಜಿಲ್ಲೆಗಳಿಗೆ ಅಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ, ಕೆಲವೊಮ್ಮೆ ಉತ್ತಮ ಮಳೆ ದಾಖಲಾಗುವ ನಿರೀಕ್ಷೆ ಇದೆ. ಇದರ ಹೊರತು ಯಾವುದೇ ಗಂಭೀರ ಸ್ವರೂಪದ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ರಾಜ್ಯ ಕೇಂದ್ರ ತಿಳಿಸಿದೆ.

ಮಂಡ್ಯ, ಚಾಮರಾಜನಗರದಲ್ಲಿ 9ಸೆಂ.ಮೀ.ಮಳೆ ದಾಖಲು
ಮಂಗಳವಾರ ಬೆಳಗ್ಗೆಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಒಳನಾಡಿನ ಜಿಲ್ಲೆಗಳಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ. ಮಂಡ್ಯದಲ್ಲಿ 11 ಸೆಂಟಿ ಮೀಟರ್, ಕೋಲಾರ ಜಿಲ್ಲೆಯ ಮಾಲೂರು 09 ಸೆಂಟಿ ಮೀಟರ್, ಮೈಸೂರು ಜಿಲ್ಲೆಯ ಸರಗೂರಿನಲ್ಲಿ 07ಸೆಂಟಿ ಮೀಟರ್, ಉಳಿದಂತೆ ಮುದುಗಲ್, ಕೃಷ್ಣರಾಜ ಸಾಗರ, ಕನಕಪುರ, ಹರ್ಧನಹಳ್ಳಿ ಯಲ್ಲಿ ತಲಾ 06 ಸೆಂಟಿ ಮೀಟರ್ ಮಳೆ ಬಿದ್ದ ಬಗ್ಗೆ ವರದಿಯಾಗಿದೆ.
ಮುಂದಿನ ಎರಡು ದಿನ ಬಳಿಕ ರಾಜ್ಯದಲ್ಲಿ ಮಳೆ ಇಳಿಕೆಯಾಗುವ ಲಕ್ಷಣಗಳು ಕಂಡು ಬಂದಿವೆ. ಸದ್ಯ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಬೇರೆಲ್ಲ ಕಡೆಗಳಲ್ಲಿ ಮೋದ ಕವಿದ ಮಳೆಯ ಮತ್ತು ತಂಪು ವಾತಾವರಣವೇ ಕಂಡು ಬಂದಿದೆ.
ಮೇ 6 ರವರೆಗೆ ಬೆಂಗಳೂರಿನಲ್ಲಿ ಮಳೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೇ 6ರವರೆಗೆ ನಿತ್ಯವು ಜೋರು ಮಳೆ ಬರಲಿದೆ. ಬೆಳಗ್ಗೆಯಿಂದ ಬಿಸಿಲು ಕಂಡು ಬಂದರೂ ಸಹ ಸಂಜೆಯಾಗುತ್ತಿದ್ದಂತೆ ಮಬ್ಬು ವಾತವರಣ ಸೃಷ್ಟಿಯಾಗಿ ದಿಢೀರ್ ಮಳೆ ಆರಂಭವಾಗುತ್ತದೆ. ಸಂಜೆ ಆರಂಭವಾಗಿ ರಾತ್ರಿವರೆಗೂ ಮುಂದುವರಿಯಲೂ ಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications