ಕರಾವಳಿ ಜಿಲ್ಲೆಗಳಲ್ಲಿ ಮಳೆ; ಸೆ. 19ರ ತನಕ ಯೆಲ್ಲೊ ಅಲರ್ಟ್
ಬೆಂಗಳೂರು, ಸೆಪ್ಟೆಂಬರ್ 15 : ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19ರ ತನಕ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೂರು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆ. 15 ರಿಂದ 19ರ ತನಕ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ಜೋರಾಗಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಸೋಮವಾರ ಮಂಗಳೂರಿನಲ್ಲಿ 7 ಸೆಂ. ಮೀ. ಮಳೆಯಾಗಿದೆ. ಭಟ್ಕಳ 5, ಕುಂದಾಪುರ 4, ಕಾರವಾರ, ಅಂಕೋಲಾ, ಬೆಳ್ತಂಗಡಿ, ಸುಳ್ಯ, ಭಾಗಮಂಡಲದಲ್ಲಿ 3 ಸೆಂ. ಮೀ. ಮಳೆ ಸುರಿದಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಉತ್ತರ ಒಳನಾಡಿನ ವ್ಯಾಪ್ತಿಯ ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಹೆಚ್ಚು ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ರಸ್ತೆಗಳು ಜಲಾವೃತ : ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಕಲಬುರಗಿ-ಕಾಳಗಿ ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ಮಳೆ ನೀರು ತುಂಬಿಕೊಂಡ ಪರಿಣಾಮ ಕೋರವಾರ-ವಚ್ಛಾ ಸೇತುವೆ ಮುಳುಗಿದೆ.
ಪದವಿ ಪರೀಕ್ಷೆ ಬರೆಯಲು ಕಲಬುರಗಿಗೆ ಹೋಗಬೇಕಿದ್ದ ಹಳ್ಳಿಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ನೌಕರರು ಹೆದ್ದಾರಿಯಲ್ಲಿ ವಾಹನಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ನೀರು ಇಳಿಯದೇ ವಾಹನ ಸಂಚಾರ ಸಾಧ್ಯವಿಲ್ಲ.
ಶಿವಮೊಗ್ಗದ ಭದ್ರಾ ಜಲಾಶಯ ಸೋಮವಾರ ಭರ್ತಿಯಾಗಿದೆ. ಜಲಾಶಯದಿಂದ 1,751 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. 186 ಅಡಿ ನೀರು ಸಂಗ್ರಹ ಸಾರ್ಮರ್ಥ್ಯದ ಜಲಾಶಯ ಭರ್ತಿಯಾಗಿದ್ದು, ನಾಲ್ಕು ಗೇಟ್ ತೆರೆದು ನದಿಗೆ ನೀರು ಬಿಡಲಾಗಿದೆ.












Click it and Unblock the Notifications