Karnataka Rains: ಕರಾವಳಿಗೆ 5 ದಿನ ಮಳೆ ಆರ್ಭಟ, ಮೀನುಗಾರರಿಗೆ ಐಎಂಡಿ ಎಚ್ಚರಿಕೆ
ಬೆಂಗಳೂರು, ಜೂನ್ 26: ಕರ್ನಾಟಕದ ಉತ್ತರದ ಭಾಗಕ್ಕೆ ಅಷ್ಟೇನು ಹೇಳಿಕೊಳ್ಳುವಷ್ಟು ಬಾರದ ಮಳೆ ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಇದೇ ಭಾಗದಲ್ಲಿ ಆಗುತ್ತಿರುವ ಮಳೆ ಜುಲೈ 1ರ ತನಕವೂ ಆರ್ಭಟಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನಪೂರ್ತಿ ಜೋರು ಮಳೆ ದಾಖಲಾಗುತ್ತಿದೆ. ಜುಲೈ 1ರವರೆಗೆ ಈ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ನಾಳೆ ಜೂನ್ 27 ಮತ್ತು 28ರಂದು ಎರಡು ದಿನ 'ಆರೇಂಜ್ ಅಲರ್ಟ್' ಘೋಷಿಸಲಾಗಿದೆ.

ಈ ಮೂರು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ವ್ಯಾಪಿಸಿದೆ. ಒಂದೆರಡು ಕಡೆ ಸಾಮಾನ್ಯವಾಗಿ ಮಳೆ ಆಗಿದ್ದು, ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಧಾರಾಕಾರವಾಗಿ ಅತ್ಯಧಿಕ ಮಳೆ ಬೀಳಲಿದೆ. ಸಮುದ್ರ ತೀರದ ಭಾಗದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಇದು ಕೆಲವೊಮ್ಮೆ ಗರಿಷ್ಠ 55 ಕಿಲೋ ಮೀಟರ್ ವೇಗದಲ್ಲೂ ಬೀಸಬಹುದು. ಈ ಕಾರಣದಿಂದ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಸೂಚಿಸಿದೆ.
ಉತ್ತರ ಒಳನಾಡಿಗೆ ಬಿರುಸು ಮಳೆ ಇಲ್ಲ
ಇದುವರೆಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂತಹ ವ್ಯಾಪಕ ಮಳೆ ಹಿಡುದುಕೊಂಡಿಲ್ಲ. ಆಗಾಗ ಸಾಧಾರಣ, ಒಂದೆಡು ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಇನ್ನು ಹಲವೆಡೆ ಬಿಸಿಲಿನ ಶಾಖ ಹೆಚ್ಚಿದೆ.
ಮುಂದಿನ ಮೂರು ದಿನ ಅಂದರೆ ಜೂನ್ 29ರವರೆಗೆ ಒಳನಾಡಿನ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳು ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ವಿಜಯನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಲಿದೆ.

ಇದೇ ಜಿಲ್ಲೆಗಳಲ್ಲಿ ಜೂನ್ 29ರ ನಂತರ ಎರಡು ದಿನ ಮುಂಗಾರು ಮತ್ತಷ್ಟು ಚುರುಕುಗೊಳ್ಳಲಿದೆ. ಹೀಗಾಗಿ ಈ ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ಯಾವ ಜಿಲ್ಲೆಗಳಿಗೆ ಎಷ್ಟು ಮಳೆ ಬಿದ್ದಿದೆ
ಕಳೆದ 24 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಅಧಿಕ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಹೊನ್ನಾವರ, ಅಂಕೋಲಾ, ಕುಮಟಾ, ಕ್ಯಾಸಲ್ರಾಕ್, ಕಾರವಾರ, ಕೋಟಾ, ಸಿದ್ದಾಪುರ, ಮಂಗಳೂರು ವಿಮಾನ ನಿಲ್ದಾಣ, ಶಿವಮೊಗ್ಗ, ರಾಯಚೂರು, ರಾಮನಗರ ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿದೆ.












Click it and Unblock the Notifications