Karnataka Rain: ಮೇ 13-14ರಂದು ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಕರ್ನಾಟಕದ ಹಲವೆಡೆ ಇಂದೂ ವರುಣನ ಅರ್ಭಟ!
ಬಿಸಿಲ ಬೇಗೆಯಿಂದ ಬಸವಳಿದಿದ್ದ ರಾಜ್ಯದಲ್ಲಿ ಈಗ ಬೇಸಿಗೆ ಮಳೆ ಆರಂಭವಾಗಿದ್ದು, ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕೊಪ್ಪಳ ಹಾಗೂ ದಕ್ಷಿಣ ಕನ್ನಡದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಗುಡುಗು, ಸಿಡಿಲು, ಸಿಡಿಲು, ಬಿರುಗಾಲಿಯಿಂದ ಕೂಡಿದ ಮಳೆಗೆ ಅಪಾರ ಬೆಳೆ ನಷ್ಟವಾಗಿದೆ. ಈ ನಡುವೆ ಮೇ 13 ಹಾಗೂ ಮೇ 14ರಂದು ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು... ಮುಂದಿನ ಮೂರು ದಿನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಣೆ ಮಾಡಿದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಕಳೆದ ಕೆಲ ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಅರ್ಧ ಗಂಟೆ ಕಾಲ ಗುಡುಗು ಗಾಳೀ ಸಹಿತ ಭಾರಿ ಮಳೆಗೆ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ಏಕಾಏಕಿ ವರುಣಾರ್ಭಟಕ್ಕೆ ಬೈಕ್ ಹಾಗೂ ವಾಹನ ಸವಾರರ ಪರದಾಟ ಅನುಭವಿಸುವ ದೃಶ್ಯಗಳು ಕಂಡು ಬಂದಿವೆ.
ಇನ್ನೂ ಚಿಕ್ಕಮಗಳೂರಿನ ಭಾಗದಲ್ಲಿ ಹಲವು ದಿನಗಳಿಂದ ಭಾರಿ ಬಿರುಗಾಳಿ ಜೊತೆಗೆ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರ, ಜಯಪುರ, ಎಸ್ಆರ್ಪುರ, ಬಾಳೆಹೊನ್ನೂರು ಮೂಡಿಗೆರೆ ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.
ಬೆಳಗಾವಿಯಲ್ಲಿ ಕೊಚ್ಚಿ ಹೋದ ಕಾರು
ಕಳೆದ ದಿನ ಶನಿವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಲಕ್ಷ್ಮಿ ಹಳ್ಳ ಏಕಾಏಕಿ ತುಂಬಿ ಹರಿದ ಪರಿಣಾಮ ಎರಡು ಕಾರು, ಒಂದು ಪಿಕಪ್ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಅಲ್ಲಲ್ಲಿ ಮಳೆಯಿಂದಾಗಿ ಅವಾಂತರಗಳು ಸಂಭವಿಸಿವೆ. ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ ಹಾರಿ ಹೋಗಿದೆ. ಅಲ್ಲದೆ ಸವದತಿ ತಾಲೂಕಿನ ಮುನ್ನವಳ್ಳಿ ಪಟ್ಟಣದಲ್ಲಿ ಮಳೆ ಅವಾಂತರಕ್ಕೆ 250ಕ್ಕೂ ಹೆಚ್ಚು ರಸಗೊಬ್ಬರದ ಮೂಟೆಗಳು ಹಾನಿ ಆಗಿವೆ.

ಕೊಪ್ಪಳದಲ್ಲಿ ಬಿರುಗಾಳಿಗೆ ಬಾಳೆ ತೋಟ ನಾಶ
ಇನ್ನೂ ಕೊಪ್ಪಳದಲ್ಲಿ ಬಿರುಗಾಳಿ ಹೊಡೆತಕ್ಕೆ ಬಾಳೆ ತೋಟ, ಲಕ್ಷಾಂತರ ರೂಪಾಯಿ ಆದಾಯ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಒಂದು ಎಕರೆಯಲ್ಲಿ ಬಾಳೆ ಬೆಳೆಯಲು ಸಾಮಾನ್ಯ ಎರಡರಿಂದ ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಂದು ಎಕರೆಯಲ್ಲಿ ಬಾಳೆ ಚೆನ್ನಾಗಿ ಬಂದರೆ, ಏಳರಿಂದ ಎಂಟು ಲಕ್ಷ ರೂಪಾಯಿವರೆಗೆ ಆದಾಯ ಬರುತ್ತದೆ. ಆದರೆ ಈ ಬಾರಿ ಆದಾಯ ಬರೋದು ದೂರದ ಮಾತಾಯ್ತು, ಮಾಡಿದ ಖರ್ಚು ಕೂಡ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಮರ ತೆರವಿಗೆ 39 ತಂಡ ರಚನೆ
ಮಳೆಗಾಲದ ವೇಳೆ ಧರೆಗುರುಳುವ ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು 39 ತಂಡಗಳನ್ನು ಬಿಬಿಎಂಪಿ ನಿಯೋಜಿಸಿದೆ. ಬೆಂಗಳೂರಿನಲ್ಲಿ ಕೆಲ ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹೀಗಾಗಿ ನಗರದಲ್ಲಿ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಹಲವೆಡೆ ಮರಗಳು ಧರೆಗುರುಳಿವೆ.
ಈ ನಿಟ್ಟಿನಲ್ಲಿ ಪಾಲಿಕೆಯ ಅರಣ್ಯ ವಿಭಾಗವು ಮರ ಕಟಾವು ತಂಡಗಳನ್ನು ನಿಯೋಜಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಧರೆಗುರುಳುವ ಮರ, ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ ''ಮರ ಕಟಾವು ತಂಡಗಳು'' ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಮೇ 13-14ರಂದು ಎಲ್ಲೆಲ್ಲಿ ಮಳೆ?
ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸುತ್ತಿದೆ. ಇಂದು (ಮೇ 12) ಬೆಂಗಳೂರು ನಗರ, ಬೆಂಗಳೂರೂ ಗ್ರಾಮೀಣ ಸೇರಿದಂತೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗಲಿದೆ. ಮೇ 13ರಂದು ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾದರೆ ಮೇ 14ರಂದು ಶಿವಮೊಗ್ಗ, ಕೊಡಗು ಮಳೆಯಾಗಲಿದೆ. ಅಲ್ಲದೆ ಮೇ 15ರಂದು ಶಿವಮೊಗ್ಗ, ದಾವರಣಗೆರೆ ಸೇರಿದಂತೆ ಹಲವೆಡೆ ಯೆಲ್ಲೋ ಅಲರ್ಟ್ ಘೋ ಷಿಸಲಾಗಿದೆ.











Click it and Unblock the Notifications