ಡಿಕೆಶಿ ವಿರುದ್ಧದ ತನಿಖೆ: ಯತ್ನಾಳ್, ಸಿಬಿಐ ಮಧ್ಯೆ ಹೊಂದಾಣಿಕೆ?
ಬೆಂಗಳೂರು, ಡಿಸೆಂಬರ್ 07: ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆಯಲಾಗಿದೆ.
ರಾಜ್ಯ ಸಚಿವ ಸಂಪುಟದ ಈ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಯತ್ಬಾಳ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಸಂಜೆ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ. ದಳವಾಯಿ, "ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ. ಆರೋಪಿಯು ಇದೇ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇದೊಂದು ಕಳಂಕಿತ ನಿರ್ಧಾರ. ಈ ನಿರ್ಧಾರಕ್ಕೆ ತಡೆ ನೀಡಬೇಕು" ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, "ಈ ಅರ್ಜಿ ಸಲ್ಲಿಕೆಯ ಹಿಂದೆ ಸಿಬಿಐ ಮತ್ತು ಅರ್ಜಿದಾರರ ಮಧ್ಯೆ ಸೆಟ್-ಅಪ್ (ವ್ಯವಸ್ಥಿತ ಹೊಂದಾಣಿಕೆ) ಆಗಿದೆ" ಎಂದು ಆಕ್ಷೇಪಿಸಿದರು. ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, "ಸೂಕ್ತ ಸಮಯದಲ್ಲಿ ನಾವು ನಮ್ಮ ನಿಲುವು ಪ್ರಕಟಿಸುತ್ತೇವೆ" ಎಂದರು.
ಅರ್ಜಿದಾರರ ಮನವಿ ಪರಿಶೀಲಿಸಿದ ನ್ಯಾಯಪೀಠ, "ನಿಮ್ಮ ಮನವಿ ಕಾನೂನು ಬದ್ಧವಾಗಿರುವುದೇನೊ ನಿಜ. ಆದರೆ, ಇದನ್ನು ನೀವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯಾಪ್ತಿಯಲ್ಲಿ ಪ್ರಶ್ನಿಸಬಹುದಿತ್ತಲ್ಲವೇ?" ಎಂದು ಪ್ರಶ್ನಿಸಿತು.
"ಆದರೂ ಇದರಲ್ಲಿ ನೀವು ಹೇಗೆ ಸಂತ್ರಸ್ತರಾಗುತ್ತೀರಿ. ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಲು ನಿಮಗೇನು ಅಧಿಕಾರವಿದೆ? ಎಂಬುದನ್ನು ಕೋರ್ಟ್ಗೆ ಮನದಟ್ಟು ಮಾಡಿ" ಎಂದು ಸೂಚಿಸಿ ಅರ್ಜಿಯ ವಿಚಾರಣೆಯನ್ನು ಇದೇ ಡಿಸೆಂಬರ್ 15ಕ್ಕೆ ಮುಂದೂಡಿತು.
ಅನುಮತಿ ವಾಪಸ್ ಪಡೆದಿದ್ದ ಸರ್ಕಾರ; ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿದ್ದ ಆದೇಶವನ್ನು 2023ರ ಚುನಾವಣೆ ಬಳಿಕ ಹೊಸದಾಗಿ ಅಧಿಕಾರ ಬಂದ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ.
ಸರ್ಕಾರ 2023ರ ನವೆಂಬರ್ 23ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ವಾಪಸ್ ಪಡೆಯುವ ತೀರ್ಮಾನ ಕೈಗೊಂಡಿತ್ತು. ಅದನ್ನು ಪ್ರಶ್ನಿಸಿ ಯತ್ನಾಳ್, ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆದರೆ ವಿಭಾಗೀಯಪೀಠ ಅವರ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿ, ಸರ್ಕಾರ ಅನುಮತಿ ವಾಪಸ್ ಪಡೆದಿರುವ ಅದೇಶವನ್ನು ಪ್ರಶ್ನಿಸುವಂತೆ ಸೂಚನೆ ನೀಡಿತ್ತು.












Click it and Unblock the Notifications