ಭಾರೀ ಚರ್ಚೆಗೆ ಕಾರಣವಾದ ಸದಾನಂದ ಗೌಡರ ಲಸಿಕೆ ಹೇಳಿಕೆ
ಬೆಂಗಳೂರು, ಮೇ 13; "ಕಂಪನಿಗಳು ಅಗತ್ಯ ಪ್ರಮಾಣದಷ್ಟು ಲಸಿಕೆ ತಯಾರು ಮಾಡದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?" ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ನೀಡಿದ ಹೇಳಿಕೆ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿದೆ.
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡರು, "ಹೈಕೋರ್ಟ್ ನಾಳೆಯೇ ಲಸಿಕೆ ಬೇಕು ಎನ್ನುತ್ತದೆ. ಕಂಪನಿಗಳು ಅಗತ್ಯ ಪ್ರಮಾಣದಷ್ಟು ಲಸಿಕೆ ತಯಾರು ಮಾಡದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ?" ಎಂದು ಹೇಳಿದ್ದರು.
"ಕೇಂದ್ರ ಸರ್ಕಾರ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ರಾಜಕೀಯ ಉದ್ದೇಶಕ್ಕಾಗಿ ಈ ಪರಿಸ್ಥಿತಿಯನ್ನು ಬಳಸಿಕೊಂಡಿಲ್ಲ" ಎಂದು ಹೇಳಿದ್ದರು. ಇದೀಗ ವಕೀಲರೊಬ್ಬರು ಸಚಿವರ ಹೇಳಿಕೆ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಹ ಸಲ್ಲಿಕೆ ಮಾಡಿದ್ದಾರೆ.

ಸಚಿವರು ಹೇಳಿದ್ದೇನು?; "ಲಸಿಕೆ ತಯಾರಿಕೆಗೆ ಕೆಲವು ರಾಷ್ಟ್ರಗಳಿಂದ ಕಚ್ಚಾ ಸಾಮಾಗ್ರಿ ಬರುವುದು ತಡವಾಗಿದ್ದರಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ನಾಳೆ ಲಸಿಕೆಕೊಡಿ ಎಂದು ನ್ಯಾಯಾಲಯ ಹೇಳಿದರೆ ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದರು.
"ಆಮ್ಲಜನಕ ಕೊರತೆ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ರಾಜಕಾರಣ ಬೆರೆಸಬಾರದು. ರಾಜಕಾರಣದಲ್ಲೂ ಅಂತಃಕರಣ ಇದೆ ಎಂದು ತೋರಿಸಬೇಕಾಗಿದೆ" ಎಂದು ಸದಾನಂದ ಗೌಡ ಹೇಳಿದರು.
"ಆರಂಭದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಅಪ ಪ್ರಚಾರದಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಶೇ 52ರಷ್ಟು ಮಂದಿ ಲಸಿಕೆ ತೆಗೆದುಕೊಂಡರು" ಎಂದು ಸಚಿವರು ತಿಳಿಸಿದರು.
"2ನೇ ಅಲೆ ಜೋರಾಯಿತು ಆಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಬಂದರು. ಇದರಿಂದ ಲಸಿಕೆ ಕೊರತೆ ಆಯಿತು. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಹಿನ್ನಡೆ ಆಗಿದೆ. ಕೆಲವೇ ದಿನಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗಲಿದೆ" ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications