ಬಿಲ್ ಕಟ್ಟಂಗಿಲ್ಲ ಅಂತಾ, ಗೃಹಜ್ಯೋತಿ ಯೋಜನೆಗೆ ಷರತ್ತು ಏಕೆ: ಸಿದ್ದು ಸವದಿ
ಬೆಂಗಳೂರು, ಜುಲೈ 14: ಜೂನ್ 13ಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಬರುತ್ತದೆ ಯಾರೂ ಕೂಡ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟಂಗಿಲ್ಲ ಎಂದು ಹೇಳಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂದು ಗೃಹಜ್ಯೋತಿ ಯೋಜನೆಗೆ ಷರತ್ತು ಹಾಕಿ, ಅರ್ಜಿ ಸ್ವೀಕರಿಸಲಾಗುತ್ತಿದೆ. ಅಲ್ಲದೆ ವಿದ್ಯುತ್ ಬೆಲೆ ಏರಿಸಿ ಒಮದು ಕೈಲಿ ಕೊಟ್ಟಂಗೆ ಮಾಡಿ ಇನ್ನೊಂದು ಕೈಯಿಂದ ಕಸಿದುಕೊಳ್ಳುವ ಕೆಲಸ ನಡೆದಿದೆ ಎಂದು ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ವಾಗ್ದಾಳಿ ಮಾಡಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವಿಷಯ ಮಂಡಿಸಿದ ಅವರು, ನೇಕಾರರು ಬಿಲ್ ಕಟ್ಟಲಾಗದೇ ಹೋರಾಡ ನಡೆಸುತ್ತಿದ್ದಾರೆ, 1,500 ಮಾಸಿಕ ಬಿಲ್ 5,000 ರೂಪಾಯಿಗಳಾಗಿದೆ. ಬಡವರಿಗೆ ಈ ರೀತಿ ಮೋಸ ಮಾಡಬೇಡಿ, ಕೊಟ್ಟ ವಚನದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಈ ವೇಳೆ ನಾವು ವಿದ್ಯುತ್ ದರ ಏರಿಸಿಲ್ಲ. ನಿಮ್ಮ ಸರ್ಕಾರವೇ ದರ ಹೆಚ್ಚಿಸಿ ಹೋಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು. ಅದಕ್ಕೆ ವಿದ್ಯುತ್ ದರವನ್ನು ಕಡಿಮೆ ಮಾಡಿ ಎಂದು ಆಗ್ರಹಿಸಿದರು. ಆದರೆ ನಾವು ಹೇಳಿದ್ದನು ಮಾಡಿದ್ದೇವೆ ಎಂದು ಜಾರ್ಜ್ ಸಮರ್ಥಿಸಿಕೊಂಡರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೆ ತಡೆ ನೀಡಲಾಗಿದೆ, ಅನೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಇದರಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಹೀಗಾಗಿ ತಡೆ ಹಿಡಿದ್ದದನ್ನು ಮುಂದುವರೆಸಿ, ಸೇಡಿನ ರಾಜಕಾರಣ ಮಾಡಬೇಡಿ ಎಂದು ಮನವಿ ಮಾಡಿದರು.
ಮುಂದುವರೆದು ಕೈಮಗ್ಗ ಅಭಿವೃದ್ಧಿ ನಿಗಮ ವಿಚಾರ ಪ್ರಸ್ತಾಪಿಸಿದ ಸವದಿ ನೇಕಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇಡೀ ಕುಟುಂಬ ದಿನವೀಡಿ ದುಡಿದರೂ ತಿಂಗಳೀಗೆ 4ರಿಂದ 5 ಸಾವಿರ ಹಣ ಬರುತ್ತದೆ. ಅಂತಹದ್ದರಲ್ಲಿ ಸರ್ಕಾರ ವಿದ್ಯಾವಿಕಾಸ ಯೋಜನೆಗೆ ಸಮವಸ್ತ್ರ ಪೂರೈಕೆಯನ್ನು ನೇಕಾರರಿಂದ ತಪ್ಪಿಸಿ ಮಾರ್ವಾಡಿಗೆ ಕೊಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಕೈಮಗ್ಗ ನಿಗಮದಿಂದ ಪೂರೈಕೆ ಮಾಡಲಾದ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಿ ನಿಗಮದ ವ್ಯವಸ್ಥಾಪಕರ ಮೇಲೆ ಮೊಕದ್ದಮೆ ಹೂಡಲಾಗಿದೆ. ಶಿಕ್ಷಣ ಇಲಾಖೆಯವರು ಸ್ಯಾಂಪಲ್ ಪಡೆದೇ ನಂತರ ಸರಬರಾಜು ಆದೇಶ ನೀಡಿರುತ್ತಾರೆ. ಈಗ ಮಾರ್ವಾಡಿಯನ್ನು ಉದ್ಧಾರ ಮಾಡುವ ಉದ್ದೇಶದ ಹಿಡೆನ್ ಅಜೇಂಡಾ ಇಟ್ಟುಕೊಂಡು ನಿಗಮದ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದರು.
ನೇಕಾರರಿಗೆ ಅಕುಕೂಲ ಮಾಡಿಕೊಡಲು ಶಿಕ್ಷಣ, ಆರೋಗ್ಯ, ಅಗ್ನಿಶಾಮಕ, ಅರಣ್ಯ ಇಲಾಖೆಗೆ ಬೇಕಾಗುವ ಸಮವಸ್ತ್ರವನ್ನು ಕೈಮಗ್ಗ ನಿಗಮದಿಂದ ತರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು. ಜೊತೆಗೆ ನಾನು ಸಚಿವನಾದ ಮೇಲೆ ಕೈಮಗ್ಗ ನಿಗಮದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶ ನೀಡಿಲ್ಲ. ಯಾವ ಇಲಾಖೆಯಿಂದ ಕ್ರಮ ಆಗಿದೆ ಎಂದು ತಮಗೆ ಗೊತ್ತಿರಬಹುದು ಎಂದು ಸಚಿವರು ಸವದಿಯವರನ್ನು ಉದ್ದೇಶಿಸಿ ಹೇಳಿದರು.












Click it and Unblock the Notifications