ಕೋಲಾರದಲ್ಲಿ ಸಿದ್ದರಾಮಯ್ಯ ಅಲ್ಲ, ರಾಹುಲ್ ಗಾಂಧಿ ಸ್ಪರ್ಧಿಸಿದರೂ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವುದು: ಸಂಸದ ಮುನಿಸ್ವಾಮಿ
ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಇಲ್ಲಿ ಸಿದ್ದರಾಮಯ್ಯ ಅಲ್ಲ ಸ್ವತಹ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಇಲ್ಲಿ ಸ್ಪರ್ಧಿಸಿದರೂ ಸರಿ, ಈ ಬಾರಿ ನಮ್ಮ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲ್ಲುವುದು ಶತಸಿದ್ಧ ಎಂದು ಸಂಸದ ಎಸ್.ಮುನಿಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಭಾನುವಾರ ವಕ್ಕಲೇರಿ ಗ್ರಾಮದಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಕಾಲ ವರ್ತೂರು ಪ್ರಕಾಶ್ ರವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳು ಅವರಿಗೆ ಶ್ರೀರಕ್ಷೆ ಆಗಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಖಂಡಿತ ಗೆಲುವನ್ನು ಸಾಧಿಸುತ್ತಾರೆ. ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿ ಈಗ ಕೋಲಾರಕ್ಕೆ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರಾದ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕಿತ್ತು. ಆದ್ರೆ ಅವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದರು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆರವರನ್ನು ಸೋಲಿಸಿದರು. ಅವರದೆ ಸಮಾಜದವರಾದ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಇವರನ್ನೆಲ್ಲ ಹಾಳು ಮಾಡಿ ಬರುತ್ತಿರುವ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಕೋಲಾರದ ಜನ ನಿಮ್ಮನ್ನು ಸೋಲಿಸುತ್ತಾರೆ ಎಂದರು.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಹಿಂದಪರ ಮತ್ತು ದಲಿತಪರ ಆಡಳಿತ ನೀಡುತ್ತಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಆಗಮನದಿಂದ ಆನೆ ಬಲ ಬಂದಂತಾಗಿದೆ. ಮುಂಬರುವ ದಿನಗಳಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತ ಎಂದು ಸಂಸದ ಮುನಿಸ್ವಾಮಿ ಅವರು ಅಭಿಪ್ರಾಯಪಟ್ಟರು.

ಅಧಿಕಾರ ಇಲ್ಲದಿದ್ದರೂ 10 ಕೋಟಿ ಹಣ ಕೋಲಾರ ಕ್ಷೇತ್ರಕ್ಕೆ ತಂದಿದ್ದೇನೆ: ವರ್ತೂರು ಪ್ರಕಾಶ್
ಇನ್ನು ಸಮಾರಂಭದ ಕೇಂದ್ರ ಬಿಂದುವಾಗಿದ್ದ ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ಮಾತನಾಡಿ, ವಕ್ಕಲೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳು ಬೇಕಾದಷ್ಟು ಇದ್ದು, ಗ್ರಾಮಸ್ಥರು ನನಗೆ ಮನವಿ ಮಾಡಿದ್ದಾರೆ. ನನಗೆ ಅಧಿಕಾರ ಇಲ್ಲದಿದ್ದರೂ ಕೂಡ ಬಸವರಾಜ್ ಬೊಮ್ಮಾಯಿ ಅವರ ಬಳಿ 10 ಕೋಟಿ ಹಣ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ. ಸಂಸದರ ಅನುದಾನದ ಅಡಿಯಲ್ಲಿ ಸುಮಾರು 10 ಲಕ್ಷ ರೂಗಳ ಕಾಮಗಾರಿಯನ್ನು ಮಾಡಿಸಿಕೊಡುತ್ತೇನೆ. ಈ ಮೊದಲು ನಾನು ಅಧಿಕಾರದಲ್ಲಿದ್ದಾಗ ಮಾಡಿದ ಜನಸೇವೆ ಕಾರ್ಯಗಳು ಈಗಲೂ ನಿಮ್ಮೆಲ್ಲರ ಕಣ್ಣಮುಂದೆ ಇದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರವು ಯಾವುದೇ ರೀತಿಯ ಅಭಿವೃದ್ಧಿಯಾಗದೆ ಇರುವುದು ನಿಜಕ್ಕೂ ಶೋಚನೀಯ ಸಂಗತಿ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ನಿಮಗೆ ಸೇವೆ ಮಾಡಲು ಅವಕಾಶ ಕೊಡಿ ನಾನು ನಿಮ್ಮ ಮನೆ ಮಗನಾಗಿ ನಿಮ್ಮ ಮನೆ ಸೇವಕನಾಗಿ ಹಗಲಿರಳು ದುಡಿಯುತ್ತೇನೆ ಎಂದು ಮನವಿ ಮಾಡಿದರು.












Click it and Unblock the Notifications