BJP ಸರ್ಕಾರ ಬಂದರೆ ಅನರ್ಹತೆ ರದ್ದಾಗುತ್ತದೆಯೇ? ಅತೃಪ್ತರ ಹಣೆಬರಹ ಏನಾಗುತ್ತದೆ?
Recommended Video
ಬೆಂಗಳೂರು, ಜುಲೈ 25: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಮೂರು ಜನ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹಗೊಳಿಸಿದ್ದಾರೆ.
ಇಂದು ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರಮೇಶ್ ಕುಮಾರ್ ಅವರು, ರಾಣೆಬೆನ್ನೂರು ಶಾಸಕ ಆರ್.ಶಂಕರ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಗೋಖಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ.
ಆದರೆ ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ವಿಷಯವಾಗಲಿ ಅಥವಾ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಷಯವಾಗಿ ಆಗಲಿ ಯಾವುದೇ ನಿರ್ಣಯವನ್ನು ಇಂದು ಪ್ರಕಟಿಸಿಲ್ಲ, ಬದಲಿಗೆ ಕೆಲವೇ ದಿನಗಳ ಒಳಗಾಗಿ ಪ್ರಕಟ ಮಾಡುತ್ತೇನೆಂದು ಹೇಳಿದ್ದಾರೆ.

ಶಾಸಕರ ಅನರ್ಹತೆ ರದ್ದಾಗುತ್ತದೆಯೇ?
ಆದರೆ ಇಲ್ಲಿ ಪ್ರಮುಖ ಪ್ರಶ್ನೆಯೊಂದು ಎದುರಾಗಿದ್ದು, ಮೈತ್ರಿ ಸರ್ಕಾರ ಪತನವಾಗಿದ್ದು, ಯಡಿಯೂರಪ್ಪ ಅವರು ಕೆಲವೇ ದಿನಗಳಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಸ್ಪೀಕರ್ ಬದಲಾದರೆ ಮೂವರು ಶಾಸಕರ ಅನರ್ಹತೆ ರದ್ದಾಗುತ್ತದೆಯೇ? ಹಾಗೂ ಇನ್ನುಳಿದ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಿ ಅವರು ಅನರ್ಹತೆಯಿಂದ ತಪ್ಪಿಸಿಕೊಂಡು ಸುಲಭವಾಗಿ ಬಿಜೆಪಿ ಸೇರಿಬಿಡುತ್ತಾರೆಯೇ?

ಅನರ್ಹತೆ ರದ್ದು ಯಾರಿಂದ ಸಾಧ್ಯ?
ಅನರ್ಹತೆ ರದ್ದಾಗುವುದು ಅಸಾಧ್ಯ ಎಂದು ಸುಲಭದ ಗ್ರಹಿಕೆ ಹಾಗೂ ಇದನ್ನು ಸ್ಪೀಕರ್ ಸಹ ಖಚಿತಪಡಿಸಿದ್ದಾರೆ. ಅನರ್ಹತೆ ರದ್ದು ಸುಪ್ರೀಂಕೋರ್ಟ್ ಕೈಯಲ್ಲಿ ಮಾತ್ರವೇ ಇದೆ. ಎರಡನೇ ಪ್ರಶ್ನೆಗೆ ಉತ್ತರಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರು. 'ಹೊಸ ಸರ್ಕಾರ ಬಂದಕೂಡಲೇ ಸ್ಪೀಕರ್ ಬದಲಾಗಿಬಿಡುವುದಿಲ್ಲ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರಷ್ಟೆ ಬದಲಾವಣೆ ಸಾಧ್ಯ, ಇಲ್ಲದಿದ್ದರೆ ಹೊಸ ಸರ್ಕಾರದ ಸದಸ್ಯರು ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡು ಹೊಸ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಸಿದರೆ ನಾನು ಸ್ಥಾನದಿಂದ ಕೆಳಗೆ ಇಳಿಯಬೇಕಾಗುತ್ತದೆ' ಎಂದು ಸ್ಪಷ್ಟಪಡಿಸಿದರು.

ಹೊಸ ಸರ್ಕಾರ ಬಂದರೆ ರಮೇಶ್ ಕುಮಾರ್ ರಾಜೀನಾಮೆ?
ಆದರೆ ತಾವು ಆ ವರೆಗೂ ಕಾಯುವುದಿಲ್ಲವೆಂದು ಹೇಳಿದ ರಮೇಶ್ ಕುಮಾರ್, ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ರಾಜೀನಾಮೆ ನೀಡುವ ಸೂಚನೆಯನ್ನು ನೀಡಿದರು. ಬಿಜೆಪಿಯ ಸುರೇಶ್ ಕುಮಾರ್ ಅವರು ಕಳೆದ ಬಾರಿಯೇ ಸ್ಪೀಕರ್ ಆಗಲು ಉದ್ದೇಶಿಸಿದ್ದರು, ಆದರೆ ಕೊನೆಯ ಘಳಿಗೆಯಲ್ಲಿ ನಾಮಪತ್ರ ಹಿಂಪಡೆದರು.

ಸರ್ಕಾರ ರಚನೆ ವಿಳಂಬವಾದರೆ ಅತೃಪ್ತರಿಗೆ ಸಂಕಷ್ಟ
ಸರ್ಕಾರ ರಚನೆ ವಿಳಂಬವಾದರೆ ಉಳಿದ ಅತೃಪ್ತ ಶಾಸಕರ ಹಣೆಬರಹವನ್ನು ರಮೇಶ್ ಕುಮಾರ್ ಅವರೇ ನಿರ್ಧಾರ ಮಾಡುತ್ತಾರೆ. ಅಕಸ್ಮಾತ್ ಸರ್ಕಾರ ಬೇಗನೇ ರಚನೆಯಾಗಿ ಸ್ಪೀಕರ್ ಬದಲಾಗಿ ಬಿಜೆಪಿಯವರೇ ಸ್ಪೀಕರ್ ಆದಲ್ಲಿ ಉಳಿದ ಅತೃಪ್ತ ಶಾಸಕರಿಗೆ ವರವಾಗುವ ಸಂಭವ ಇದೆ. ಎರಡೂ ಆಗದೆ ವಿಧಾನಸಭೆಯೇ ವಿಸರ್ಜನೆ ಆದಲ್ಲಿ ಎಲ್ಲ ರಾಜೀನಾಮೆ, ಅನರ್ಹತೆಯೂ ರದ್ದಾಗಿ, ಹೊಸದಾಗಿ ಎಲ್ಲರೂ ಯಾವುದೇ ಕಾನೂನು ತೊಡಕುಗಳಿಲ್ಲದೆ ಚುನಾವಣೆಗೆ ಹೋಗಬಹುದಾಗಿರುತ್ತದೆ.












Click it and Unblock the Notifications