ಪತಿಯ ಅನೈತಿಕ ಕೆಲಸಗಳಿಗೆ IAS ಅಧಿಕಾರಿ ರೋಹಿಣಿ ಸಿಂಧೂರಿ ಬೆಂಬಲ: ತನಿಖೆಗೆ ಒಳಪಡಿಸಿ ಎಂದ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 05: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಹಾಯದಿಂದ ತಮಗೆ ಸೇರಿದ ಬೆಂಗಳೂರಿನ ಆಸ್ತಿಯನ್ನು ಭೂ ಮಾಫಿಯಾ 'ಅಕ್ರಮವಾಗಿ ಅತಿಕ್ರಮಿಸಿದೆ' ಎಂದು ಗಾಯಕ ಲಕ್ಕಿ ಅಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದೆ.
ರೋಹಿಣಿ ಸಿಂಧೂರಿ ಸಹಾಯದೊಂದಿಗೆ ಬೆಂಗಳೂರಿನ ಆಸ್ತಿ ಅತಿಕ್ರಮಣ: ಐಎಎಸ್ ಅಧಿಕಾರಿ ಪತಿ ವಿರುದ್ಧ ಗಾಯಕ ಲಕ್ಕಿ ಅಲಿ ಆರೋಪ
'ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಲ್ಯಾಂಡ್ ಮಾಫಿಯಾದವರಿಗೆ ಬೆಂಬಲವಾಗಿದ್ದಾರೆಯೇ? IAS ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಪತಿಯ ಅನೈತಿಕ ಕೆಲಸಗಳಿಗೆ ಸಹಕರಿಸುತ್ತಿರುವುದನ್ನು ತನಿಖೆಗೆ ಒಳಪಡಿಸಿ. ಡಿಜಿಪಿ ಅವರೇ, ತಮ್ಮ ಇಲಾಖೆ ಕಾನೂನು ಪಾಲಿಸುತ್ತಿದೆಯೋ? ಅಥವಾ ಮಾಫಿಯಾವನ್ನು ಪಾಲನೆ ಮಾಡುತ್ತಿದೆಯೋ' ಎಂದು ಕಾಂಗ್ರೆಸ್ ಕೇಳಿದೆ.
'IAS ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಪತಿಯ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆಯ ಕೆಲಸಗಳಿಗೆ ಸಹಕರಿಸುತ್ತಿರುವ ಆರೋಪ ಕೇಳಿ ಬಂದಿದೆ. ಬಸವರಾಜ ಬೊಮ್ಮಾಯಿ ಅವರೇ, ತಮ್ಮ ಸರ್ಕಾರ ರೌಡಿಸಂ, ಲ್ಯಾಂಡ್ ಮಾಫಿಯಾ, 40 ಪರ್ಸೆಂಟ್ ಕಮಿಷನ್ಗಳಲ್ಲೇ ಮುಳುಗಿದ್ದರೂ ಯಾವೊಂದು ಸಂಗತಿಯೂ ತಮ್ಮ ಗಮನಕ್ಕೆ ಬರಲಿಲ್ಲವೇ? ಅಥವಾ ಎಲ್ಲವೂ ನಿಮ್ಮ ಅಣತಿಯಲ್ಲೇ ನಡೆಯುತ್ತಿದೆಯೇ' ಎಂದು ಕೆಪಿಸಿಸಿ ಕೇಳಿದೆ.
ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ರೆಡ್ಡಿ ವಿರುದ್ಧ ಟ್ವೀಟ್ ಮಾಡಿರುವ ಗಾಯಕ ಲಕ್ಕಿ ಅಲಿ, 'ಬೆಂಗಳೂರು ಭೂ ಮಾಫಿಯಾದಲ್ಲಿ ಸಕ್ರಿಯರಾಗಿರುವ ಸುಧೀರ್ ರೆಡ್ಡಿ(ಸಿಂಧೂರಿ ಪತಿ) ಮತ್ತು ಮಧು ರೆಡ್ಡಿ(ಸಿಂಧೂರಿ ಸೋದರ ಮಾವ) ಅವರು ನನ್ನ ಟ್ರಸ್ಟ್ ಜಮೀನನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ತಮ್ಮ ಪತ್ನಿ ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿ ನೆರವಿನೊಂದಿಗೆ ಸುದೀರ್ ರೆಡ್ಡಿ ಈ ಅಕ್ರಮ ಎಸಗಿದ್ದಾರೆ' ಎಂದು ಆರೋಪಿಸಿದ್ದಾರೆ.
ಈ ಕಾನೂನುಬಾಹಿರ ಚಟುವಟಿಕೆಗೆ ಕಡಿವಾನ ಹಾಕುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕನ್ನು ಲಕ್ಕಿ ಅಲಿ ಒತ್ತಾಯಿಸಿದ್ದಾರೆ.