ಹಾಸನ ಡಿಸಿ: ಚೈತ್ರ ಸ್ಥಾನಕ್ಕೆ ರೋಹಿಣಿ ಸಿಂಧೂರಿ ವರ್ಗ
ಹಾಸನ, ಜುಲೈ 13: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಹಾಸನದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರ ಸಂಜೆ ಪ್ರಕಟಿತ ಆದೇಶದಂತೆ ಎಂಟು ಐಎಎಸ್ ಸೇರಿ ಹತ್ತು ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹಾಸನ ಜಿಲ್ಲಾಧಿಕಾರಿಯಾಗಿದ್ದ ವಿ ಚೈತ್ರಾ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಲಾಗಿದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಹಾಸನದ ಡಿಸಿಯಾಗಿ ಚೈತ್ರಾ ಅವರು ವರ್ಗಾವಣೆಗೊಂಡಿದ್ದರು.
ಉಳಿದಂತೆ ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ಇಲಾಖೆಯ ವಿವರ:
* ರೇಣುಕಾ ಚಿದಂಬರಂ -ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ(ವಿಷನ್ 2025 ಸಿಇಒ ಹೆಚ್ಚುವರಿ ಹೊಣೆ)
* ವಿ. ಚೈತ್ರ-ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕಿ.
* ಎಂ.ಎಸ್ ಶ್ರೀಕರ-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪಾನೀಯ ನಿಗಮ( ಒಎಸ್ಡಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಹೊಣೆ).
* ರೋಹಿಣಿ ಸಿಂಧೂರಿ ದಾಸರಿ-ಜಿಲ್ಲಾಧಿಕಾರಿ, ಹಾಸನ.
* ನಿತೇಶ್ ಪಾಟೀಲ್-ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ(ಜಾರಿ)
* ಚಾರುಲತಾ ಸೋಮಲ್- ಉಪ ಕಾರ್ಯದರ್ಶಿ, ಮುಖ್ಯಮಂತ್ರಿ ಸಚಿವಾಲಯ,
*ಎಂ ವಿ ಸಾವಿತ್ರಿ-ಹೆಚ್ಚುವರಿ ಆಯುಕ್ತರು (ಕಲ್ಯಾಣ), ಬಿಬಿಎಂಪಿ
* ವಿಪಿ ಇಕ್ಕೇರಿ- ವ್ಯವಸ್ಥಾಪಕ ನಿರ್ದೇಶಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
* ಕೆ ಜ್ಯೋತಿ(ಕೆಎಎಸ್), ಉದ್ಯೋಗ ಮತ್ತು ತರಬೇತಿ ಇಲಾಖೆ
* ಅಸ್ರಫುಲ್ ಹಸನ್(ಕೆಎಎಸ್)-ವ್ಯವಸ್ಥಾಪಕ ನಿರ್ದೇಶಕ, ವೃತ್ತಿ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮ.

ವಿಎಸ್ ಚೈತ್ರಗೆ ಸನ್ಮಾನ ಅಮೇಲೆ ನಿರ್ಗಮನ
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರದಂದು ಜಿಲ್ಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಭೆ ನಡೆಸಲಾಯಿತು. ಇದೇ ವೇಳೆ ವರ್ಗಾವಣೆ ಆದೇಶವೂ ಹೊರ ಬಂದಿತು. ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ತಮ್ಮ ನಿರ್ಗಮನದ ಸುದ್ದಿಯನ್ನು ಮಾಧ್ಯಮದವರಿಗೆ ಚೈತ್ರಾ ಅವರು ಖಚಿತಪಡಿಸಿದ್ದಾರೆ.

ಉತ್ತಮ ಅನುಭವ ನೀಡಿದ ಜಿಲ್ಲೆ
ಹಾಸನ ಜಿಲ್ಲೆಯಲ್ಲಿ ಈವರೆಗೆ ಕೈಗೊಂಡಿರುವ ಕೆಲಸ ತೃಪ್ತಿಕರವಾಗಿತ್ತು. ಇನ್ನೂ ಹತ್ತು ದಿನ ಕಳೆದಿದ್ದರೆ ಹಾಸನ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಕಳೆಯುತ್ತಿತ್ತು. ಸರ್ಕಾರ ವರ್ಗಾವಣೆ ಮಾಡಿರುವುದರಿಂದ ಅನಿವಾರ್ಯವಾಗಿ ನಿರ್ಗಮಿಸಬೇಕಿದೆ. ವರ್ಗಾವಣೆ ಕಾರಣ ನನಗೂ ಗೊತ್ತಿಲ್ಲ. ಇಲ್ಲಿಂದ ಒಳ್ಳೆ ನೆನಪು ಹೊತ್ತುಕೊಂಡು ಹೋಗುತ್ತಿದ್ದೇನೆ. ಸಮಾಜ ಕಲ್ಯಾಣಾ ಇಲಾಖೆ ಅಡಿಯಲ್ಲಿರುವ ವಸತಿ ಶಾಲೆ ಸಂಸ್ಥೆ ನಿರ್ದೇಶಕಿಯಾಗಿ ಹೋಗುತ್ತಿದ್ದೇನೆ ಎಂದು ಚೈತ್ರಾ ಪ್ರತಿಕ್ರಿಯಿಸಿದ್ದಾರೆ.

ರೋಹಿಣಿ ಸಿಂಧೂರಿ
ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದವರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಅಪ್ಲಿಕೇಷನ್ ಎಂ -ಆಸ್ತಿ ಅಪ್ಲಿಕೇಷನ್ ಹೊರ ತಂದರು. ಇದನ್ನು ಬಳಸಿಕೊಂಡು ಸುಲಭವಾಗಿ ಇ ಖಾತಾವನ್ನು ಪಡೆದುಕೊಳ್ಳಬಹುದು

ಶೌಚಾಲಯ ನಿರ್ಮಾಣ
ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಹೊಸ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ ರೋಹಿಣಿ ಅವರು ಮಾನ್ಯತೆ ಗಳಿಸಿದರು
ಪ್ರತಿಯೊಂದು ಕುಟುಂಬವೂ ಕಡ್ಡಾಯವಾಗಿ ನಿರ್ಮಿಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕು. ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದರು. ಮಂಡ್ಯ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂತರ ಆಹಾರ ಇಲಾಖೆಯಲ್ಲಿದ್ದ ರೋಹಿಣಿ ಸಿಂಧೂರಿ ಅವರು ಸದ್ಯ ರಜೆಯಲ್ಲಿದ್ದರು.












Click it and Unblock the Notifications