ಸಂಪುಟ ವಿಸ್ತರಣೆಯ ಬೆನ್ನಲ್ಲೇ ರೇಣುಕಾಚಾರ್ಯ ಮಾಡಿದ ಶಪಥ
ಬೆಂಗಳೂರು, ಫೆ 6: ಹತ್ತು ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ, ಕಾರ್ಯಕರ್ತರ ಜಯಘೋಷದೊಂದಿಗೆ ರಾಜಭವನದಲ್ಲಿ ಮುಕ್ತಾಯಗೊಂಡಿದೆ.
ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದ ಮೂಲ ಬಿಜೆಪಿಗರು ಸದ್ಯಕ್ಕೆ ತಣ್ಣಗಿದ್ದಾರೆ. ಯಡಿಯೂರಪ್ಪನವರಿಗೆ ಸುಮ್ಮನೆ ಒತ್ತಡ ಹೇರಿ ಪ್ರಯೋಜನವಿಲ್ಲ ಎನ್ನುವ ಕಾರಣವೂ ಇರಬಹುದು ಅಥವಾ ಅಶಿಸ್ತನ್ನು ಸಹಿಸುವುದಿಲ್ಲ ಎನ್ನುವ ವರಿಷ್ಠರ ಎಚ್ಚರಿಕೆಯೂ ಕಾರಣವಾಗಿರಬಹುದು.
ಸಿ.ಪಿ.ಯೋಗೀಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದ, ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಶಪಥವೊಂದನ್ನು ಮಾಡಿದ್ದಾರೆ.

ರಾಜಭವನದಲ್ಲಿ ಮಾತನಾಡುತ್ತಿದ್ದ ರೇಣುಕಾಚಾರ್ಯ, "ನನಗೆ ಸಚಿವ ಸ್ಥಾನ ಬೇಡ. ನಾನು, ಇನ್ಯಾವತ್ತೂ ಮಂತ್ರಿ ಸ್ಥಾನವನ್ನು ಕೇಳುವುದಿಲ್ಲ" ಎನ್ನುವ ಮಾತನ್ನು ಹೇಳಿದ್ದಾರೆ. ಹಿಡಿದ ಕೆಲಸ ಕೈಗೂಡಿತು ಎನ್ನುವ ಖುಷಿ ಅವರ ಮುಖದಲ್ಲಿ ಇದ್ದಂತಿತ್ತು.
ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಲೇಬೇಕು ಎಂದು ಹಠ ಹಿಡಿದಿದ್ದ ರೇಣುಕಾಚಾರ್ಯ, ಸಂಪುಟದಲ್ಲಿ ಯೋಗೀಶ್ವರ್ ಕೂಡಾ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿಬಂದ ಕೂಡಲೇ ಏಕ್ ಧಂ ರೆಬೆಲ್ ಆಗಿದ್ದರು. ಕೊನೆಯ ಕ್ಷಣದಲ್ಲಿ ಬಿಜೆಪಿ, ಯೋಗೀಶ್ವರ್ ಹೆಸರನ್ನು ಕೈಬಿಟ್ಟಿತ್ತು.
ಯೋಗೀಶ್ವರ ಪರ ಲಾಬಿ ಮಾಡಿದ್ದ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರಿಗೆ ನೀವೇ ಸಚಿವಸ್ಥಾನ ಬಿಟ್ಟು ಕೊಡಬಹುದಲ್ಲವೇ ಎಂದು ನೇರವಾಗಿ ರೇಣುಕಾಚಾರ್ಯ ಹೇಳಿದ್ದರು.












Click it and Unblock the Notifications