ರವಿ ಬೆಳಗೆರೆ ಶಿಕ್ಷೆಗೂ ನನಗೂ ಸಂಬಂಧವಿಲ್ಲ: ಕಿಮ್ಮನೆ ರತ್ನಾಕರ
ಬೆಂಗಳೂರು, ಜೂನ್ 28: ಯಲಹಂಕ ವಾಯ್ಸ್ ನ ಅನಿಲ್ ರಾಜ್ ಪ್ರಕರಣದಲ್ಲಿ ಶಿಕ್ಷೆಗೆ ಶಿಫಾರಸು ಮಾಡಿದ್ದು ನಾನೇ. ಅದರೆ ರವಿ ಬೆಳಗೆರೆ ಅವರ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅನಿಲ್ ರಾಜ್ ಅವರು ಯಲಹಂಕ ಶಾಸಕರ ವಿರುದ್ಧ ಪತ್ರಿಕೆಯಲ್ಲಿ ಬರೆದ ಪ್ರತಿ ಪದ ಹಾಗೂ ವಾಕ್ಯ ಗಮನಿಸಿದರೆ ಯಾರಿಗಾದರೂ ಶಿಕ್ಷೆ ವಿಧಿಸಬೇಕು ಅನ್ನಿಸುತ್ತೆ ಎಂದರು ಕಿಮ್ಮನೆ ರತ್ನಾಕರ್.
ಕರ್ನಾಟಕ ವಿಧಾನಮಂಡಲದಿಂದ ಇಬ್ಬರು ಪತ್ರಕರ್ತರಿಗೆ (ರವಿ ಬೆಳಗೆರೆ ಹಾಗೂ ಅನಿಲ್ ರಾಜ್) ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಈ ಪ್ರಕರಣದ ವಿಚಾರಣೆಗಾಗಿ ರಚಿಸಿದ್ದ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿದ್ದವರು ಮಾಜಿ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ.
ಅಂದಹಾಗೆ, ಕರ್ನಾಟಕ ವಿಧಾನ ಮಂಡಲದ ಈ ತೀರ್ಪಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತೀರ್ಮಾನ ವಾಪಸ್ ಪಡೆಯಬೇಕು ಎಂದಿದ್ದಾರೆ. ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಅವರು ಕೂಡ ಈ ತೀರ್ಪಿನ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ.
ಇಂಥದ್ದೊಂದು ತೀರ್ಮಾನಕ್ಕೆ ಬರಲು ಕಾರಣವೇನು ಹಾಗೂ ಶಿಕ್ಷೆಗೊಳಗಾದವರ ಪಾಲಿನ ಮುಂದಿನ ಆಯ್ಕೆಗಳೇನು ಎಂಬುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿದ್ದ ಕಿಮ್ಮನೆ ರತ್ನಾಕರ ಆವರು ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ನಿಮ್ಮ ಮುಂದಿದೆ.

ನ್ಯಾಯಾಂಗ-ಶಾಸಕಾಂಗ
ಪ್ರಶ್ನೆ: ಈ ರೀತಿ ಶಿಕ್ಷೆ ವಿಧಿಸುವುದು ನ್ಯಾಯಾಂಗದ ಜವಾಬ್ದಾರಿ. ಶಾಸಕಾಂಗ ಹಾಗೂ ನ್ಯಾಯಾಂಗದ ಬಗೆಗಿನ ಈ ಚರ್ಚೆ ಬಗ್ಗೆ ಏನಂತೀರಿ?
ಉತ್ತರ: ವಿಧಾನ ಮಂಡಲದಲ್ಲಿನ ಎಲ್ಲ ನಿರ್ಧಾರಗಳನ್ನು ಕೋರ್ಟ್ ಗಳಲ್ಲಿ ಪ್ರಶ್ನಿಸಲು ಆರಂಭಿಸಿ ಬಿಟ್ಟರೆ ಆಡಳಿತ ನಡೆಸುವುದು ಹೇಗೆ ಹೇಳಿ? ಆದ್ದರಿಂದಲೇ ಸಂಸತ್ ಹಾಗೂ ವಿಧಾನ ಮಂಡಲಕ್ಕೆ ಅದರದೇ ಕೆಲವು ಹಕ್ಕುಗಳಿವೆ. ಸದನದೊಳಗೆ ಸ್ಪೀಕರ್ ಆದೇಶ ಕೊಟ್ಟರೆ ಅದನ್ನು ಪ್ರಶ್ನಿಸುವಂತಿಲ್ಲ. ಅದಕ್ಕೆ ಸಂವಿಧಾನದಲ್ಲೇ ಅವಕಾಶ ಇದೆ.
ಸದನದ ಹಕ್ಕನ್ನು ಪ್ರಶ್ನಿಸುವುದೋ ಅಥವಾ ಹಸ್ತಕ್ಷೇಪ ಮಾಡುವುದಕ್ಕೋ ಅವಕಾಶ ಇಲ್ಲ. ಹಾಗೆಯೇ ಸದಸ್ಯರಿಗೂ ಕೆಲವು ರಕ್ಷಣೆಯನ್ನು ಕೊಡಲಾಗಿದೆ. ಈ ಪ್ರಕರಣಗಳು ಅದರ ಅಡಿಯಲ್ಲಿ ಬರುತ್ತವೆ.

ಈ ತೀರ್ಮಾನಕ್ಕೆ ಕಾರಣ
ಪ್ರಶ್ನೆ: ನೀವು ಹಕ್ಕು ಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿದ್ದವರು. ಇಂಥ ತೀರ್ಮಾನ ಕೈಗೊಳ್ಳಲು ಕಾರಣ ಏನು?
ಉತ್ತರ: ರವಿ ಬೆಳಗೆರೆ ಅವರ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ವರದಿ ಸಲ್ಲಿಸಿದ್ದು ಯಲಹಂಕ ವಾಯ್ಸ್ ಪತ್ರಿಕೆಯ ಅನಿಲ್ ರಾಜ್ ವಿರುದ್ಧ. ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ನೀಡಿದ ದೂರಿನ ಅನ್ವಯ ಆ ನಿರ್ಧಾರ ಕೈಗೊಂಡಿದ್ದೇವೆ.

ಯಾರ ಶಿಪಾರಸು
ಪ್ರಶ್ನೆ: ಹಾಗಿದ್ದರೆ ರವಿ ಬೆಳಗೆರೆ ಅವರ ಶಿಕ್ಷೆಗೆ ಶಿಫಾರಸು ಮಾಡಿದವರು ಯಾರು?
ಉತ್ತರ: ನನಗಿಂತ ಮುಂಚೆ ಈ ಸಮಿತಿಯ ಅಧ್ಯಕ್ಷರಾಗಿದ್ದವರು ಈಗ ಸ್ಪೀಕರ್ ಆಗಿರುವ ಕೆ.ಬಿ.ಕೋಳಿವಾಡ. ಅವರೇ ಶಿಫಾರಸು ಮಾಡಿದ್ದು.

ಐತಿಹಾಸಿಕ ನಿರ್ಧಾರ
ಪ್ರಶ್ನೆ: ಈ ರೀತಿ ಪತ್ರಕರ್ತರಿಗೆ ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲಾ?
ಉತ್ತರ: ನನಗೆ ತಿಳಿದ ಹಾಗೆ ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು.

ಅನೇಕರ ಅಸಮಾಧಾನ
ಪ್ರಶ್ನೆ: ಈ ತೀರ್ಮಾನಕ್ಕೆ ಮುಖ್ಯಮಂತ್ರಿಯಾದಿಯಾಗಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಮುಂದಿನ ದಾರಿ ಏನು?
ಉತ್ತರ: ಮೊದಲಿಗೆ ಆದೇಶಕ್ಕೆ ತಡೆ ನೀಡಬೇಕು. ಆ ನಂತರ ಪ್ರಕರಣದ ಬಗ್ಗೆ ಸದನದಲ್ಲಿ ಎಲ್ಲ ಪಕ್ಷದವರು ಸೇರಿ ಚರ್ಚಿಸಿ, ಎಲ್ಲರೂ ಒಪ್ಪಿದರೆ ಶಿಕ್ಷೆ ರದ್ದು ಮಾಡಬಹುದು.

ವಿಕೋಪಕ್ಕೆ ಯಾಕೆ ಹೋಯಿತು
ಪ್ರಶ್ನೆ: ಈ ವಿಚಾರ ಇಷ್ಟು ವಿಕೋಪಕ್ಕೆ ಹೋಗಿದ್ದು ಏಕೆ?
ಉತ್ತರ: ಇದು ಇಷ್ಟು ಬೇಗ ತೀರ್ಮಾನ ಕೈಗೊಳ್ಳುವಂಥದ್ದು ಅಂತ ನನಗೂ ಗೊತ್ತಿರಲಿಲ್ಲ. ಈ ಶಿಕ್ಷೆ ತಡೆ ಹಿಡಿಯಿರಿ ಅಂತ ಕೋಳಿವಾಡ ಅವರಿಗೆ ನಾನು ಪತ್ರ ಬರೆದಿದ್ದೀನಿ.

ಶೆಟ್ಟರ್ ಹೇಳಿಕೆ
ಪ್ರಶ್ನೆ: ಅಂದು ಸದನದಲ್ಲಿ ಇದ್ದಿದ್ದರೆ ಈ ತೀರ್ಮಾನ ತೆಗೆದುಕೊಳ್ಳುವುದನ್ನು ತಡೆದಿರುತ್ತಿದ್ದೆ ಎಂದು ಶೆಟ್ಟರ್ ಹೇಳಿಕೆ ಕೊಟ್ಟಿದ್ದಾರಲ್ಲ?
ಉತ್ತರ: ಮೊದಲನೆಯದು ಸದನದಲ್ಲಿ ಇರಲೇಬೇಕು. ಎರಡನೆಯದು ಬಿಜೆಪಿ ಶಾಸಕರೇ ಅನಿಲ್ ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕೋರ್ಟ್ ಕೇಸ್ ಹಾಕಬಹುದು
ಪ್ರಶ್ನೆ: ಮಾನ ಹಾನಿ ಆಗುವಂಥ ಬರಹ ಇದ್ದರೆ ಕೋರ್ಟ್ ನಲ್ಲಿ ವ್ಯಾಜ್ಯ ಹೂಡಬಹುದಲ್ವಾ?
ಉತ್ತರ: ಕೋರ್ಟ್ ನಲ್ಲಿ ಕೇಸು ಹಾಕಿದವರು ತಪ್ಪದೇ ಹಾಜರಾಗಬೇಕು. ಕೆಲವು ಸಲವಂತೂ ಒಂದು ಬಾರಿ ಕೋರ್ಟ್ ಗೆ ಗೈರಾದರೂ ಕೇಸು ಬಿದ್ದು ಹೋಗತ್ತೆ. ಈ ವಿಚಾರದಲ್ಲಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಗಿಂತ, ದಾವೆ ಹೂಡಿದವರ ಪರಿಸ್ಥಿತಿ ತೀರಾ ಕಷ್ಟವಾಗಿರುತ್ತದೆ.

ಇಷ್ಟು ಬೇಗ ಶಿಫಾರಸು ಜಾರಿಯಾಯಿತಾ?
ಪ್ರಶ್ನೆ: ನಿಮ್ಮ ಶಿಫಾರಸು ಇಷ್ಟು ಬೇಗ ಲಾಗೂ ಆಗುತ್ತದೆ ಅಂದುಕೊಂಡಿದ್ದಿರಾ?
ಉತ್ತರ: ಈ ಬಗ್ಗೆ ಚರ್ಚೆಗೆ ಕರೆಯುತ್ತಾರೆ ಅಂದುಕೊಂಡಿದ್ದೆ. ಇದರಲ್ಲಿ ರವಿ ಬೆಳಗೆರೆ ಅವರ ಹೆಸರು ಬಂದಿದ್ದು ನನಗೂ ಆಶ್ಚರ್ಯ. ಸದನದಲ್ಲಿ ಚರ್ಚೆ ಕೂಡ ಆಗಲಿಲ್ಲ. ಮತ್ತೆ ಈ ಶಿಕ್ಷೆ ಜಾರಿ ಮಾಡುವ ವಿಚಾರದಲ್ಲೂ ಹಲವು ಗೊಂದಲಗಳಿವೆ. ಈ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ಸಮಿತಿಯಲ್ಲೇ ಈ ಬಗ್ಗೆ ಚರ್ಚೆ ಮಾಡಿದ್ದೀನಿ.

ಯಾವುದು ಗೊಂದಲ
ಪ್ರಶ್ನೆ: ಏನದು ಗೊಂದಲ, ಯಾವ ನಿಯಮಾವಳಿಗಳ ಬಗ್ಗೆ ಹೇಳ್ತಿದ್ದೀರಿ?
ಉತ್ತರ: ಶಾಸಕರೋ, ಸಚಿವರೋ ಅಥವಾ ಅಧಿಕಾರಿಗಳೋ ತಪ್ಪು ಮಾಡಿದರೆ, ಶಿಷ್ಟಾಚಾರ ಉಲ್ಲಂಘಿಸಿದರೆ, ಉದಾಹರಣೆಗೆ ಪ್ರೋಟೋಕಾಲ್ ನ ಮೀರಿ ಅಧಿಕಾರಿಗಳು ವರ್ತಿಸುತ್ತಾರೆ ಅಂತಿಟ್ಟುಕೊಳ್ಳಿ. ಆ ಸಂದರ್ಭದಲ್ಲಿ ಶಾಸಕರು ಅಥವಾ ಸಚಿವರು ದೂರು ಕೊಟ್ಟರೆ ಶಿಕ್ಷೆ ಏನು ವಿಧಿಸಬಹುದು, ಮುಂದೆ ಹೇಗೆ ನಡೆದುಕೊಳ್ಳಬೇಕು ಇಂಥದ್ದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಅಂತಿಮವಾದ ಮಾತು
ಪ್ರಶ್ನೆ: ಈ ಪ್ರಕರಣದ ಬಗ್ಗೆ ಅಂತಿಮವಾಗಿ ಏನು ಹೇಳ್ತೀರಿ?
ಉತ್ತರ: ಯಲಹಂಕ ವಾಯ್ಸ್ ನ ಅನಿಲ್ ರಾಜ್ ನ ಶಿಕ್ಷೆಗೆ ಶಿಫಾರಸು ಮಾಡಿದ್ದು ನಾನೇ. ಆತನಿಗೆ ಶಿಕ್ಷೆ ವಿಧಿಸುತ್ತಾರೋ ಆ ಪ್ರಮಾಣದಲ್ಲಿ ಕಡಿಮೆ ಮಾಡುತ್ತಾರೋ ಅಥವಾ ರದ್ದು ಅಗುತ್ತದೋ ನನಗೆ ಗೊತ್ತಿಲ್ಲ. ಆದರೆ ತೀರಾ ಕೆಟ್ಟದಾಗಿ ಆತ ಬರೆದಿದ್ದಾರೆ. ಇನ್ನು ರವಿ ಬೆಳಗೆರೆ ಅವರ ಶಿಕ್ಶ್ಶೆ ವಿಚಾರಕ್ಕೂ ನನಗೂ ಸಂಬಂಧವಿಲ್ಲ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications