ಚುನಾವಣೆ ಸ್ಪರ್ಧಿಸುವುದೇ ಇಲ್ಲ: ಡಾ. ರಾಜ್ ಸೊಸೆ
ಎರಡೆರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಸೋಲು ಅನುಭವಿಸಿದ ಮೇಲೆ ಜೆಡಿಎಸ್ಗೆ ಹೊಸ ಹುರುಪು ನೀಡಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಾಡಿದ ತಂತ್ರ ಆರಂಭದಲ್ಲೇ ಟುಸ್ ಆಗಿದೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ, ಡಾ. ರಾಜ್ ಕುಮಾರ್ ಅವರ ಕುಟುಂಬದ ಹಿರಿಯ ಸೊಸೆ ಗೀತಾ ಶಿವರಾಜಕುಮಾರ್ ಅವರ ರಾಜಕೀಯ ಪ್ರವೇಶ ಅಸಾಧ್ಯ ಎಂಬ ಮಾತು ಕೇಳಿ ಬಂದಿದೆ.
ರಾಜಕೀಯ ಪ್ರವೇಶದ ಬಗ್ಗೆ ಮೂಡಿದ್ದ ಗೊಂದಲದಿಂದ ಕಂಗಾಲಾಗಿದ್ದ ಅಭಿಮಾನಿಗಳಿಗೆ ಗೀತಾಕ್ಕ ಪ್ರತಿಕ್ತಿಯೆ ನೀಡಿದ್ದಾರೆ. ನಾನು ಚಿಕ್ಕಂದಿನಿಂದಲೇ ರಾಜಕೀಯ ವಾತಾವರಣ ಕಂಡಿದ್ದೇನೆ. ನಾನು ರಾಜಕೀಯಕ್ಕೆ ಬರುವುದಿದ್ದರೆ ಎಂದೋ ಬರಬಹುದಿತ್ತು. ನನಗೆ ಆ ಸ್ವತಂತ್ರ ನನ್ನ ಅಪ್ಪ ನೀಡಿದ್ದರು. ಆದರೆ, ನಾನು ಎಂದಿಗೂ ರಾಜಕೀಯ ಪ್ರವೇಶ ಬಯಸಲಿಲ್ಲ. ಇಂದೂ ಕೂಡಾ ರಾಜಕೀಯಕ್ಕೆ ಸೇರುವುದಿಲ್ಲ ಎಂದಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಡಾ.ರಾಜ್ ಕುಟುಂಬದ ಸೊಸೆ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಪಕ್ಷ ಮುಂದಾಗಿದೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಂಬಂಧ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ ಎಂದು ಸುದ್ದಿ ಹಬ್ಬಿತ್ತು. ಅದರೆ, ಇದೆಲ್ಲವೂ ಗಾಳಿಸುದ್ದಿ ಅಷ್ಟೇ ಎಂದು ಗೀತಾ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮಿರರ್ ಪತ್ರಿಕೆ ಜತೆ ಮಾತನಾಡುತ್ತಾ, ನನಗೆ ಈ ಬಗ್ಗೆ ಮಾಧ್ಯಮಗಳಿಂದ ತಿಳಿದು ಬಂತು. ನಾನು ಈವರೆಗೂ ನನ್ನ ಅಪ್ಪ ಹಾಗೂ ಸೋದರರ ರಾಜಕೀಯ ನೋಡಿದ್ದೇನೆ. ವೈಯಕ್ತಿಕವಾಗಿ ನಾನು ರಾಜಕೀಯಕ್ಕೆ ಬರಲು ಎಂದಿಗೂ ಮನಸ್ಸು ಮಾಡಿಲ್ಲ ಎಂದಿದ್ದಾರೆ. ಗೀತಾ ಅವರ ನಿರ್ಧಾರದ ನಂತರದ ಏನಾಗಲಿದೆ ಮುಂದೆ ಓದಿ
ಭವಿಷ್ಯದಲ್ಲೂ ಸ್ಪರ್ಧೆ ಇಲ್ಲ
ಭವಿಷ್ಯದಲ್ಲೂ ಈ ರೀತಿ ಆಫರ್ ಬಂದರೆ ನಾನು ಒಪ್ಪಿಕೊಳ್ಳುವುದಿಲ್ಲ. ನನ್ನ ನಿರ್ಧಾರಕ್ಕೆ ನನ್ನ ಪತಿ ಶಿವರಾಜ್ ಕುಮಾರ್ ಅವರ ಸಂಪೂರ್ಣ ಬೆಂಬಲವಿದೆ. ಮಧು ಆಗಲಿ, ವಸಂತ್ ಆಗಲಿ ರಾಜಕೀಯಕ್ಕೆ ಬರುವಂತೆ ನನ್ನನ್ನು ಒತ್ತಾಯಿಸಿಲ್ಲ ಎಂದು ಗೀತಾ ಹೇಳಿದ್ದಾರೆ.
ಬಂಗಾರಪ್ಪ ಅವರ ಪುತ್ರಿ
ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಜೆ ಎಚ್ ಪಟೇಲ್ ರಂತೆ ವರ್ಣಮಯ ವ್ಯಕ್ತಿತ್ವ ಹಾಗೂ ಭಾಷಾ ಪ್ರೌಢಿಮೆ ಹೊಂದಿದ್ದ ದಿವಂಗತ ಸಾರೆಕೊಪ್ಪ ಬಂಗಾರಪ್ಪ ಅವರು ತಮ್ಮ ಪುತ್ರಿ ಗೀತಾ ಅವರಿಗೂ ಸಮಾಜಮುಖಿ ಚಿಂತನೆಯನ್ನು ತುಂಬಿದ್ದಾರೆ.
ಸುಮಾರು 31 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಕೊನೆಗಾಲದಲ್ಲಿ ಅವರಿಗೆ ರಾಜಕೀಯವಾಗಿ ಪುತ್ರ ವಸಂತ್ ಕುಮಾರ್(ಕುಮಾರ್ ಬಂಗಾರಪ್ಪ) ವೈರಿಯಾಗಿದ್ದು ಸಹಿಸಲು ಆಗದಂಥ ನೋವುಂಟು ಮಾಡಿತ್ತು. ಇನ್ನೊಬ್ಬ ಪುತ್ರ ಮಧುವನ್ನು ರಾಜಕೀಯವಾಗಿ ಮೇಲಕ್ಕೆ ತರಲು ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದ್ದರು.ಈ ಎಲ್ಲಾ ರಾಜಕೀಯದಿಂದ ನೋವು ನಲಿವು ಹತ್ತಿರದಿಂದ ಕಂಡಿರುವ ಗೀತಾ ಅವರು ಕಣಕ್ಕಿಳಿಯುವರೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ
ಅಭಿಮಾನಿಗಳ ಪ್ರತಿಕ್ರಿಯೆ
ಗೀತಾ ಶಿವರಾಜ್ ಕುಮಾರ್ ಅವರು ಕಣಕ್ಕಿಳಿಯುವ ಬಗ್ಗೆ ಅಭಿಮಾನಿಗಳು ಕೂಡಾ ಕುತೂಹಲಕಾರಿಯಾಗಿದ್ದರು. ಆದರೆ, ಶಿವಣ್ಣನ ಅಭಿಮಾನಿಗಳು ಮನಸಾರೆ ಒಪ್ಪಿಗೆ ಸೂಚಿಸುವ ಧೈರ್ಯ ತೋರಿರಲಿಲ್ಲ. ಗೀತಾ ಅವರು ಚುನಾವಣೆಗೆ ನಿಲ್ಲದಿರಲಿ, ರಾಜ್ ಕುಟುಂಬ ರಾಜಕೀಯದಿಂದ ದೂರ ಉಳಿಯಲಿ ಎಂಬುದೇ ಬಹುತೇಕ ಅಭಿಮಾನಿಗಳ ಅಭಿಮತವಾಗಿತ್ತು.
ಮಧು ಕಥೆ ಏನು?
ಮಾಜಿ ಮುಖ್ಯಮಂತ್ರಿ ಎಸ್ .ಬಂಗಾರಪ್ಪ ಪತ್ನಿ ಶಕುಂತಲಾ ಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿತ್ತು. ಆದರೆ, ಶಕುಂತಲಾ ಬಂಗಾರಪ್ಪ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಪುತ್ರ ಮಧು ಹೇಳಿದ್ದಾರೆ. ಗೀತಾ ಮತ್ತು ಪತಿ ಶಿವರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನೂ ಪಕ್ಷದ ನಾಯಕರು ಮಧುಗೆ ವಹಿಸಲಾಗಿತ್ತು.
ಆದರೆ, ಮಧು ವಿಫಲರಾಗಿದ್ದಾರೆ. ಮಧು ಅವರಿಗೆ ವಿಧಾನಸಭೆಯ ಮುಖ್ಯ ಸಚೇತಕ ಹುದ್ದೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿತ್ತು. ಆದರೆ ಈಗ?
ರಾಜಕೀಯದಿಂದ ದೂರ
ಮೊದಲಿನಿಂದಲೂ ರಾಜಕೀಯದಿಂದ ದೂರವುಳಿದಿರುವ ರಾಜ್ ಕುಟುಂಬ ಈಗ ಸೊಸೆ ರಾಜಕೀಯ ಪ್ರವೇಶಕ್ಕೆ ಅಸ್ತು ಎನ್ನುವುದೇ ಎಂಬ ಕುತೂಹಲದ ಪ್ರಶ್ನೆ ಮನೆ ಮಾಡಿದೆ.
ಡಾ.ರಾಜ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿ ರಾಜಕೀಯ ಪಕ್ಷಗಳು ಸೋತಿತ್ತು ಎಂಬುದನ್ನು ಮರೆಯುವಂತಿಲ್ಲ. ಬಂಗಾರಪ್ಪ ಅವರ ನಂಟಿದ್ದರೂ ರಾಜಕೀಯವನ್ನು ಎಂದಿಗೂ ರಾಜ್ ಕುಟುಂಬ ಹೊದ್ದು ಮಲಗಿರಲಿಲ್ಲ.
ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿನ ಚಿತ್ರರಂಗದ ದಿಗ್ಗಜರು ರಾಜಕೀಯಕ್ಕೆ ಪ್ರವೇಶಿಸುತ್ತಿರುವಾಗ ಇಲ್ಲಿ ಮಾತ್ರ ಏಕೆ ಹೀಗೆ? ಅದರಲ್ಲೂ ರಾಜ್ ಕುಟುಂಬ ಯಾಕೆ ಸಕ್ರಿಯವಾಗಿ ರಾಜಕೀಯದಿಂದ ದೂರ ಉಳಿದಿದೆ ಎಂಬ ಪ್ರಶ್ನೆ ಎದ್ದಿದೆ.
ರಾಜಕೀಯದಿಂದ ದೂರ ಇರಿ
ಅಣ್ಣಾವ್ರು ಬಯಸಿದ್ದರೆ ರಾಜಕೀಯ ಪ್ರವೇಶ ಕಷ್ಟವಿರಲಿಲ್ಲ. ಶಿವಣ್ಣ ಅವರಿಗೂ ಮಾವ ಬಂಗಾರಪ್ಪ ಅವರ ಬೆಂಬಲ ಇದ್ದೇ ಇತ್ತು. ಆದರೆ, ಅಣ್ಣಾವ್ರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವೋ ಅದೇ ಕಾರಣಕ್ಕೆ ಅವರ ಮೂವರು ಮಕ್ಕಳು ರಾಜಕೀಯದಿಂದ ದೂರ ಉಳಿದಿದ್ದಾರೆ.
ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್ ಕುಮಾರ್ ಅವರಂತೆ ಗೀತಾಕ್ಕ ಕೂಡಾ ರಾಜಕೀಯದಿಂದ ದೂರ ಇರಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.
ಗೌಡರ ಯೋಜನೆ
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮೂವರು ಜೆಡಿಎಸ್ ಶಾಸಕರಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಮತ್ತು ತೀರ್ಥಹಳ್ಳಿಯಲ್ಲೂ ಹೆಚ್ಚಿನ ಮತ ಪಡೆದಿದೆ. ಬಂಗಾರಪ್ಪ ಅವರ ಬಗ್ಗೆ ಇಂದಿಗೂ ಕ್ಷೇತ್ರದಾದ್ಯಂತ ಅಭಿಮಾನ ಹೊಂದಿದ್ದಾರೆ ಹೀಗಾಗಿ ಅವರ ಪುತ್ರಿ ಗೀತಾ ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದು ದೇವೇಗೌಡರ ಲೆಕ್ಕಾಚಾರ ಹಾಕಿದ್ದರು.
ಇತ್ತೀಚೆಗೆ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸ ಮಾಡಿ ಬಂದ ದೇವೇಗೌಡರು, ಶಿವಮೊಗ್ಗ ಜಿಲ್ಲೆ ಜತೆಗೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲೂ ಜೆಡಿಎಸ್ ಗೆ ಅನುಕೂಲಕರ ವಾತಾವರಣ ಇರುವುದನ್ನು ಗಮನಿಸಿದ್ದಾರೆ. ಈಡಿಗ ಸಮುದಾಯ, ಅಲ್ಪಸಂಖ್ಯಾತರ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವಿದೆ.