Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಮೊಳಗಿದ ‘ನಾನು ಗೌರಿ, ನಾವೆಲ್ಲಾ ಗೌರಿ’ ಘೋಷಣೆ

ಬೆಂಗಳೂರು, ಸೆಪ್ಟೆಂಬರ್ 12: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಗರದಲ್ಲಿ ನಡೆದ 'ಪ್ರತಿರೋಧ ಸಮಾವೇಶ' ಯಶಸ್ವಿಯಾಗಿ ನಡೆಯಿತು. ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಚಿಂತಕರು, ಹೋರಾಟಗಾರರು, ಗಣ್ಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

'ನಾನೂ ಗೌರಿ, ನಾವೆಲ್ಲಾ ಗೌರಿ' ಎಂಬ ಘೋಷಣೆ ಸಮಾವೇಶ ನಡೆದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಿಂದ ಮೊಳಗಿತು. ದೇಶದ ವಿಭಿನ್ನ ಚಿಂತಕರು ಮತ್ತು ಹೋರಾಟಗಾರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಒಂದೆಡೆಯಾದರೆ, ಗೌರಿ ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ನಿರ್ಣಯಗಳ ಮಂಡನೆಗೆ ಈ ಬೃಹತ್ ಸಮಾವೇಶ ಸಾಕ್ಷಿಯಾಯಿತು.

ನೀವೆಲ್ಲಾ ನನ್ನ ಗೌರಿಯರು

ನೀವೆಲ್ಲಾ ನನ್ನ ಗೌರಿಯರು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್, ಎಲ್ಲರಿಗೂ ನಮಸ್ಕಾರ, ಎಲ್ಲ ಗೌರಿಯರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದರು. "ನನ್ನ ಮಗಳು ಇಂಜಿನಿಯರ್ ಆಗಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಪತ್ರಿಕೋದ್ಯಮ ಆರಿಸಿಕೊಂಡಳು. ಅದಕ್ಕೆ ಅವಳು ನ್ಯಾಯ ಒದಗಿಸಿಕೊಟ್ಟಳು. ಅಂಥ ಗೌರಿಯನ್ನು ಹುಟ್ಟುಹಾಕಿದ್ದು, ಧೈರ್ಯದಿಂದ ಹೋರಾಟಕ್ಕೆ ಪ್ರೇರಣೆ ಮಾಡಿದ್ದು ನೀವು. ಅಂಥ ನಿಮ್ಮ ಬಗ್ಗೆ ಹೆಮ್ಮ, ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಿದೆ. ನ್ನನ ಗೌರಿ ನೀವುಗಳೇ," ಎಂದು ಮಾತು ಮುಗಿಸಿದಾಗ ಇಂದಿರಾ ಅವರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಉಮ್ಮಳಿಸಿ ಬರುತ್ತಿದ್ದ ದುಃಖದ ಮಧ್ಯೆ ಹೋಗಿ ಅವರು ಕುಳಿತುಕೊಂಡರು.

 ಗೌರಿ ಲಂಕೇಶ್ ಪ್ರಯತ್ನವನ್ನು ವ್ಯರ್ಥವಾಗಲು ಬಿಡಬಾರದು

ಗೌರಿ ಲಂಕೇಶ್ ಪ್ರಯತ್ನವನ್ನು ವ್ಯರ್ಥವಾಗಲು ಬಿಡಬಾರದು

ಗುಜರಾತಿನಿಂದ ಬಂದಿದ್ದ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್, ಗೌರಿ ಮತ್ತು ನಾವಿಬ್ಬರು ಒಂದೇ ವರ್ಷ ಹುಟ್ಟಿದವರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ನನಗೆ ತಂದೆ, ಮಗಳು ಎಲ್ಲವೂ ಆಗಿದ್ದರು. ನಾವಿಬ್ಬರು ಸಾಕಷ್ಟು ಬಾರಿ ಜತೆಯಲ್ಲಿ ಸಮಯ ಕಳೆದಿದ್ದೇವೆ. ಒಟ್ಟಿಗೆ ಡಾನ್ಸ್ ಕೂಡ ಮಾಡಿದ್ದೇವೆ..." ಎನ್ನುತ್ತಾ ಭಾವುಕತೆಗೆ ಜಾರಿದರು.

ಕೆನ್ನೆ ಮೇಲೆ ಜಾರುತ್ತಿದ್ದ ಕಂಬನಿಯನ್ನು ಒರೆಸಿಕೊಳ್ಳುತ್ತಲೇ ಮಾತು ಮುಂದುವರಿಸಿದ ಅವರು, "ಗೌರಿ ಭಾರತೀಯ ಭಾಷೆಯಲ್ಲಿ ಹಲವು ಅದ್ಭುತ ಪುಸ್ತಕಗಳನ್ನ ಪ್ರಕಟಿಸಿದ್ದರು. ವೈಚಾರಿಕೆ, ಜಾತಿ ವ್ಯವಸ್ಥೆಯನ್ನ ಪ್ರಶ್ನಿಸುವುದು, ಅನ್ಯಾಯವನ್ನ ಪ್ರಶ್ನಿಸುವ ಗುಣ ಈ ಭೂಮಿಯಲ್ಲೆ ಇದೆ. ಇದು ಬಹುಸಂಸ್ಕೃತಿಗಳ ನಾಡು. ಇದನ್ನ ಯಾವ ಫ್ಯಾಸಿಸ್ಟ್ ಶಕ್ತಿಗಳು, ಕೊಲ್ಲುವ ರಣ ಹೇಡಿಗಳು ನಾಶಗೊಳಿಸಲು ಸಾಧ್ಯವಿಲ್ಲ. ನಾವೆಲ್ಲರು ಗೌರಿ ಲಂಕೇಶ್ ಅವರಿಂದ ಸಾಕಷ್ಟು ಕಲಿಯಬೇಕಿದೆ. ನಾವು ಗೌರಿ ಲಂಕೇಶ್ ಅವರ ಪ್ರಯತ್ನವನ್ನು ವ್ಯರ್ಥವಾಗಲು ಬಿಡಬಾರದು," ಎಂದು ಸಮಾವೇಶಕ್ಕೆ ಬಂದಿದ್ದ ಸಾವಿರಾರು ಜನರಿಗೆ ಮನವರಿಕೆ ಮಾಡಿಕೊಟ್ಟರು.

 ಬಹುತ್ವಕ್ಕಾಗುತ್ತಿರುವ ಧಕ್ಕೆಯೇ ಗೌರಿ ಸಾವಿಗೆ ಕಾರಣ

ಬಹುತ್ವಕ್ಕಾಗುತ್ತಿರುವ ಧಕ್ಕೆಯೇ ಗೌರಿ ಸಾವಿಗೆ ಕಾರಣ

"ದೇಶದಲ್ಲಿ ಬಹುತ್ವಕ್ಕೆ ಧಕ್ಕೆಯಾಗುತ್ತಿರುವುದರಿಂದಲೇ ಕಲ್ಬುರ್ಗಿ, ಗೌರಿಯಂಥವರು ಬಲಿಯಾಗ್ತಿದಾರೆ. ಇಂದು ನಮಗೆ ಬಹುತ್ವವೇ ಮುಖ್ಯ, ಅದೇ ನಮ್ಮ ಧರ್ಮ; ಸಹನೆ ಮತ್ತು ಪ್ರೀತಿ ಇದರಿಂದಲೇ ಸಾಧ್ಯ. ನಮ್ಮ ಸರ್ಕಾರಗಳು ಭೂತವನ್ನೇ ವರ್ತಮಾನ ಮಾಡುತ್ತಿವೆ. ಎಲ್ಲ ಪ್ರೀತಿ, ಸಹನೆಯುಳ್ಳವರು ಉದಾರ, ವಿಶಾಲ ಮನೋಭಾವದವರೆಲ್ಲಾ ಒಗ್ಗಟ್ಟಾಗಬೇಕಾಗಿದೆ," ಎಂದು ಸಾಹಿತಿ ದೇವನೂರು ಮಹಾದೇವ ಕರೆ ನೀಡಿದರು.

ವಿಚಾರಕ್ಕೆ ಪ್ರತಿಯಾಗಿ ಹಿಂಸಾಚಾರ

ವಿಚಾರಕ್ಕೆ ಪ್ರತಿಯಾಗಿ ಹಿಂಸಾಚಾರ

"ವಿಚಾರಕ್ಕೆ ಇಂದು ಪ್ರತಿಯಾಗಿ ಹಿಂಸಾಚಾರ ನಡೆಯುತ್ತಿದೆ. ಪೆನ್ನಿಗೆ ಗನ್ನು ಎನ್ನಲಾಗ್ತಿದೆ. ಗನ್ನಿಗೆ ಗನ್ನು ಎಂಬಂತೆ ಆಗಬಾರದು, ಅದೂ ಪ್ರಜಾಪ್ರಭುತ್ವವಲ್ಲ. ನಾವು ಖಂಡನೆ ಮಂಡನೆಗಳ ಮೂಲಕ ವಿಚಾರವನ್ನು ಮಂಡಿಸಬೇಕು. ಇದನ್ನೇ ಅನುಸರಿಸಿದ ಗೌರಿ , ಕಲ್ಬುರ್ಗಿ ಅದಕ್ಕೆ ತಮ್ಮನ್ನು ತ್ಯಾಗ ಮಾಡಿಕೊಂಡಿದ್ದಾರೆ," ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ
ಮುರುಘಾ ಶರಣರು ಹೇಳಿದರು.

"ಕೆಲ ಬಾಡಿಗೆ ಬಂಟರು, ಮಾನಸಿಕ ಅಸ್ವಸ್ಥರ ಮೂಲಕ ಇಂಥಹ ಹೇಯ ಕೃತ್ಯವನ್ನು ಮಾಡಿಸಲಾಗುತ್ತಿದೆ. ನನಗೂ ಇಂಥ ಬೆದರಿಕೆ ಬಂದಿತ್ತು. ಆಗ ನಾವು ದೂರು ನೀಡಿದೆವು. ಸಂಶೋಧಕರು, ವಿಚಾರವಾದಿಗಳು, ಧಾರ್ಮಕ ಮುಖಂಡರೂ ಅವರ ಬೆದರಿಕೆಗಳನ್ನು ಎದುರಿಸಬೇಕಾಗಿದೆ," ಎಂದು ಹೇಳಿದರ ಅವರು ಈ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದರು.

 ಈಗ ನಾನು ಗೌರಿಯಾಗಿದ್ದೇನೆ - ಚಂಪಾ

ಈಗ ನಾನು ಗೌರಿಯಾಗಿದ್ದೇನೆ - ಚಂಪಾ

ಕಾರ್ಯಕ್ರಮದಲ್ಲಿ ಕವಿತೆ ವಾಚನದ ಮೂಲಕ ಗೌರಿ ಲಂಕೇಶ್ ರಿಗೆ ನುಡಿ ನಮನ ಸಲ್ಲಿಸಿದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್, "ಕೆಲವು ವರ್ಷಗಳ ಹಿಂದೆ ನಾನು ನರೇಂದ್ರ ದಾಬೋಲ್ಕರ್ ಆಗಿದ್ದೆ, ಆಮೇಲೆ ಪನ್ಸಾರೆ ಆದೆ. ಎರಡು ವರ್ಷಗಳ ಹಿಂದೆ ನನ್ನ ಕ್ಲಾಸ್ ಮೇಟ್ ಗೆಳೆಯ ಕಲ್ಬುರ್ಗಿಯನ್ನು ಕೊಂದರು. ಆಗ ನಾನು ಕಲ್ಬುರ್ಗಿಯಾದೆ. ಮೊನ್ನೆ ಮೊನ್ನೆ ಗೌರಿಯನ್ನು ಕೊಂದರು. ಈಗ ನಾನು ಗೌರಿಯಾದೆ. ಈಗ ನಾವೆಲ್ಲ ಗೌರಿಯಾಗಿದ್ದೇವೆ," ಎಂದರು.

"ಯಾರಾದರೂ ಸತ್ತಾಗ ಮನೆಯಲ್ಲಿನ ಮಕ್ಕಳಿಗೆ, ಅವರು ಸತ್ತಿಲ್ಲಆಕಾಶದಲ್ಲಿ ಚುಕ್ಕಿಯಾಗಿದ್ದಾರೆ ಎನ್ನುತ್ತೇವೆ. ಅಂದರೆ ಯಾರೂ ಸಾಯೋದಿಲ್ಲ," ಎಂದು ಹೇಳಿದ ಚಂಪಾ, ಗೌರಿ ನಮ್ಮ ಮೂಲಕ ಜೀವಂತವಾಗಿರುತ್ತಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ನಂತರ ಚಿಕ್ಕ ಪದ್ಯವನ್ನು ಓದಿ ಚಂಪಾ ಗೌರಿ ಲಂಕೇಶ್ ರಿಗೆ ನುಡಿನಮನ ಸಲ್ಲಿಸಿದರು.

 ಗೌರಿ ಲಂಕೇಶ್ ಪತ್ರಿಕೆ ವಿಶೇಷ ಸಂಚಿಕೆ

ಗೌರಿ ಲಂಕೇಶ್ ಪತ್ರಿಕೆ ವಿಶೇಷ ಸಂಚಿಕೆ

ಗೌರಿ ಲಂಕೇಶ್ ಹತ್ಯೆಯಾದರೂ ಅವರ ಪತ್ರಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ವಿರೋಧಿ ಸಮಿತಿ ಘೋಷಿಸಿತು. ಮತ್ತು ಕಾರ್ಯಕ್ರಮದಲ್ಲೇ ಗೌರಿ ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರಸ್ವಾಮಿ ಬಿಡುಗಡೆಗೊಳಿಸಿದರು.

 ನವದೆಹಲಿಯಲ್ಲಿ ಬೃಹತ್ ಹೋರಾಟ

ನವದೆಹಲಿಯಲ್ಲಿ ಬೃಹತ್ ಹೋರಾಟ

ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಬೃಹತ್ ಹೋರಾಟ ನಡೆಯಲಿದೆ. ಮತ್ತು ಈ ಹೋರಾಟವನ್ನು ಜಿಲ್ಲೆ ಜಿಲ್ಲೆ, ತಾಲೂಕು ಮಟ್ಟಕ್ಕೆ ತೆಗೆದುಕೊಂಡುಹೋಗಲಿದ್ದೇವೆ ಎಂದು ಹೋರಾಟಗಾರ್ತಿ ಕೆ.ನೀಲಾ ಸಭೆಯಲ್ಲಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪತ್ರಕರ್ತರಾಗ ಪಿ ಸಾಯಿನಾಥ್, ಸಾಗರಿಕಾ ಘೋಷ್, ಸಿದ್ಧಾರ್ಥ್ ವರದರಾಜನ್, ಸ್ವರಾಜ್ ಇಂಡಿಯಾದ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಸಾಕ್ಷ್ಯ ಚಿತ್ರ ನಿರ್ಮಾಪಕ ಆನಂದ್ ಪಟ್ವರ್ಧನ್, ರಾಕೇಶ್ ಶರ್ಮಾ, ಉವ ಹೋರಾಟಗಾರರಾದ ಜಿಗ್ನೇಶ್ ಮೇವಾನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅರ್ಧ ಕಾರ್ಯಕ್ರಮದ ನಂತರ ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಕಾರ್ಯಕ್ರಮಕ್ಕೆ ಆಗಮಿಸಿದರು.

 ರೈಲ್ವೇ ನಿಲ್ದಾಣದಿಂದ ನಡೆದು ಬಂದ ಕಾರ್ಯಕರ್ತರು

ರೈಲ್ವೇ ನಿಲ್ದಾಣದಿಂದ ನಡೆದು ಬಂದ ಕಾರ್ಯಕರ್ತರು

ಕಾರ್ಯಕ್ರಮಕ್ಕೂ ಮೊದಲು ಸಾವಿರಾರು ಕಾರ್ಯಕರ್ತರು ಕೇಂದ್ರ ರೈಲ್ವೇ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ಬೃಹತ್ ಜಾಥಾ ನಡೆಸಿದರು.

ಸಿಪಿಐಎಂ, ಆಮ್ ಆದ್ಮಿ ಪಕ್ಷ, ಕರ್ನಾಟಕ ಜನಶಕ್ತಿ ಸೇರಿದಂತೆ ಹತ್ತಾರು ಸಂಘಟನೆಗಳ ಕಾರ್ಯಕರ್ತರು ತಮ್ಮ ಸಂಘಟನೆಗಳ ಫ್ಲೆಕ್ಸ್ ಹಿಡಿದು ರ್ಯಾಲಿಯಲ್ಲಿ ಭಾಗಿಯಾಗಿದ್ದರು. ದೊಡ್ಡ ಮಟ್ಟಕ್ಕೆ ಯುವ ಜನತೆ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಹೋರಾಟ ಗೀತೆಗಳು, 'ನಾನೂ ಗೌರಿ, ನಾವೆಲ್ಲಾ ಗೌರಿ' ಸೇರಿದಂತೆ ಹಲವಾರು ಘೋಷಣೆಗಳು ಪ್ರತಿಭಟನೆಯಲ್ಲಿ ಮೊಳಗಿದವು. ನೂರಾರು ಭಿನ್ನ ಭಿನ್ನ ಭಿತ್ತಿಪತ್ರಗಳೂ ಪ್ರತಿಭಟನೆಯಲ್ಲಿ ಕಾಣಿಸಿದವು. ನಂತರ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+