Mylara Lingeshwara Karnika 2023; ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ದಿನಾಂಕ ನಿಗದಿ
ಹೊಸಪೇಟೆ, ಜನವರಿ 09; ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮೈಲಾರ ಕ್ಷೇತ್ರದಲ್ಲಿ ನಡೆಯುವ ನಾಡಿನ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ನಾಡಿನಾದ್ಯಂತ ಜನರು ಈ ಕಾರ್ಣಿಕ ಕೇಳಲು ಕಾದು ಕುಳಿತಿರುತ್ತಾರೆ.
ಈ ಬಾರಿಯ ಕಾರ್ಣಿಕ ಮಹೋತ್ಸವವು ಫೆಬ್ರವರಿ 7ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಜನವರಿ 28ರಂದು ರಥಸಪ್ತಮಿ, ಕಡುಬಿನ ಕಾಳಗ ನಡೆಯುವುದು.
ಫೆಬ್ರವರಿ 5ರಂದು ಭರತ ಹುಣ್ಣಿಮೆ, ಧ್ವಜಾರೋಹಣ ನಡೆಯಲಿದೆ. ಫೆಬ್ರವರಿ 6ರಂದು ತ್ರಿಶೂಲಪೂಜೆ. ಫೆಬ್ರವರಿ 7ರಂದು ಶ್ರೀಸ್ವಾಮಿಯ ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ ನಿಗದಿಯಾಗಿದೆ.

ಸಂಜೆ 5-30ಕ್ಕೆ ಶ್ರೀಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಗುರುಪರಂಪರ್ಯ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಗೊರವಯ್ಯನವರಿಂದ ಕಾರ್ಣಿಕ ನುಡಿಯಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಗೊರವಯ್ಯ ನುಡಿಯವ ಭವಿಷ್ಯ; ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಕಾರ್ಣಿಕದ ಅನುಸಾರ ಮುಂದಿನ ವರ್ಷದ ಮಳೆ, ಬೆಳೆ ಆಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಗೊರವಯ್ಯ ಅಥವಾ ಗ್ವಾರಪ್ಪ ನುಡಿಯುವ ಭವಿಷ್ಯವನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರು ನಂಬುತ್ತಾರೆ. ಜಾತ್ಯತೀತವಾಗಿ ಭಕ್ತರು ಮೈಲಾರ ಲಿಂಗೇಶ್ವರನನ್ನು ಆರಾಧಿಸುತ್ತಾ ಬಂದಿದ್ದಾರೆ.
ಜಾತ್ರೆಯ ದಿನ ಎತ್ತರವಾದ ಕೊಲನ್ನು ಏರುವ ಗೊರವಯ್ಯ ಸದ್ದಲೇ ಪರಾಕ್ ಎಂದು ಕೂಗುತ್ತಾರೆ. ಆಗ ಜಾತ್ರೆಯಲ್ಲಿ ಸೇರಿರುವ ಜನರು ಒಂದು ಕ್ಷಣಕ್ಕೆ ಮೌನಕ್ಕೆ ಜಾರುತ್ತಾರೆ. ಆಗ ಗೊರವಯ್ಯ ಒಂದು ಸಾಲಿನ ಭವಿಷ್ಯ ನುಡಿಯುತ್ತಾರೆ. ಅದನ್ನು ಬಳಿಕ ದೇವಾಲಯದವರು ವಿಶ್ಲೇಷಣೆ ಮಾಡುತ್ತಾರೆ.
ಲಕ್ಷಾಂತರ ಜನರು ಸೇರಿರುವ ಜಾತ್ರೆಯಲ್ಲಿ 'ಸದ್ದಲೇ' ಎಂದು ಹೇಳಿದ ಬಳಿಕ ಆ ವರ್ಷದ ಕಾರ್ಣಿಕ ಹೇಳುವುದು ವಾಡಿಕೆ. ಕಾರ್ಣಿಕ ನುಡಿದ ತಕ್ಷಣ ಗೊರವಯ್ಯ ಕಂಬದ ಕೈ ಬಿಡುತ್ತಾನೆ. ಮೇಲಿನಿಂದ ಬೀಳುವ ಗೊರವಯ್ಯನನ್ನು ಭಕ್ತರು ಹಿಡಿದುಕೊಳ್ಳುತ್ತಾರೆ.












Click it and Unblock the Notifications