ಉಬ್ಲೋ ವಾಚ್ ಉಡುಗೊರೆ ಬಗ್ಗೆ ಸಿಬಿಐ ತನಿಖೆ ಸಾಧ್ಯವಿಲ್ಲ!
ಬೆಂಗಳೂರು, ಜೂನ್ 12 : ಸಿದ್ದರಾಮಯ್ಯ ಉಬ್ಲೋ ವಾಚ್ ಪಡೆದಿದ್ದಾರೆ ಎಂಬ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ಅನುಪಮಾ ಶೆಣೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ಅರ್ಜಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತು.
ಅರ್ಜಿಯನ್ನು ಅರ್ಜಿದಾರರು ಹಿಂಪಡೆಯಬಹುದು, ಅಗತ್ಯವಿದ್ದರೆ ಅರ್ಜಿದಾರರು ಬೇರೊಂದು ವೇದಿಕೆಯಲ್ಲಿ ಪ್ರಕರಣದ ಸಂಬಂಧ ಕಾನೂನು ಹೋರಾಟ ಮುಂದುವರೆಸಬಹುದು ಎಂದು ಹೇಳಿತು. ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್ ಅರ್ಜಿಯನ್ನು ವಾಪಸ್ ಪಡೆದರು.
ಪ್ರಸ್ತುತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಗಿರೀಶ್ ಚಂದ್ರ ವರ್ಮಾ ಅವರಿಂದ ದುಬಾರಿ ಮೌಲ್ಯದ ಉಬ್ಲೋ ವಾಚ್ ಉಡುಗೊರೆ ಪಡೆದಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅನುಪಮಾ ಶೆಣೈ ಅರ್ಜಿ ಸಲ್ಲಿಸಿದ್ದರು.
ವಾಚ್ ವಿವಾದ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ
ಉಬ್ಲೋ ವಾಚ್ ಸರ್ಕಾರದ ಆಸ್ತಿ : 2016ರಲ್ಲಿ ಸಿದ್ದರಾಮಯ್ಯ ಅವರ ಕೈಯಲ್ಲಿ ವಜ್ರ ಖಚಿತ ಊಬ್ಲೋ ವಾಚ್ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಆರೋಪ ಮಾಡಿದ್ದರು.
ವಜ್ರ ಖಚಿತ ವಾಚ್ ವಿವಾದದ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆದಿತ್ತು. ಮಾರ್ಚ್ 2ರಂದು ಸಿದ್ದರಾಮಯ್ಯ ಅವರು ವಾಚ್ ಅನ್ನು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದರು, ಈಗ ವಾಚ್ ಸರ್ಕಾರದ ಆಸ್ತಿಯಾಗಿದೆ.