ಚಿಂತಕ ಕಲಬುರ್ಗಿ ಕೊಂದದ್ದು ಹುಬ್ಬಳ್ಳಿಯ ಗಣೇಶ ವಿಸ್ಕಿನ್?
ಬೆಂಗಳೂರು, ಆಗಸ್ಟ್ 15: ಗೌರಿ ಲಂಕೇಶ್ ಹತ್ಯೆ ತನಿಖೆ ಮಾಡುತ್ತಿರುವ ಎಸ್ಐಟಿಗೆ ವಿಚಾರವಾದಿ ಕಲಬುರ್ಗಿ ಅವರ ಕೊಲೆಯ ಬಗ್ಗೆ ಅತಿ ಮುಖ್ಯ ಮಾಹಿತಿಯೊಂದು ಲಭ್ಯವಾಗಿದೆ.
ವಿಚಾರವಾದಿ ಎಂಎಂ ಕಲಬುರ್ಗಿ ಅವರನ್ನು ಕೊಂದಿದ್ದು ಹುಬ್ಬಳ್ಳಿಯ ಗಣೇಶ ನಿಸ್ಕಿನ್ ಎಂಬಾತ ಎಂಬುದು ಎಸ್ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ. ಆತನಿಗೆ ಸಹಾಯ ಮಾಡಿದ್ದು ಅದೇ ಹುಬ್ಬಳ್ಳಿಯ ರಾಮಚಂದ್ರ ಬದ್ದಿ.
ಗೌರಿ ಹತ್ಯೆ ಆರೋಪಿಗಳೇ ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ಕೊಲೆಗಾರರು!
ವಿಚಾರವಾದಿ ಕಲಬುರ್ಗಿ ಅವರನ್ನು ಅವರ ಧಾರವಾಡದ ಅವರ ನಿವಾಸದಲ್ಲಿಯೇ 2015ರ ಆಗಸ್ಟ್ 30 ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದವರ ಸುಳಿವು ಈ ವರೆಗೆ ಪತ್ತೆ ಆಗಿರಲಿಲ್ಲ. ಆದರೆ ಈಗ ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಈ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ.
ಗಣೇಶ ವಿಸ್ಕಿನ್ ಮತ್ತು ರಾಮಚಂದ್ರ ಬದ್ದಿ ಎಂಬ ಇಬ್ಬರನ್ನು ಗೌರಿ ಹತ್ಯೆಯ ತನಿಖೆ ಸಂಬಂಧ ಎಸ್ಐಟಿ ಪೊಲೀಸರು ಜುಲೈ 23ರಂದು ಬಂಧಿಸಿದ್ದರು. ಇಬ್ಬರೂ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ.
ಇಬ್ಬರು ಆರೋಪಿಗಳಿಗೆ ಅಮೋಲ್ ಕಾಳೆ ಜತೆ ಸಂಪರ್ಕ
ಈ ಇಬ್ಬರಿಗೂ ಗೌರಿ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಜತೆ ನಿಕಟ ಸಂಪರ್ಕ ಇತ್ತು ಎನ್ನಲಾಗಿದ್ದು. ಈ ಇಬ್ಬರೂ ಕೂಡ ಗೌರಿ ಹತ್ಯೆಗೆ ಸಹಾಯ ಮಾಡಿದ್ದರು ಎಂಬ ಅನುಮಾನದ ಮೇಲೆ ಎಸ್ಐಟಿ ಪೊಲೀಸರು ಇವರನ್ನು ಬಂಧಿಸಿದ್ದರು.
ಕಲಬುರ್ಗಿಗೆ ಗುಂಡು ಹೊಡೆದಿದ್ದು ವಿಸ್ಕಿನ್
ಕಲಬುರ್ಗಿಗೆ ಗುಂಡು ಹೊಡೆದದ್ದು ತಾನೇ ಎಂದು ಗಣೇಶ್ ವಿಸ್ಕಿನ್ ಎಸ್ಐಟಿ ಬಳಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಅಂದು ಬೈಕ್ ಓಡಿಸಿದ್ದು ರಾಮಚಂದ್ರ ಬದ್ದಿ ಎನ್ನಲಾಗಿದೆ. ಥೇಟ್ ಗೌರಿ ಕೊಲೆ ಮಾದರಿಯಲ್ಲೇ ಬೈಕಿನಲ್ಲಿ ಬಂದು ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಕೊಲ್ಲಲಾಗಿತ್ತು. ಇಬ್ಬರ ಕೊಲೆಗೂ ಬಳಸಿದ್ದ ಬಂದೂಕು ಕೂಡ ಒಂದೇ ರೀತಿಯದ್ದಾಗಿತ್ತು.
ಗೌರಿ ಲಂಕೇಶ್ ಹತ್ಯೆಯ ಹಿಂದೆ ಇದೆಯಾ ಕರಾವಳಿಯ ನಂಟು?
ದಿನಪತ್ರಿಕೆಯೊಂದರ ಸಂಪಾದಕರ ಪಾತ್ರವೂ ಇದೆ
ಕಲಬುರ್ಗಿ ಕೊಲೆ ಪ್ರಕರಣದಲ್ಲಿ ಮರಾಠಿ ದಿನ ಪತ್ರಿಕೆಯೊಂದರ ಸಂಪಾದಕರ ಪಾತ್ರವೂ ಇರುವುದಾಗಿ ಎಸ್ಐಟಿಗೆ ಸುಳಿವು ದೊರೆತಿದೆ. ಆದರೆ ಆ ಸಂಪಾದಕ ಕೆಲವು ತಿಂಗಳ ಹಿಂದಷ್ಟೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಿಐಡಿಗೆ ಒಪ್ಪಿಸಲಿರುವ ಎಸ್ಐಟಿ
ಕಲಬುರ್ಗಿ ಅವರ ಕೊಲೆ ಪ್ರಕರಣವನ್ನು ಸಿಐಡಿ ಮಾಡುತ್ತಿದ್ದು, ಎಸ್ಐಟಿ ಕಲೆ ಹಾಕಿರುವ ಅತ್ಯಮೂಲ್ಯ ಮಾಹಿತಿಯನ್ನು ಹಾಗೂ ಆರೋಪಿಗಳಾದ ಗಣೇಶ ವಿಸ್ಕಿನ್ ಮತ್ತು ರಾಮಚಂದ್ರ ಬದ್ದಿ ಅವರುಗಳನ್ನು ಸಿಐಡಿಯು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.
ಗೌರಿ ಹತ್ಯೆ: ಎಸ್ಐಟಿಯಿಂದ ಪುಣೆಯಲ್ಲಿ ಇಬ್ಬರು ಆರೋಪಿಗಳ ವಿಚಾರಣೆ
ಚಿಂತಕರ ಕೊಲ್ಲಲೆಂದು 22 ಮಂದಿಗೆ ತರಬೇತಿ
ಕಲಬುರ್ಗಿ ಹತ್ಯೆ ರಹಸ್ಯ ಬಯಲಾಗುತ್ತಿದ್ದಂತೆ, ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್ ಅವರ ಕೊಲೆ ರಹಸ್ಯಗಳೂ ಬಯಲಾಗುವ ನಿರೀಕ್ಷೆ ಹುಟ್ಟಿಸಿದೆ. ಬಲಪಂಥೀಯ ಸಂಘಟನೆಗೆ ಸಂಬಂಧಿಸಿದ ಕೆಲವರು 22 ಯುವಕರಿಗೆ ಬಂದೂಕು ಚಲಾಯಿಸುವ ತರಬೇತಿ ನೀಡಿ ಚಿಂತಕರನ್ನು ಕೊಲ್ಲಲೆಂದೇ ಸಜ್ಜುಗೊಳಿಸಿದ್ದರು ಎನ್ನಲಾಗಿದೆ. ಹಾಗಾಗಿ ಈ ಮುಂಚಿನ ಇನ್ನೂ ಕೆಲವು ಚಿಂತಕರ ಹತ್ಯೆಗಳ ರಹಸ್ಯವೂ ಬಯಲಾಗುವ ಸಾಧ್ಯತೆ ದಟ್ಟವಾಗಿದೆ.