ಕಳಸಾ ಬಂಡೂರಿ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಿ
ಹುಬ್ಬಳ್ಳಿ, ಅಕ್ಟೋಬರ್, 29: ಕಳಸಾ ಬಂಡೂರಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರಾಜ್ಯಾದ್ಯಂತ ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಮತ್ತು ವಿವಿಧ ಸಂಘಟನೆಗಳು ಗುರುವಾರ ಒತ್ತಾಯಿಸಿವೆ.
ಶಾಸಕ ಸಂಭಾಜಿ ಪಾಟೀಲ ಸೇರಿದಂತೆ ನಾನಾ ಸದಸ್ಯರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೇಲೆ ಕಿಡಿಕಾರಿದೆ.[ಕರ್ನಾಟಕ-ಗೋವಾ ನಡುವೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುತ್ತಾ?]
'ಶಾಸಕ ಸಂಭಾಜಿ ಪಾಟೀಲ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರಿಗೆ ಪ್ರ ಬರೆದು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಯಾವುದೇ ರೀತಿಯಲ್ಲೂ ಸಹಕಾರ ನೀಡಬಾರದು ಎಂದಿದ್ದಾರೆ.ಹಾಗಾಗಿ ಶಾಸಕ ಸಂಭಾಜಿ ಪಾಟೀಲ, ಶಾಸಕ ಅರವಿಂದ ಪಾಟೀಲ ಸೇರಿದಂತೆ ಎಮ್ಇಎಸ್ ಸಂಘಟನೆಯನ್ನು ಕರ್ನಾಟಕದಿಂದ ನಿಷೇಧ ಮಾಡಬೇಕು' ಎಂದು ಕರ್ನಾಟಕ ನವನಿರ್ಮಾಣ ಸೇನೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಕಳಸಾ-ಬಂಡೂರಿ ವಿಚಾರದಲ್ಲಿ ರಾಜ್ಯದ ನಡುವೆ ದ್ವೇಷದ ಕಿಚ್ಚು ಹಚ್ಚಿ, ಕುಡಿಯುವ ನೀರಿನ ಯೋಜನೆಗೆ ಕಲ್ಲು ಹಾಕುತ್ತಿದೆ. ಬೆಳಗಾವಿ ಗಡಿ ವಿಚಾರ ಸೇರಿದಂತೆ ಕನ್ನಡಿಗರ ಸ್ವಾಭಿಮಾನವನ್ನು ಪದೇ ಪದೇ ಕೆಣಕುತ್ತಿದೆ. ಈ ರೀತಿ ಕುತಂತ್ರ ನಡೆಸುತ್ತಿರುವ ಎಮ್ಇಎಸ್. ನಾಯಕರಿಗೆ ಕರ್ನಾಟಕ ನವನಿರ್ಮಾಣ ಸೇನೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ. ಕೂಡಲೇ ಸರಕಾರ ಎಮ್ಇಎಸ್. ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೇನಾ ಕಾರ್ಯಕರ್ತರು ಸಿದ್ಧರಾಮಯ್ಯನವರಿಗೆ ಮುಖಂಡರು ಎಚ್ಚರಿಸಿದ್ದಾರೆ