ಚುನಾವಣಾ ಅಕ್ರಮ: C-VIGIL ಮೂಲಕ ದೂರು ಕೊಡುವುದು ಹೇಗೆ?
ಬೆಂಗಳೂರು, ಮಾರ್ಚ್ 24: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ.
ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಮತದಾರರಿಗೆ ಕುಕ್ಕರ್, ಸ್ಟೌವ್, ಸೀಲಿಂಗ್ ಫ್ಯಾನ್ ಸೇರಿದಂತೆ ವಿವಿಧ ವಸ್ತುಗಳನ್ನು ಹಂಚುವ ಮೂಲಕ ಅಕ್ರಮ ಎಸಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಈ ಕುರಿತು ಹದ್ದಿನ ಕಣ್ಣಿಟ್ಟಿದ್ದಾರೆ.

ಆದರೆ ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಲು ಜನರ ನೆರವು ಸಹ ಅಗತ್ಯವಾಗಿದೆ. ಜನರು ದೂರು ನೀಡಲು ಚುನಾವಣಾ ಆಯೋಗದ CVIGIL ಎಂಬ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಬಹುದು. ಇದು ಜನರು ಮಾದರಿ ನೀತಿ ಸಂಹಿತೆ ಮತ್ತು ಚುನಾವಣೆಯ ಸಮಯದಲ್ಲಿ ನಿಯಮ ಉಲ್ಲಂಘನೆಯನ್ನು ವರದಿ ಮಾಡಲು ರೂಪಿಸಿರುವ ಒಂದು ನವೀನ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಸಿ-ವ್ಹಿಜಿಲ್ ಎಂದರೆ ವಿಜಿಲೆಂಟ್ ಸಿಟಿಜನ್ ಎಂದು ಅರ್ಥ. ಈ ಸಿ-ವ್ಹಿಜಿಲ್ ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಮುಕ್ತತೆ ಕಾಪಾಡಲು ನಾಗರಿಕರ ಪಾತ್ರ, ಜವಾಬ್ದಾರಿಯನ್ನು ತಿಳಿಸುತ್ತದೆ. ಈ ಅಪ್ಲಿಕೇಶನ್ ಮೂಲಕ ದೂರು ನೀಡಿದರೆ 100 ನಿಮಿಷದಲ್ಲಿ ಪರಿಹಾರ ಮಾಡಲಾಗುತ್ತದೆ.
ಬಳಕೆ ಮಾಡುವುದು ಹೇಗೆ?; ಕ್ಯಾಮೆರಾ, ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಪಿಎಸ್ ಹೊಂದಿರುವ ಯಾವುದೇ ಅಂಡ್ರಾಯ್ಡ್ ಫೋನ್ಗಳಲ್ಲಿಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣಾ ನಿಮಯ ಉಲ್ಲಂಘಿಸುವ ಚಟುವಟಿಕೆಯ ಚಿತ್ರ ಅಥವಾ 2 ನಿಮಿಷಗಳ ವೀಡಿಯೊವನ್ನು ಕ್ಲಿಕ್ ಮಾಡಿ ಮತ್ತು ದೂರನ್ನು ಸುಲಭವಾಗಿ ನೋಂದಾಯಿಸಬಹುದು.
ದೂರಿನೊಂದಿಗೆ ಸೆರೆಹಿಡಿಯಲಾದ ಚಿತ್ರ, ವಿಡಿಯೋ ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೈಯಿಂಗ್ ಸ್ಕ್ಯಾಡ್ಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಇದು ಅನುಕೂಲ ಮಾಡಿಕೊಡುತ್ತದೆ.
ಸಿವಿಜಿಲ್ ಆ್ಯಪ್ ಮೂಲಕ ಜನರು ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸಿವಿಜಿಲ್ ಆಪ್ನಲ್ಲಿ ದೂರು ಕೊಡುವಾಗ ಜನರು ತಮ್ಮ ಹೆಸರನ್ನು ಬಹಿರಂಗಗೊಳಿಸಬಹುದು ಅಥವಾ ಅನಾಮಧೇಯವಾಗಿಯೂ ಇಡಲು ಸಹ ಅವಕಾಶವಿದೆ.
ಜಿಲ್ಲೆಗಳಲ್ಲಿ ಈಗಾಗಲೇ ಕಂಟ್ರೋಲ್ ರೋಮ್ ಸ್ಥಾಪಿಸಿದ್ದು ಸಿ-ವ್ಹಿಜಿಲ್ ತಂಡ ಕಾರ್ಯವನ್ನು ಆರಂಭಿಸಿದೆ. ಸಿ-ವ್ಹಿಜಿಲ್ ಮುಖಾಂತರ ದಾಖಲಾಗುವ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸಿ-ವ್ಹಿಜಿಲ್ ದೂರನ್ನು ಪರಿಶೀಲಿಸಲು ದಿನದ 24 ಗಂಟೆಯೂ ನಿರಂತರ ನಿಗಾವಹಿಸಿ, ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರವಹಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ಗಡಿಭಾಗ ಹೊಂದಿರುವಂತಹ ಜಿಲ್ಲೆಯ ಚೆಕ್ಪೋಸ್ಟ್ಗಳ ಮೇಲೆ ನಿಗಾವಹಿಸಬೇಕು.
ಅಕ್ರಮ ಮದ್ಯ, ಅನಧಿಕೃತವಾಗಿ ಸಾಗಿಸುವ ಹಣ, ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಬೇಕು. ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯಲು, ಚುನಾವಣಾ ಅಕ್ರಮ ಮತ್ತು ಮತದಾರನನ್ನು ಆಸೆ ಆಮಿಷಗಳಿಗೆ ಒಳಪಡಿಸುವುದನ್ನು ತಡೆಯಲು ನೇರವಾಗಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಹಾಕಲು ಕ್ರಮ ಜರುಗಿಸಲು ಚುನಾವಣಾ ಆಯೋಗವು ರೂಪಿಸಿರುವ ಸಿ-ವಿಜಿಲ್ ಅಪ್ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಹೇಳಿದರು.
ಸಾರ್ವಜನಿಕರು ಸಿ-ವಿಜಿಲ್ ಆಪ್ ಮೂಲಕ ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು. ಇದು ಗೌಪ್ಯವಾಗಿರಲಿದೆ. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.












Click it and Unblock the Notifications