ಖರ್ಗೆಯವರ ಟ್ರಸ್ಟ್ಗೆ ನಿಯಮ ಮೀರಿ ತರಾತುರಿಯಲ್ಲಿ 5 ಎಕರೆ ಜಮೀನು: ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 28: ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯವರ ಟ್ರಸ್ಟ್ಗೆ ನಿಯಮ ಮೀರಿ ತರಾತುರಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ತರಾತುರಿಯಲ್ಲಿ ನೀಡಿರುವುದರ ಹಿಂದಿನ ಉದ್ದೇಶ ಏನು? ಒಂದೇ ದಿನದಲ್ಲಿ ಜಾಗ ಮಂಜೂರು ಮಾಡಿದ್ದಾರೆ. ಮರುದಿನವೇ (6ರಿಂದ) ಮಂಜೂರಾತಿ ಪತ್ರವೂ ಕೊಟ್ಟಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಎಂಡ್ ಡಿ) ಕೇಂದ್ರ, ಇನೊವೇಶನ್, ಎಕ್ಸಲೆನ್ಸ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಎಜುಕೇಶನಲ್ ಇನ್ಸ್ಟಿಟ್ಯೂಟ್, ಬ್ಯಾಂಕ್ ಮೊದಲಾದವುಗಳಿಗೆ ಸೌಲಭ್ಯ ನೀಡುವ ನಿವೇಶನ ಎಂದು ತಿಳಿಸಿದ್ದಾರೆ. ಇದೇ ಕೆಐಎಡಿಬಿ 14-2-2023ರಂದು ಒಂದು ಅಧಿಕೃತ ಜ್ಞಾಪಕ ಪತ್ರ ಬಿಡುಗಡೆ ಮಾಡಿತ್ತು. ಜನವರಿ 12ರ ಸಭೆಯ ನಿರ್ಧಾರ ಅದಾಗಿತ್ತು.

ಕೈಗಾರಿಕಾ ಪ್ರದೇಶದಲ್ಲಿ ಲಭ್ಯ ವಾಣಿಜ್ಯ ಉದ್ದೇಶದ ನಿವೇಶನಗಳನ್ನು 10 ವರ್ಷಗಳ ಲೀಸ್- ಸೇಲ್ ಡೀಡ್ ಮೂಲಕ ಏಲಂನಲ್ಲಿ ನಿಗದಿತ ದರದ ದುಪ್ಪಟ್ಟು ಮೊತ್ತಕ್ಕೆ ನೀಡಲು ನಿರ್ಧರಿಸಿದ್ದರು. ಟ್ರೇಡಿಂಗ್, ಬ್ಯಾಂಕಿಂಗ್, ಹೋಟೆಲ್, ರೆಸ್ಟೋರೆಂಟ್, ಕೆಫೆ, ಥಿಯೇಟರ್ ಮೊದಲಾದವು ವಾಣಿಜ್ಯ ಉದ್ದೇಶದವು ಎಂದು ವಿವರಿಸಿದ್ದಾರೆ. ಆದರೆ, ಕಲಬುರ್ಗಿಯಲ್ಲಿ ವಾಣಿಜ್ಯ ದರದ ಬದಲು ಸಿ.ಎ. ದರ ಮಾಡಿದ್ದಾರೆ ಎಂದು ಟೀಕಿಸಿದರು.
ಒಂದು ವರ್ಷವಾಗುವ ಮೊದಲೇ ಕಮರ್ಷಿಯಲ್ ಇದ್ದ, ನಿಯಮವನ್ನು ಬದಲಿಸಿದ್ದಾರೆ. ಕಮರ್ಷಿಯಲ್ ನಿವೇಶನಗಳನ್ನು ಸಾರ್ವಜನಿಕ ಏಲಂ ಮಾಡದೆ ತರಾತುರಿಯಲ್ಲಿ ಮಂಜೂರು ಮಾಡಿದ್ದಾರೆ. ಕಮರ್ಷಿಯಲ್ ಉದ್ದೇಶ ಆಗಿದ್ದರೆ ಮೂಲ ದರ ಎಕರೆಗೆ 2.5 ಕೋಟಿ ಇದ್ದರೆ, ದುಪ್ಪಟ್ಟು ದರಕ್ಕೆ ಅಂದರೆ 5 ಕೋಟಿಗೆ ನಿಗದಿ ಮಾಡಿ ಹರಾಜು ಮಾಡಬೇಕಿತ್ತು. ಆಗ ಅದು ಏಲಂನಲ್ಲಿ 10 ಕೋಟಿ ಅಥವಾ 15 ಕೋಟಿಗೆ ಮಾರಾಟ ಆಗುವ ಸಾಧ್ಯತೆ ಇತ್ತು ಎಂದು ವಿವರಿಸಿದರು. ಆದರೆ, ಇಲ್ಲಿ ಸಿಎ ಜಾಗ ಎಂದು ಪರಿಗಣಿಸಿ ಅದೇ ದರಕ್ಕೆ ನೀಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕೆಐಎಡಿಬಿಯಲ್ಲಿ ಕೆಲವರು ಸಿಎ ಸೈಟ್ ಪಡೆದಿದ್ದು, ಮಾನ್ಯ ಖರ್ಗೆಯವರ ಕುಟುಂಬದ ಒಂದು ಟ್ರಸ್ಟಿಗೆ 5 ಎಕರೆ ಜಮೀನು ಕೊಡಲಾಗಿದೆ ಎಂದು ಗಮನ ಸೆಳೆದರು. ಒಂದು ಟ್ರಸ್ಟಿನಲ್ಲಿ ಪ್ರಭಾವ (ಇನ್ಫ್ಲುಯೆನ್ಸ್) ಇರಬಾರದು ಅಥವಾ ಸರಕಾರಿ ಅಧಿಕಾರ ಸ್ಥಾನದಲ್ಲಿ ಇರುವವರು ಇರಬಾರದು ಎಂದಿದೆ. ಆದರೆ, ಪ್ರಿಯಾಂಕ್ ಖರ್ಗೆಯವರು ಕ್ಯಾಬಿನೆಟ್ ಸಚಿವರಾಗಿದ್ದು, ಸರಕಾರದಿಂದ ಈ ಸವಲತ್ತು ಪಡೆದಿದ್ದಾರೆ ಎಂದು ಆಕ್ಷೇಪಿಸಿದರು.
ಹಲವಾರು ನ್ಯೂನತೆಗಳು ಆಗಿವೆ. ಕೆಐಎಡಿಬಿಯಲ್ಲಿ ಸಿಎ ಸೈಟ್ ಗಳನ್ನು ಏಲಂ ಮೂಲಕ ನೀಡುವ ಪದ್ಧತಿ ಮೊದಲಿನಿಂದ ಇದೆ. ಇಲ್ಲಿ ಪಾರ್ಕ್, ವಿದ್ಯಾಸಂಸ್ಥೆ, ಪೆಟ್ರೋಲ್ ಬಂಕ್ ಮೊದಲಾದ ವಿಚಾರಗಳನ್ನು ದಾಖಲಿಸಿಲ್ಲ. ಇದು ಮೊದಲ ತಪ್ಪು. ಉದ್ದೇಶವನ್ನು ಲೆಟರ್ ಹೆಡ್ನಲ್ಲಿ ಬರೆದುಕೊಡಿ ಎಂದು ತಿಳಿಸಿ ಪಡೆದು ಅದರ ಪ್ರಕಾರ ಜಾಗ ಕೊಡಲಾಗಿದೆ ಎಂದು ಟೀಕಿಸಿದರು.
5-2-2024ರಂದು ತೀರ್ಮಾನ ಮಾಡಿ ಫೆ. 8ರಿಂದ ವೆಬ್ ಸೈಟಿನಲ್ಲಿ ಅರ್ಜಿ ಲಭಿಸುತ್ತದೆ, ಅದನ್ನು ಡೌನ್ಲೋಡ್ ಮಾಡಿ ಫೆ. 23ರೊಳಗೆ ಅರ್ಜಿಗಳನ್ನು ಹಾಕಲು ತಿಳಿಸಿದ್ದರು. ಒಂದು ತಿಂಗಳ ಬದಲಾಗಿ ಕೇವಲ 14 ದಿನಗಳನ್ನು ಕೊಟ್ಟಿದ್ದರು ಎಂದು ದೂರಿದರು. ಇದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದಲೇ ಕೇವಲ 14 ದಿನಗಳನ್ನು ನೀಡಿದ್ದರು ಎಂದು ಆರೋಪಿಸಿದರು.
ಮಾರ್ಚ್ 4ರಂದು ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಂದೇ ದಿನ ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿ, ಮರುದಿನವೇ ಸಂಜೆ 5 ಗಂಟೆಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ. 6ರಿಂದ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ವಿವರಿಸಿದರು.
12 ಜಿಲ್ಲೆಗಳಲ್ಲಿ 193 ಸಿ.ಎ. ಸೈಟ್ಗಳಿವೆ. ಇವು ಒಟ್ಟು 377.69 ಎಕರೆ ಇದ್ದು, 283 ಅರ್ಜಿಗಳಿದ್ದವು. 30 ದಿನಗಳ ಕಾಲ ನೀಡಿದ್ದರೆ ಇನ್ನಷ್ಟು ಅರ್ಜಿ ಬರುತ್ತಿತ್ತು. ಅಧಿಸೂಚನೆ ಹೊರಡಿಸಿದ್ದೇ ಜನರಿಗೆ ಗೊತ್ತಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಆಗಿದೆ. ಇದು ಕೆಐಎಡಿಬಿ ಚರಿತ್ರೆಯ ಬಹು ದೊಡ್ಡ ಪ್ರಮಾದ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ವಿಜಯಪುರದ ಹಲಗನಿಯ ಈಶ್ವರ್ ಸಂಗಪ್ಪ ಬದ್ರಿ ಅವರ 3 ಸ್ಟಾರ್ ಹೋಟೆಲ್ಗೆ ಸಿ.ಎ. ಸೈಟ್ ಕೊಡಲಾಗಿದೆ. ಅದು ವಾಣಿಜ್ಯ ಉದ್ದೇಶದ್ದು, ಅದನ್ನು ಏಲಂ ಮಾಡಬೇಕಿತ್ತು. 2.5 ಎಕರೆಗೆ ದುಪ್ಪಟ್ಟು ದರದಲ್ಲಿ ಕಡಿಮೆ ಎಂದರೂ 12.5 ಕೋಟಿ ಸಿಗಬೇಕಿತ್ತು ಎಂದು ಉದಾಹರಣೆ ಕೊಟ್ಟರು. ಬಿಡದಿಯಲ್ಲಿ ಸುನಿತಾ ರಾಜಶೇಖರ್ ಅವರಿಗೆ ಅಪಾರ್ಟ್ಮೆಂಟ್ ನಿರ್ಮಿಸಲು ಜಾಗ ಕೊಟ್ಟಿದ್ದು, ಇದು ಸೌಲಭ್ಯದಡಿ ಬರುವುದೇ ಅಥವಾ ವಾಣಿಜ್ಯ ಉದ್ದೇಶದ್ದೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಹಾರೋಹಳ್ಳಿಯಲ್ಲಿ ಸ್ಕಿಲ್ ಡೆವಲಪ್ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಎಸ್ಸಿಗಳಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಇದೂ ಒಂದು ಹಗರಣ. ಮೂಡದಲ್ಲಿ ನಡೆದ ಮಾದರಿಯಲ್ಲೇ ಇದೊಂದು ಲೂಟಿ. ಒಂದೇ ತಿಂಗಳಲ್ಲಿ, ಸಂಸತ್ ಚುನಾವಣೆಗೆ ಮೊದಲು ಇದೆಲ್ಲ ನಡೆದಿದೆ. ಇದರ ಉದ್ದೇಶ ಏನು? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆ ಮಾಡಿದರು. ಇಲ್ಲಿ ಒಂದೇ ತಿಂಗಳಲ್ಲಿ ನಿವೇಶನ ನೀಡಿಕೆ ನಡೆದಿದೆ. ಆದರೆ, ನೀವು ಬೇರೆ ಅರ್ಜಿಗಳಿಗೆ ಸೈಟ್ ಕೊಡಲು 2 ವರ್ಷ, 3 ವರ್ಷ ಯಾಕಾಗುತ್ತಿದೆ ಎಂದು ಕೇಳಿದರು. 72 ದಲಿತ ಸಂಘಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಕೆಐಎಡಿಬಿ, ಖರ್ಗೆ ಕುಟುಂಬಕ್ಕೆ ಮಾತ್ರ ಭೂಮಿಯನ್ನು ನೀಡುತ್ತಾರೆ ಆದರೆ ಬೇರೆ ಕುಟುಂಬಕ್ಕೆ ನೀಡುವುದಿಲ್ಲ. ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ತುರಿತಗತಿಯಲ್ಲಿ ಕೇವಲ 20 ದಿನಗಳಲ್ಲಿ ಖರ್ಗೆ ಕುಟುಂಬಕ್ಕೆ ಭೂಮಿಯನ್ನು ಮಂಜೂರು ಮಾಡುತ್ತಾರೆ.
ಗುಲ್ಬರ್ಗದಲ್ಲಿ ಮಂಜೂರಾಗಿರುವ ಭೂಮಿಯಲ್ಲಿ ಖರ್ಗೆ ಕುಟುಂಬ ಒಬ್ಬರಿಗೂ ಇಲ್ಲಿಯವರೆಗೂ ಕೌಶಲಾಭಿವೃದ್ಧಿ ಮಾಡಿಲ್ಲ. ಆದರೆ, ಬೆಂಗಳೂರಿನಲ್ಲಿ ಮಾತ್ರ ಭೂಮಿ ಪಡೆಯಲು ಯಶಸ್ವಿಯಾಗಿದೆ. ದಲಿತರ ಕೋಟಾದಲ್ಲಿ ಭೂಮಿ ರಾಜಕಾರಣ ಮಾಡಿದ್ದಾರೆ. ಅರ್ಹ ದಲಿತರಿಗೆ ಪಂಗನಾಮ ಹಾಕುವ ಖರ್ಗೆ ಕುಟುಂಬ ಎಂದು ಟೀಕಿಸಿದರು.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications