ಹುಣಸೂರಿನದ್ದು ಪ್ರಜ್ವಲ್ ರೇವಣ್ಣ ಟ್ರೇಲರ್, ಸಿನಿಮಾ ಬಾಕಿ ಇದೆ!
ಮೈಸೂರು, ಜುಲೈ 7: ಹುಣಸೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಬದಿಗೆ ಸರಿಸಿ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಮಗ್ಗುಲ ಮುಳ್ಳಾಗಿ ಚುಚ್ಚುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಇಷ್ಟಕ್ಕೂ ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣಮಂಟಪದಲ್ಲಿ ಜೆಡಿಎಸ್ ಜಾಗೃತಿ ಸಮಾವೇಶ ನಡೆಸುವ ಅಗತ್ಯತೆ ಇತ್ತೆ ಎಂಬ ಪ್ರಶ್ನೆಯೂ ಮೂಡತೊಡಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ನ ಪ್ರಥಮ ದರ್ಜೆ ನಾಯಕರು, ಶಾಸಕರಾದಿಯಾಗಿ ಪಾಲ್ಗೊಂಡು ಪಕ್ಷದ ಸಂಘಟನೆ ಕುರಿತಂತೆ ರಣ ಕಹಳೆ ಊದಿದ್ದರು.
ಅದಾದ ಕೆಲವೇ ದಿನಕ್ಕೆ ಪ್ರಮುಖ ನಾಯಕರ ಗೈರು ಹಾಜರಿಯಲ್ಲಿ ತಳಮಟ್ಟದ ಕೆಲವು ನಾಯಕರ ಸಮ್ಮುಖದಲ್ಲಿ ದಿಢೀರ್ ಆಗಿ ಜೆಡಿಎಸ್ ಜಾಗೃತಿ ಸಮಾವೇಶ ನಡೆಸಿರುವುದು ಉದ್ದೇಶವೇ ಪ್ರಶ್ನಾರ್ಹವಾಗಿದೆ. ಹುಣಸೂರಿನಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಜ್ವಲ್ ರೇವಣ್ಣ ತಮ್ಮ ನೋವುಗಳನ್ನು ಹೊರ ಹಾಕಲು ಈ ಸಮಾವೇಶ ನಡೆಯಿತೇ ಎಂಬ ಪ್ರಶ್ನೆಯೂ ಮೇಲೇಳತೊಡಗಿದೆ.

ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎಂದ ಎಚ್ ಡಿಕೆ
ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರಕ್ಕೆ ಸ್ಪರ್ಧಿಸುವ ಸಲುವಾಗಿಯೇ ಕಳೆದ ಕೆಲ ಸಮಯದಿಂದ ಕ್ಷೇತ್ರದಲ್ಲಿ ಓಡಾಡಿ, ಸಭೆ, ಸಮಾರಂಭಗಳನ್ನು ಹಮ್ಮಿಕೊಂಡು ಜನರ ಮಧ್ಯೆ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೆ ಇದಕ್ಕೆ ಅಡ್ಡಗಾಲು ಹಾಕಿದ ಚಿಕ್ಕಪ್ಪ ಎಚ್.ಡಿ.ಕುಮಾರ ಸ್ವಾಮಿ ಅವರು ತಮ್ಮ ಕುಟುಂಬದಿಂದ ರೇವಣ್ಣ ಹಾಗೂ ನಾನು ಹೊರತುಪಡಿಸಿ ಬೇರೆ ಯಾರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಹೇಳಿಕೆ ನೀಡಿದರು.

ಪ್ರಜ್ವಲ್ ಆಸೆಗೆ ತಣ್ಣೀರು
ಆ ಮೂಲಕ ಪ್ರಜ್ವಲ್ ಅವರ ರಾಜಕೀಯ ಕನಸಿಗೆ ತಣ್ಣೀರು ಎರಚಿದ್ದರು. ಅಷ್ಟೇ ಅಲ್ಲ, ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ವಾಗ್ದಾನವನ್ನು ಕೂಡ ನೀಡಿಬಿಟ್ಟರು.

ಈಗಲೂ ಟಿಕೆಟ್ ಆಕಾಂಕ್ಷಿ
ಇದು ಈಗ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಅದರ ಮೊದಲ ಸುಳಿವು ಎಂಬಂತೆ ಪ್ರಜ್ವಲ್ ರೇವಣ್ಣ ತರಾತುರಿಯಲ್ಲಿ ಜೆಡಿಎಸ್ ಜಾಗೃತಿ ಸಮಾವೇಶ ಮಾಡಿ, ಆ ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಷ್ಟೇ ಅಲ್ಲ, ಈಗಲೂ ನಾನು ಹುಣಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಪಕ್ಷ ಹಾಗೂ ಕುಟುಂಬದಲ್ಲಿ ತಲ್ಲಣ
ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಎಂಬ ಪ್ರಜ್ವಲ್ ರೇವಣ್ಣ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಪಕ್ಷ ಹಾಗೂ ದೇವೇಗೌಡರ ಕುಟುಂಬದೊಳಗೆ ಒಂದಷ್ಟು ತಲ್ಲಣ ಉಂಟು ಮಾಡಿದೆ. ಅದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮೈಸೂರು ಸಮಾವೇಶದಲ್ಲಿ ಉತ್ತರ ಸಿಗಬಹುದು
ಜುಲೈ ತಿಂಗಳ ಕೊನೆಗೆ ಜೆಡಿಎಸ್ ಮೈಸೂರಲ್ಲಿ ಭಾರೀ ಸಮಾವೇಶವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೀಗ ನಡೆದಿರುವ ವಿದ್ಯಮಾನಗಳಿಗೆ ಬಹುಶಃ ಅಲ್ಲಿ ಉತ್ತರ ಸಿಕ್ಕರೂ ಸಿಗಬಹುದೇನೋ?

ಹಾಸನದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರಾ?
ಜೆಡಿಎಸ್ ಎನ್ನುವುದಕ್ಕಿಂತಲೂ ದೇವೇಗೌಡರ ಕುಟುಂಬದ ಭದ್ರಕೋಟೆ ಎಂದು ಬಿಂಬಿತವಾಗಿದ್ದ ಹಾಸನದಲ್ಲಿ ಪ್ರಾಬಲ್ಯ ಕೈತಪ್ಪಿ ಹೋಗುತ್ತಿದೆಯಾ ಎಂಬ ಅನುಮಾನವೂ ಮೂಡುತ್ತಿದೆ. ಅಲ್ಲಿಂದ ಹೊರಕ್ಕೆ ಬಂದು ಟಿಕೆಟ್ ಪಡೆಯಲು ಕುಟುಂಬದ ಸದಸ್ಯರು ಹವಣಿಸುತ್ತಿರುವುದು ಏಕೆ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಹೀಗಾದರೆ ಚುನಾವಣೆ ಕಷ್ಟ
ಸದ್ಯದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಹಾಸನದಲ್ಲಿ ಎಚ್.ಡಿ.ರೇವಣ್ಣ ಅವರು ಆಗಾಗ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆಗಳನ್ನು ನೀಡುವುದನ್ನು ಹೊರತುಪಡಿಸಿದರೆ ಜೆಡಿಎಸ್ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ನಡೆಯುತ್ತಿರುವುದು ವಿರಳ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಕೂಡ ಅಲ್ಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಹೀಗಿರುವಾಗ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು 2018ರ ವಿಧಾನಸಭಾ ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭ ಅಲ್ಲ.












Click it and Unblock the Notifications