ಸಂಸತ್ ಭವನ ಭದ್ರತಾ ಲೋಪ: ಆಗಂತುಕರಿಗೆ ಅಕಸ್ಮಾತ್ ಕಾಂಗ್ರೆಸ್ ಸಂಸದರಿಂದ ಪಾಸ್ ಸಿಕ್ಕಿದ್ದರೆ!
ಬುಧವಾರ ಸಂಸತ್ ಭವನದ ಮೇಲಿನ ದಾಳಿಗೆ 22 ವರ್ಷವಾದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ನಡೆದುಹೋಗಿದೆ. ವೀಕ್ಷಕರ ಗ್ಯಾಲರಿಯಿಂದ ಸಂಸತ್ ಸದಸ್ಯರ ಆಸನಗಳತ್ತ ನುಗ್ಗಿದ ಒಬ್ಬ ವ್ಯಕ್ತಿ ಘೋಷಣೆಗಳನ್ನು ಕೂಗಿದರೆ, ವೀಕ್ಷಕರ ಗ್ಯಾಲರಿಯಿಂದ ಮತ್ತೊಬ್ಬ ಸದನಲ್ಲಿ ಗ್ಯಾಸ್ ಕ್ಯಾನಿಸ್ಟರ್ ಎಸೆಯುವ ಮೂಲಕ ಆತಂಕ ಮೂಡಿಸಿದ್ದ.
ಪಾರ್ಲಿಮೆಂಟ್ನಲ್ಲಿ ಹಳದಿ ಬಣ್ಣದ ದಟ್ಟ ಹೊಗೆ ತುಂಬಿಕೊಂಡ ಬಳಿಕ ಕೆಲ ಕಾಲ ಆತಂಕ ಉಂಟಾಯಿತು. ನಂತರ ಸಂಸದರು ಒಟ್ಟಾಗಿ ಆಗಂತುಕನನ್ನು ಹಿಡಿದು, ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದರು. ಗ್ಯಾಲರಿಯಲ್ಲಿದ್ದ ಮತ್ತೊಬ್ಬನನ್ನು ಕೂಡ ಬಂಧಿಸಲಾಗಿದೆ.

ದಾಳಿ ಮಾಡಿದ ಇಬ್ಬರ ಗುರುತೂ ಕೂಡ ಪತ್ತೆ ಹಚ್ಚಲಾಗಿದೆ. ಮೈಸೂರಿನ ನಿವಾಸಿಗಳಾದ ಸಾಗರ್ ಶರ್ಮಾ ಮತ್ತು ಡಿ. ಮನೋಹರ್ ಎಂದು ಗುರುತಿಸಲಾಗಿದ್ದು, ಇಬ್ಬರಿಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಸಿಕ್ಕಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್
ಘಟನೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದ್ದು, ಭದ್ರತಾ ವೈಫಲ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಘಟನೆ ಬಗ್ಗೆ ಹಲವು ಅನುಮಾನಗಳನ್ನು ಕೂಡ ವ್ಯಕ್ತಪಡಿಸಿದ್ದು, ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಹಾಕಿದೆ.
ಟ್ವೀಟ್ನಲ್ಲಿ, ಸಂಸತ್ತಿಗೆ ನುಗ್ಗಿದ ಘಾತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹರಿಂದ. ಈ ದಾಳಿಕೊರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ? ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ? ಈ ಎಲ್ಲಾ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹರನ್ನು ವಶಕ್ಕೆ ಪಡೆದಿಲ್ಲವೇಕೆ? ದೇಶದಲ್ಲಿ ಭದ್ರತಾ ಲೋಪವಷ್ಟೇ ಅಲ್ಲ, ತನಿಖೆಯಲ್ಲಿ ಲೋಪವೂ ನಡೆಯುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಸಂಸದರಿಂದ ಪಾಸ್ ಸಿಕ್ಕಿದ್ದರೆ
ಸಂಸತ್ ಭವನದೊಳಗೆ ಟಿಯರ್ ಗ್ಯಾಸ್ ಸ್ಪೋಟಿಸಿದ ಆಗಂತುಕರಿಗೆ ಅಕಸ್ಮಾತ್ ಕಾಂಗ್ರೆಸ್ ಸಂಸದರಿಂದ ಪಾಸ್ ಸಿಕ್ಕಿದಿದ್ದರೆ ಬಿಜೆಪಿಗರು ಹೇಗೆ ವರ್ತಿಸುತ್ತಿದ್ದರು? ಈಗೇಕೆ ಬಿಜೆಪಿ ನಾಯಕರು ಏನೂ ಆಗಿಯೇ ಇಲ್ಲ ಎಂಬಂತೆ ಮುಗುಮ್ಮಾಗಿದ್ದಾರೆ? ಭದ್ರತಾ ಲೋಪದ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚದಿರುವುದೇಕೆ? ದೇಶ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಲ್ಲವೇ ಎಂದು ಕರ್ನಾಟಕ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.












Click it and Unblock the Notifications