ಕರ್ನಾಟಕ; ಮಳೆಗೆ ಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ ಪರಿಹಾರ
ದಾವಣಗೆರೆ, ಆಗಸ್ಟ್ 06; ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ-ನ್ಯಾಮತಿ ಹಾಗೂ ಹರಿಹರ ತಾಲೂಕಿನಲ್ಲಿ ಪ್ರವಾಹ ಭೀತಿ ಹೆಚ್ಚಾಗುತ್ತಿದೆ. ನದಿ ಮಟ್ಟ ಏರುತ್ತಿದ್ದಂತೆ ತಗ್ಗು ಪ್ರದೇಶಗಳ ಜನರ ಆತಂಕ ಸಹ ಹೆಚ್ಚಾಗಿದೆ. ಈ ತಾಲೂಕುಗಳಲ್ಲಿ ನೂರಾರು ಮನೆಗಳು ಧರೆಗುರುಳಿವೆ. ಸೇತುವೆಗಳು ಕೊಚ್ಚಿ ಹೋಗಿವೆ. ಜಮೀನುಗಳು ನೀರಿನಿಂದ ಆವೃತಗೊಂಡು ಬೆಳೆ ನಷ್ಟ ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಜಿಲ್ಲೆಗೆ ಉಸ್ತುವಾರಿಯಾಗಿ ನಿಯೋಜಿಸಲಾಗಿರುವ ಸಚಿವ ಭೈರತಿ ಬಸವರಾಜ್ ಆಗಮಿಸಿ, ಶುಕ್ರವಾರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.
ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ನೀರಿನ ರಭಸಕ್ಕೆ ಕೊಚ್ಚಿ ಹೋದ ಸೇತುವೆ ಪರಿಶೀಲಿಸಿದರು. ನೂತನ ಸೇತುವೆ ನಿರ್ಮಾಣಕ್ಕೆ ಎಷ್ಟು ಹಣ ತಗುಲುತ್ತದೆ ಎಂಬ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

5 ಲಕ್ಷ ರೂ. ಪರಿಹಾರ ಘೋಷಣೆ; ಇನ್ನು ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾದ ಮನೆಗೆ 5 ಲಕ್ಷ, ಶೇಕಡಾ 60 ರಿಂದ 70 ರಷ್ಟು ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ತಗ್ಗಿದ್ದರೂ, ತುಂಗಾಭದ್ರಾ ನದಿ ಉಕ್ಕಿಹರಿಯುತ್ತಿರುವ ಕಾರಣ ಹೊನ್ನಾಳಿ ಹಾಗೂ ಹರಿಹರ ತಾಲೂಕಿನಲ್ಲಿ ಪ್ರವಾಹ ಭೀತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಆತಂಕ ಕ್ಷಣಕ್ಷಣಕ್ಕೂ ಜಾಸ್ತಿ ಆಗುತ್ತಿದೆ.
ಕೋವಿಡ್ ಪರಿಸ್ಥಿತಿ; ಇನ್ನು ಕೊರೊನಾ ನಿಯಂತ್ರಣ ಮತ್ತು ಮಳೆ ಹಾನಿ ಪರಿಹಾರ ನೀಡುವ ಸಲುವಾಗಿ ದಾವಣಗೆರೆ ಜಿಲ್ಲೆಯ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವ ಭೈರತಿ ಬಸವರಾಜ್ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.

ಈ ವೇಳೆ ಮಳೆಯಿಂದ ಬದುಕು ಮೂರಾಬಟ್ಟೆಯಾಗಿದೆ. ವಾಸಿಸಲು ಮನೆಯಿಲ್ಲದೇ ಬೀದಿಗೆ ಬಿದ್ದಿದ್ದೇವೆ. ಈ ಮಳೆಗಾಲದಲ್ಲಿ ಹೇಗೆ ಜೀವನ ಸಾಗಿಸೋದು? ಎಂದು ಮನೆ ಕಳೆದುಕೊಂಡವರು ಸಚಿವರಲ್ಲಿ ಅಳಲು ತೋಡಿಕೊಂಡರು.
ಗ್ರಾಮದಲ್ಲಿ ಹಾನಿಗೊಳಗಾದ ಕೆಲ ಸ್ಥಳಗಳನ್ನು ವೀಕ್ಷಣೆ ಮಾಡಲು ಮೂಲಕ ನೈಜ ಪರಿಸ್ಥಿತಿಯನ್ನು ಅವಲೋಕಿಸಿದ ಸಚಿವರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಹರಿಹರ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿ ವರ್ಗದವರಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.
ಯಾವ ಖಾತೆ ಕೊಟ್ಟರೂ ಸರಿ; "ದಾವಣಗೆರೆ ಜಿಲ್ಲೆಗೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದಿದ್ದೆ. ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಂಟು ದಿನಗಳಾಗಿವೆ. ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ನಮಗೆಲ್ಲಾ ಜವಾಬ್ದಾರಿ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ, ಏನೆಲ್ಲಾ ತೊಂದರೆಯಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಕೇಳಿದ್ದಾರೆ" ಎಂದು ಸಚಿವರು ಹೇಳಿದರು.
"ಮುಖ್ಯಮಂತ್ರಿಗಳ ಈ ಆದೇಶದ ಮೇರೆಗೆ ಬಂದಿದ್ದೇನೆ. ಖಾತೆಗಳ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟದ್ದು. ಜವಾಬ್ದಾರಿ ಕೊಟ್ಟಿದ್ದು, ನಿರ್ವಹಣೆ ಮಾಡಲು ಬಂದಿದ್ದೇನೆ. ಯಾರಿಗೆ ಯಾವ ಖಾತೆ? ಎಂಬ ಬಗ್ಗೆ ಚರ್ಚೆಯಾಗಿಲ್ಲ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
"ನಾನು ಯಾವುದೇ ಖಾತೆ ಕೊಡಿ, ಇಂತಹ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಸಿಎಂ ಬಳಿ ಬೇಡಿಕೆ ಇಟ್ಟಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. 125 ರಿಂದ 130 ಶಾಸಕರಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಆಗದು. ಎಲ್ಲರೂ ನಮ್ಮವರೇ. ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ" ಎಂದರು.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮತ್ತು ಮಾಜಿ ಶಾಸಕ ರೋಷನ್ ಬೇಗ್ ಮನೆಗಳ ಮೇಲಿನ ಇಡಿ ದಾಳಿ ಬಗ್ಗೆ ಮಾತನಾಡಿದ ಸಚಿವರು, "ಯಾರು ತಪ್ಪು ಮಾಡಿದ್ದಾರೋ ಅವರ ಮನೆ ಮೇಲೆ ದಾಳಿ ಆಗುತ್ತೆ. ಇದಕ್ಕಾಗಿ ಅಧಿಕಾರಿಗಳ ತಂಡ ಇರುತ್ತೆ. ತನಿಖೆ ಮಾಡುತ್ತದೆ. ಬಿಜೆಪಿಯವರು ಇದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ದೂರು ನೀಡಲಿ. ಕ್ರಮ ಕೈಗೊಳ್ಳಲು ಹೇಳಲಿ" ಎಂದು ತಿರುಗೇಟು ನೀಡಿದರು.












Click it and Unblock the Notifications