Haveri: ಹೊಸರಿತ್ತಿ NES ಶಾಲೆಯ ಭೂ ಕಬಳಿಕೆದಾರರಿಗೆ ಕಾನೂನು ಎಚ್ಚರಿಕೆ ಕೊಟ್ಟ ಗ್ರಾಮಸ್ಥರು, ಆಗಿದ್ದೇನು? ಡಿಟೇಲ್ಸ್
ಹಾವೇರಿ: ಮಹನೀಯರು ನೆಲೆಸಿದ ಜಿಲ್ಲೆಯ ಹೊಸರಿತ್ತಿ ಗ್ರಾಮದಲ್ಲಿ ಮೂರು ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿವೆ. ವಿದ್ಯಾರ್ಜನೆಯಿಂದ ಮತ್ತಷ್ಟು ಹೆಸರಾಗಬೇಕಿದ್ದ ಸಂಸ್ಥೆಗಳು ಇದೀಗ ಅಡಳಿತ ಮಂಡಳಿಯ ದುರಾಸೆ, ಅಕ್ರಮ, ಭೂ ಕಬಳಿಕೆಯಿಂದ ಸುದ್ದಿಯಾಗಿವೆ. ಇಲ್ಲಿನ ರಾಷ್ಟ್ರೀಯ ಶಿಕ್ಷಣ ಸಮಿತಿ (NES) ಆಡಳಿತ ಮಂಡಳಿಯ ಪದಾಧಿಕಾರಿಗಳೇ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಸಿದ್ದು ಗುಟ್ಟಾಗೇನು ಉಳಿದಿಲ್ಲ. ಇದರ ವಿರುದ್ಧ ಇಂದು ಬುಧವಾರ (ಏಪ್ರಿಲ್ 29) ಗ್ರಾಮಸ್ಥರು, ಶಿಕ್ಷಣ ಸಂಸ್ಥೆಗಳ ನೂರಾರು ಹಳೇಯ ವಿದ್ಯಾರ್ಥಿಗಳು ಹೊಸರಿತ್ತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಲೋಕಾಯುಕ್ತಕ್ಕೆ ದೂರು ನೀಡುವ ಎಚ್ಚರಿಕೆ ನೀಡಿದರು.
ಎನ್ಇಎಸ್ ಶಿಕ್ಷಣ ಸಂಸ್ಥೆಯ ಜಾಗ ಕಬಳಿಕೆ ವಿರುದ್ಧ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು, ಪತ್ರಕರ್ತರು , ಕರವೇ ಸ್ವಾಭಿಮಾನಿ ಬಳಗ, ನಿವೃತ್ತ ಶಿಕ್ಷಕರು ಸೇರಿದಂತೆ ಇಡೀ ಗ್ರಾಮಸ್ಥರು ಹೋರಾಟದ ಕಹಳೆ ಮೊಳಗಿಸಿದ್ದಾರೆ. ಅದರ ಭಾಗವಾಗಿ ಗ್ರಾಮದ ಅತಿಥಿ ಗೃಹದಿಂದ ಮಾರುಕಟ್ಟೆ ರಸ್ತೆ, ಶ್ರೀ ಗುದ್ದಲಿಶಿವಯೋಗಿಶ್ವರ ಮಠದ ರಸ್ತೆ ಮಾರ್ಗವಾಗಿ ಕಬಳಿಕೆಯಾದ ಸಂಸ್ಥೆಯ ಜಾಗದವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ಉದ್ದಕ್ಕೂ ಆಡಳಿತ ಮಂಡಳಿಗೆ ಧಿಕ್ಕಾರ, ಎನ್ಇಎಸ್ ಉಳಿಸಿ ಘೋಷವಾಕ್ಯಗಳು ಮೊಳಗಿದವು. ನೂರಾರು ಮಂದಿ ಪಾಲ್ಗೊಂಡಿದ್ದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಮುಖಂಡರು ಆಗಿರುವ ಹೋರಾಟಗಾರರಾದ ಕೆಸಿ ಕೋರಿ ಅವರು, ಚಿತ್ತರಂಜನ್ ಕಲಕೋಟಿ, ಬಿಜಿ ಗೌರಿಮನಿ, ಸಿಸಿ ಕಲಕೋಟಿ, ವೀರಣ್ಣ ಪರಂಗಿ, ಬಸಪ್ಪ ನರಗುಂದ ಸೇರಿ ಕೆಲವು ಕೆಲವು ಧೀಮಂತರು ದಾನವಾಗಿ ಎನ್ಇಎಸ್ ಸಂಸ್ಥೆಗೆ ಜಾಗ ನೀಡಿದ್ದನ್ನು ಸ್ಮರಿಸಿದರು.
ಗ್ರಾಮಕ್ಕೆ ಇತ್ತೀಚೆಗೆ ಸರ್ಕಾರಿ ಪದವಿ ಕಾಲೇಜು ಮಂಜೂರಾಗಿತ್ತು. ಅದಕ್ಕಾಗಿ ಒಂದಷ್ಟು ಜಾಗ, ಅನುದಾನ ನೀಡಲು ಸರ್ಕಾರ ನಿರ್ಧರಿಸಿತಾದರೂ ಇದೇ ಎನ್ಇಎಸ್ ಆಡಳಿತ ಮಂಡಳಿ ಪದಾಧಿಕಾರಿಗಳು ಸರ್ಕಾರಿ ಕಚೇರಿಗಳಿಗೆ ಓಡಾಡಿ ಅದನ್ನು ರದ್ದಗೊಳಿಸುವಲ್ಲಿ ಸಫಲರಾದರು. ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಹಾಲಿ ಜಿ.ವಿ.ಎಚ್ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಯಿತು ಎಂದರು.
ಪದವಿ ಕಾಲೇಜು ನಿರ್ಮಾಣ ನೆಪದಲ್ಲಿ ಶಾಲೆ ಜಾಗ ಗುಳಂ
ಸದರಿ ಡಿಗ್ರಿ ಕಾಲೇಜು ಸ್ಥಾಪಿಸಲು ಹಣದ ಅಗತ್ಯವಿತ್ತು. ಹೀಗಾಗಿ ಊರ ಮಧ್ಯದಲ್ಲಿನ ಗ್ರಾ.ಪಂ ಮುಂದಿನ ಎನ್ಇಎಸ್ ಶಾಲೆಯ ಭೂಮಿಯನ್ನು ಮಾರಾಟ ಮಾಡಿದ್ದೇವೆ ಎಂದು ಆಡಳಿತ ಮಂಡಳಿ ಹೇಳಿದೆ. ಆದರೆ ಆ ಜಾಗವನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗಿದೆ ಎಂದು ಅವರು ಖಂಡಿಸಿದರು. ಜಾಗ ಮಾರಾಟದಲ್ಲಿ ಯಾವುದೇ ನಿಯಮ ಪಾಲಿಸದೇ ಸಂಸ್ಥೆಯಲ್ಲಿದ್ದವರೇ ಜಾಗ ಗುಳುಂ ಮಾಡಿದ್ದಾರೆ. ಕೂಡಲೇ ಎನ್ಇಎಸ್ ಸಂಸ್ಥೆ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಜಾಗ ಮರಳಿ ಸಂಸ್ಥೆಗೆ ಬಿಟ್ಟು ಕೊಡುವಂತೆ ಅವರು ಆಗ್ರಹಿಸಿದರು.
ಪತ್ರಕರ್ತ ಬಸವರಾಜ ಮರಳಿಹಳ್ಳಿ ಅವರು ಮಾತನಾಡಿ, ಇಂಥಹ ಅಕ್ರಮದಲ್ಲಿ ಭಾಗಿಯಾದವರು ಕಾನೂನಿನ ಹೊರತಾಗಿದ್ದಾರೆಯೋ ಎಂಬ ಅನುಮಾನ ಮೂಡಿದೆ. ಸಂಸ್ಥೆ ಜಾಗ ಲಪಟಾಯಿಸಿದ್ದಲ್ಲದೇ ತಮ್ಮ ದುಡ್ಡಿನಿಂದ ತಾವು ಖರೀದಿಸಿದ್ದಾಗಿ ಸಮರ್ಥನೆ ಸಹ ನೀಡುತ್ತಾರೆ. ಸಾರ್ವಜನಿಕ ಜಾಗ ಸಾರ್ವಜನಿಕ ಉಪಯೋಗಕ್ಕೆ ಆಗಬೇಕೆ ವಿನಃ ಸ್ವಂತಕ್ಕಲ್ಲ ಎಂಬ ಸಾಮಾನ್ಯ ಜ್ಞಾನ, ಕಾನೂನಿನ ಅರಿವು ಎನ್ಇಎಸ್ ಆಡಳಿತ ಮಂಡಳಿ ಸದಸ್ಯರಿಗೆ ಇಲ್ಲವಲ್ಲ ಎಂದು ಕಿಡಿ ಕಾರಿದರು.

ನಿಯಮ ಪಾಲಿಸದ ಪದಾಧಿಕಾರಿಗಳು
ಇವರಿಗೆ ಕಾನೂನಿನ ಅರಿವಿಲ್ಲ, ಬೈಲಾ (ನೋಂದಣಿ/ರಿನಿವಲ್), ಸಂಸ್ಥೆ ನಿರ್ವಹಣೆ ಬಗ್ಗೆ ಮೊದಲೇ ಗೊತ್ತಿಲ್ಲ. ಒಂದು ಅನುದಾನಿತ ಶೈಕ್ಷಣಿಕ ಸಂಸ್ಥೆಯು ಸರ್ಕಾರ ನಿಯಮಗಳಡಿ ಬರುತ್ತದೆ. ಸಂಸ್ಥೆಯು ಎಲ್ಲ ನಿಯಮಗಳನ್ನು ಪಾಲಿಸಬೇಕಿರುತ್ತದೆ. ಒಂದು ವೇಳೆ ಡಿಗ್ರಿ ಕಾಲೇಜು ಸ್ಥಾಪಿಸಲು ಹಣದ ಅಗತ್ಯವಿದ್ದು ಸದರಿ ಸಂಸ್ಥೆಯ ಖಾಲಿ ಜಾಗವನ್ನು ಮಾರಾಟ ಮಾಡಬೇಕಾಗಿದ್ದೇ ಆದ್ದಲ್ಲಿ ಆಡಳಿತ ಮಂಡಳಿಯವರು ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅದು ಇಲ್ಲಿ ಆಗಿಲ್ಲ. ಸರ್ಕಾರದ ಅನುಮತಿಗೆ ಇಲ್ಲದೇ ಮಾರಾಟ ಮಾಡುವ ಹಾಗಿಲ್ಲ. ಸಂಸ್ಥೆ ಜಾಗಕ್ಕೆ ನೀವೇ ಇಂತಿಷ್ಟು ಎಂದು ಹಣ ನಿಗದಿ ಮಾಡಿ, ನೀವೇ ಮಾರಾಟ ಮಾಡಿ, ನೀವೇ ಜಾಗ ಖರೀದಿಸಿದ್ದೀರಿ. ಇದರಲ್ಲಿ ಪಾರದರ್ಶಕತೆ ಎಲ್ಲಿಂದ ಬಂತು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಪದಾಧಿಕಾರಿಗಳ ಹೆಸರಿನಲ್ಲಿ ಅಕ್ರಮವಾಗಿ ಜಾಗದ ನೋಂದಣಿ ಆಗಿದೆ. ಮತ್ತೊಂದೆಡೆ ಹೊಸ ಡಿಗ್ರಿ ಕಾಲೇಜು ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಇಡೀ ಗ್ರಾಮಸ್ಥರೇ ಕಂಡಿದ್ದಾರೆ. ಇದೆಲ್ಲ ನೋಡಿ ಸಾಕಾಗಿದ್ದ ಗ್ರಾಮಸ್ಥರು ಇನ್ನೇನು ಹೋರಾಟ ಆರಂಭಿಸಬೇಕು ಆ ಹೊತ್ತಿನಲ್ಲಿ ಮಾತು ಬದಲಿಸುವ ಪದಾಧಿಕಾರಿಗಳು ಒಮ್ಮೆ ರಾಜೀನಾಮೆ ನೀಡುವುದಾಗಿ ಹೇಳಿದರೆ ಮತ್ತೊಮ್ಮೆ ಜಾಗ ಬಹಿರಂಗ ಹರಾಜಿಗೆ ಸಿದ್ದವೆಂದು ಹೇಳುತ್ತಿದ್ದಾರೆ. ಎನ್ಇಎಸ್ ಅನ್ನು ತಾವೇ ಕಟ್ಟಿ ಬೆಳೆಸಿದ್ದೇವೆಂದು ಹೇಳಿಕೊಳ್ಳುವ ಹಿರಿತಲೆಗಳಿಗೂ ಕಾನೂನಿನ ಅರಿವಿಲ್ಲ. ಯಾವ ನಿಯಮ ಪಾಲಿಸಲಾಗಿಲ್ಲ. ಅವರದ್ದು ಸದರಿ ಎನ್ಇಎಸ್ ಶಿಕ್ಷಣ ಸಂಸ್ಥೆಗೆ ಕೊಡುಗೆ ಶೂನ್ಯವೆಂದು ಅವರು ಲೇವಡಿ ಮಾಡಿದರು.
ಕಾನೂನಾತ್ಮಕ ಸಂಘರ್ಷಕ್ಕೆ ನೀವೇ ಹೊಣೆ
ಈಗಲೇ ರಾಜೀನಾಮೆ ನೀಡದಿದ್ದರೆ ಸರ್ಕಾರವೇ ನಿಮ್ಮನ್ನು ಕಾನೂನಾತ್ಮಕ ವಾಗಿ ಹೊರ ಹಾಕುತ್ತದೆ. ಗೌರವ ಇದ್ದರೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಎನ್ಇಎಸ್ನಿಂದ ಹೊರ ಬನ್ನಿ ಜಾಗವನ್ನು ಮರಳಿ ಸಂಸ್ಥೆಗೆ ನೀಡಿ. ಇದಿನ್ನು ಆರಂಭಿಕ ಹೋರಾಟ. ಮುಂದಿನ ಮೂರು ದಿನಗಳಲ್ಲಿ ನೀವು ತಪ್ಪು ಒಪ್ಪಿಕೊಳ್ಳದಿದ್ದರೆ ಲೋಕಾಯುಕ್ತದಲ್ಲಿ ದೂರು ದಾಖಲಿಸುತ್ತೇವೆ. ನಂತರ ಏನೇ ಕಾನೂನಾತ್ಮಕ ಸಂಘರ್ಷ ಎದುರಾದರೂ ಅದಕ್ಕೆ ಹೋರಾಟಗಾರರು ಜವಾಬ್ದಾರರಲ್ಲ. ಉದ್ಧಟತನ ಮೆರೆದರೆ ಕ್ರಮಿನಿಲ್ ಮೊಕದ್ದಮೆಯನ್ನೂ ಹೂಡುವುದಾಗಿ ಅವರು ಎಚ್ಚರಿಸಿದರು.

ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ, ಪದಾಧಿಕಾರಿಗಳ ವಿವರ
ಹೊಸರಿತ್ತಿ ಗ್ರಾಮ ಪಂಚಾಯಿತಿ ಮುಂದೆಯೇ ಎನ್ಇಎಸ್ ಶೈಕ್ಷಣಿಕ ಸಂಸ್ಥೆಯ ಜಾಗ ಇದೆ. ಮೊದಲು ಅಲ್ಲಿಯೇ ಸಂಸ್ಥೆ, ಜಿ.ವಿ.ಎಚ್. ಕಾಲೇಜಿನ ಬೃಹತ್ ಆವರಣಕ್ಕೆ ಸ್ಥಳಾಂತರವಾಯಿತು. ಸದರಿ 24 ಗುಂಟೆ ಜಾಗ ಖಾಲಿ ಉಳಿಯಿತು. ಅದರಲ್ಲಿ ಸುಮಾರು 06 ಗುಂಟೆ ಜಾಗವನ್ನು ಭೂಮಿ ಕಬಳಿಕೆ ಅರೋಪ ಎದರಿಸುತ್ತಿರುವ ಎನ್ಇಎಸ್ ಸಂಸ್ಥೆ ಪದಾಧಿಕಾರಿಗಳಾದ ' ಗಿರೀಶ ಅಂಕಲಕೋಟಿ (ಉಪ ಗೌರವಾಧ್ಯಕ್ಷರು), ಮೃತ್ಯುಂಜಯ ವಗ್ಗಣ್ಣನವರ (ಉಪ ಕಾರ್ಯದರ್ಶಿ), ಶರಣಬಸಪ್ಪ ಕೋಡಿಹಳ್ಳಿ (ನಿರ್ದೇಶಕ), ಚಂದ್ರಶೇಖರ ಅರಳಿಹಳ್ಳಿ (ಕಾರ್ಯದರ್ಶಿ), ರಮೇಶ ಏಕಬೋಟೆ (ಕಾರ್ಯಾಧ್ಯಕ್ಷ), ಶಂಭಣ್ಣ ಅರಳಿ (ನಿರ್ದೇಶಕ), ಚನಬಸಪ್ಪ ಹೆಗಡಾಳ ಮತ್ತು ವಿಠಲ್ ಸುಭಾಷ ಏಕಬೋಟೆ ಸೇರಿದಂತೆ ಒಂಬತ್ತು ಮಂದಿಯ ಹೆಸರಿನಲ್ಲಿ ಅಕ್ರಮವಾಗಿ ನೋಂದಣಿ ಮಾಡಿಸಲಾಗಿದೆ.
ಇದರಲ್ಲಿ ಸಾಕಷ್ಟು ಅಕ್ರಮ ನಡೆದಿದ್ದಾಗಿ ಮಾಹಿತಿ ಲಭ್ಯವಾಗುತ್ತಿದ್ದಂತೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟಿಸುತಿದ್ದಾರೆ. ಉಪ ನೋಂದಣಾಧಿಕಾರಿ, ಗ್ರಾ.ಪಂ.ಪಿಡಿಓ ಹಾಗೂ ಇತರ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಲಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಇನ್ನೂ ಹೋರಾಟದ ಹಿಂದಿನ ದಿನವೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಮಾಡಿರುವ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ನಾವು ಜಾಗ ಪರಭಾರೆ ಮಾಡಿಲ್ಲ. ಕೂಡಲೇ ಬಹಿರಂಗ ಹರಾಜಿನ ಮೂಲಕ ಜಾಗವನ್ನು ಮಾರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.














Click it and Unblock the Notifications