ರಾಜ್ಯದಲ್ಲಿ ಕುದುರೆ ರೇಸ್ ಬ್ಯಾನ್ ಮಾಡಲು ಚಿಂತನೆ: ಗೃಹ ಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು, ಸೆ. 24: ರಾಜ್ಯದಲ್ಲಿ ಕುದುರೆ ರೇಸ್ನ್ನು ನಿಷೇಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಶುಕ್ರವಾರ ರಾಜ್ಯದಲ್ಲಿ ಆನ್ಲೈನ್ ಜೂಜು ನಿಷೇಧ ಮಾಡುವ ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆ 2021ಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರಕ್ಕಾಗಿ ಮಂಡನೆ ಮಾಡಿದಾಗ ದೊಡ್ಡ ಚರ್ಚೆಗೆ ನಾಂದಿ ಹಾಡಿತು. ಆನ್ಲೈನ್ ಜೂಜು ನಿಷೇಧಿಸುವ ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆ 2021ಕ್ಕೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ದೊರೆತಿದೆ. ಎರಡು ಸದನದಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರ ಪಡೆದಿದ್ದು, ರಾಜ್ಯಪಾಲರ ಸಹಿಯಾದ ಬಳಿಕ ರಾಜ್ಯದಲ್ಲಿ ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಲಿದೆ.
''ಆನ್ಲೈನ್ ಮೂಲಕ ನಡೆಯುವ ಜೂಜು ನಿಷೇಧಿಸುವ "ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ - 2021" ಕ್ಕೆ ವಿಧಾನ ಪರಿಷತ್ನಲ್ಲಿ ಒಪ್ಪಿಗೆ ದೊರೆತ ಬಳಿಕ ಪ್ರಸ್ತಾಪಿಸಿದ ಗೃಹ ಸಚಿವರು, ಪ್ರಸ್ತುತ ಅದೃಷ್ಟದ ಮೂಲಕ ಹಣವನ್ನು ಗೆದ್ದುಕೊಳ್ಳಲು ಅವಕಾಶ ಕಲ್ಪಿಸುವ ಎಲ್ಲ ಆನ್ಲೈನ್ ಗೇಮ್ಗಳನ್ನು ಇನ್ನು ಮುಂದೆ ಕಾನೂನು ಬಾಹಿರವೆಂದು ಪರಿಗಣಿಸಿ, ಅದನ್ನು ನಿಯಂತ್ರಿಸಲು, ಪೊಲೀಸರಿಗೆ ಅಧಿಕಾರ ದೊರಕಲಿದೆ'' ಎಂದು ಹೇಳಿದರು.

ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಬಹುತೇಕ ಸದಸ್ಯರ ಅಭಿಪ್ರಾಯದಂತೆ, ಮುಂದಿನ ದಿನಗಳಲ್ಲಿ, ಕುದುರೆ ಜೂಜನ್ನೂ ಸಹ ನಿಷೇಧಿಸುವ ಕುರಿತು ಚಿಂತಿಸಲಾಗುವುದು. ಪ್ರಸ್ತುತ ಮಸೂದೆ, ಟರ್ಫ್ ಕ್ಲಬ್ ಆವರಣದ ಹೊರಗೆ, ಕುದುರೆ ರೇಸಿನ ಮೇಲೆ ನಡೆಯುವ ಆನ್ಲೈನ್ ಬೆಟ್ಟಿಂಗ್ ಅನ್ನೂ ಸಹ ನಿಷೇಧಗೊಳಿಸಬಹುದು ಎಂದು ಅವರು ಹೇಳಿದರು.
''ಆನ್ಲೈನ್ ಬೆಟ್ಟಿಂಗ್ನಿಂದಾಗಿ ಹಲವಾರು ಕುಟುಂಬಗಳು ಆರ್ಥಿಕ ದುಸ್ಥಿತಿ ತಲುಪಿದ ವರದಿಗಳಿದ್ದು, ಕಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ಈಗ ಸದನದಲ್ಲಿ ಪರ್ಯಾಲೋಚನೆಗೆ ಕೋರಿರುವ ಮಸೂದೆಯು ವ್ಯಕ್ತಿಯು ತನ್ನ ಕೌಶಲ್ಯ ಆಧಾರದಲ್ಲಿ ಹಣ ಗೆದ್ದು ಕೊಳ್ಳುವ ಆನ್ಲೈನ್ ಆಟಗಳನ್ನು ಇದು ನಿಷೇಧ ಮಾಡುವುದಿಲ್ಲ,'' ಎಂದು ಸ್ಪಷ್ಟನೆ ನೀಡಿದರು.

ಇದಕ್ಕೂ ಮೊದಲು ಮಸೂದೆಯ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಪ್ರತಿ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕುದುರೆ ರೇಸ್ ಮೇಲೆ ನಡೆಯುವ ಬೆಟ್ಟಿಂಗ್ ಅನ್ನೂ ನಿಷೇಧ ಮಾಡುವ ಅಗತ್ಯವಿದೆ ಎಂದಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ಬಿಜೆಪಿ ಸದಸ್ಯ ಪುಟ್ಟಣ್ಣ, ಕುದುರೆ ರೇಸ್ ಮೇಲೆ ಹಣ ಕಟ್ಟಿ ಆಡುವುದನ್ನೂ ನಿಷೇಧಿಸಬೇಕು. ಕುದುರೆ ರೇಸ್ನಲ್ಲಿ ಹಣ ಕಟ್ಟಿ ಆಡುವವರಲ್ಲಿ ಹೆಚ್ಚಿನವರು, ಕೂಲಿ-ಕಾರ್ಮಿಕರು, ಆಟೋ ಚಾಲಕರು, ಹಾಗೂ ಸಿನಿಮಾ ಮತ್ತು ಹೋಟೆಲ್ ಕಾರ್ಮಿಕರೇ ಆಗಿದ್ದಾರೆ' ಎಂದು ಅವರು ತಿಳಿಸಿದರು. ಜೆಡಿಎಸ್ ಸದಸ್ಯ ರಮೇಶ್ ಗೌಡರವರು ಮಾತನಾಡಿ, ಕುದುರೆ ರೇಸ್ ಮೇಲಿನ ಬೆಟ್ಟಿಂಗ್ ಅನ್ನೂ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಆರಗ ಜ್ಞಾನೇಂದ್ರ, ತಿದ್ದುಪಡಿ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದರು. ಪರಿಷತ್ ಅಧ್ಯಕ್ಷ, ಬಸವರಾಜ ಹೊರಟ್ಟಿ ಯವರು, ಮಸೂದೆಯನ್ನು ಸದನದಲ್ಲಿ ಮತಕ್ಕೆ ಹಾಕಿ, ವಿಧೇಯಕಕ್ಕೆ ಅಂಗೀಕಾರ ದೊರೆತಿದೆ ಎಂದು ಪ್ರಕಟಿಸಿದರು.












Click it and Unblock the Notifications