ಭಕ್ತರ ಮನೆ ಮನೆಗೆ ಶಬರಿಮಲೆ ಪ್ರಸಾದ ರವಾನೆ ಆರಂಭ
ಬೆಂಗಳೂರು, ಡಿ. 13: ಕೊರೊನಾವೈರಸ್ ಸೋಂಕಿನ ಕಾರಣದಿಂದ ಈ ಬಾರಿಗೆ ಶಬರಿಮಲೆಗೆ ತೆರಳುವ ಭಕ್ತಾದಿಗಳ ಸಂಖ್ಯೆಗೆ ಕಡಿವಾಣ ಹಾಕಲಾಗಿದೆ. ಸ್ವಾಮಿ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ ಸಿಗದಿದ್ದರೂ ಶಬರಿಮಲೆಯ ಪ್ರಸಾದವನ್ನು ಮನೆಗೆ ತರೆಸಿಕೊಳ್ಳುವ ಯೋಜನೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಹಾಕಿಕೊಂಡಿದೆ.
ನವೆಂಬರ್ ತಿಂಗಳಲ್ಲಿ ಈ ಬಗ್ಗೆ ಮಂಡಳಿ ಪ್ರಕಟಣೆ ಹೊರಡಿಸಿತ್ತು. ಅಂಚೆ ಕಚೇರಿ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿತ್ತು. ಇದೀಗ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವಿಭಾಗವು ಈ ಸೇವೆ ಡಿಸೆಂಬರ್ 10ರಿಂದ ರಾಜ್ಯದೆಲ್ಲೆಡೆ ಭಕ್ತಾದಿಗಳಿಗೆ ಲಭ್ಯವಿರಲಿದೆ ಎಂದು ಕರ್ನಾಟಕದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ತಿಳಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದೆಲ್ಲೆಡೆ ಅಂಚೆ ಇಲಾಖೆ ಮೂಲಕ ಶಬರಿಮಲೆ ಪ್ರಸಾದವನ್ನು ಭಕ್ತರು ಪಡೆದುಕೊಳ್ಳಬಹುದಾಗಿದೆ.
'ಸ್ವಾಮಿ ಪ್ರಸಾದಂ' ಒಂದು ಪ್ಯಾಕೆಟ್ ಅರವಣ, ತುಪ್ಪ, ಅರಿಶಿಣ, ಕುಂಕುಮ, ವಿಭೂತಿ ಮತ್ತು ಅರ್ಚನೆ ಪ್ರಸಾದವನ್ನು ಒಳಗೊಂಡಿರುತ್ತದೆ. ಈ ಪ್ರಸಾದದ ಕಿಟ್ ಬೆಲೆ 450 ರೂ. ಈ ಪ್ರಸಾದಗಳನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ, ಭಕ್ತರಿಗೆ ಸ್ಪೀಡ್ ಪೋಸ್ಟ್ ಮೂಲಕ ಮನೆ ಮನೆಗೆ ರವಾನಿಸಲಾಗುತ್ತದೆ.

ಎಲ್ಲೆಲ್ಲಿ ಲಭ್ಯ: ಕರ್ನಾಟಕದ ಯಾವುದೇ ಕೇಂದ್ರ ಅಂಚೆ ಕಚೇರಿಗೆ ತೆರಳಿ, ಕೌಂಟರ್ ಗಳಲ್ಲಿ 450 ರು ಪಾವತಿಸಬಹುದು. ಇ-ಪಾವತಿ ಮೂಲಕ ಕೌಂಟರ್ನಲ್ಲಿ ಹಣ ಪಾವತಿಸಿದ ಬಳಿಕ ಪ್ರಸಾದ ನಿಮ್ಮ ವಿಳಾಸಕ್ಕೆ ತಲುಪಲಿದೆ. ಒಂದು ರಶೀದಿ ಒಳಗೆ ಹತ್ತು ಪ್ಯಾಕೆಟ್ ಪ್ರಸಾದವನ್ನು ಬುಕ್ ಮಾಡಬಹುದಾಗಿದೆ.
ನವೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಮಂಡಳ ಪೂಜೆ ನಿಮಿತ್ತ ಶಬರಿಮಲೆ ದೇಗುಲ ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ನಿರ್ಬಂಧಿಸಲಾಗಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಜೊತೆಗೆ ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.












Click it and Unblock the Notifications