Government Employee: ಫೆ. 20ರಂದು ಕರ್ನಾಟಕದ ಸರ್ಕಾರಿ ನೌಕರರಿಗೆ ರಜೆ
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟು ರಾಜ್ಯ ಸರ್ಕಾರಿ ನೌಕರರ ಸಂಘ ಫೆಬ್ರವರಿ 20ರಂದು ಬೃಹತ್ ಸಮಾವೇಶವೊಂದನ್ನು ಬೆಂಗಳೂರು ನಗರದಲ್ಲಿ ಆಯೋಜನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಫೆಬ್ರವರಿ 20ರ ಗುರುವಾರ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸರ್ಕಾರಿ ನೌಕರರ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿದೆ. ಈ ಸಮಾವೇಶದಲ್ಲಿ 10 ಸಾವಿರಕ್ಕೂ ಅಧಿಕ ನೌಕರರು ಭಾಗವಹಿಸುವ ನಿರೀಕ್ಷೆ ಇದೆ.

'ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಎಲ್ಲಾ ಜಿಲ್ಲಾ-ತಾಲ್ಲೂಕು ಶಾಖೆಗಳ ನಿರ್ದೇಶಕರು-ಪದಾಧಿಕಾರಿಗಳ ಸಮಾವೇಶ' ಇದಾಗಿದೆ. ಡಿಸೆಂಬರ್ 2024ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಮುಗಿದಿದ್ದು, ಹೊಸ ಪದಾಧಿಕಾರಿಗಳ ಆಯ್ಕೆ ಬಳಿಕ ಮೊದಲ ಬಾರಿಗೆ ಈ ಸಮಾವೇಶ ಆಯೋಜನೆ ಮಾಡಲಾಗಿದೆ.
ಸರ್ಕಾರಿ ನೌಕರರಿಗೆ ರಜೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಶಾಖೆಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಸಂಘದ ಚುನಾಯಿತ ನಿರ್ದೇಶಕರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.
ಈ ಸಮಾವೇಶದಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಅನುಕೂಲವಾಗುವಂತೆ ವಿವಿಧ ಜಿಲ್ಲೆಗಳಿಂದ ಬಸ್ ಸೌಲಭ್ಯವನ್ನು ಮಾಡಲಾಗಿದೆ. ಅಲ್ಲದೇ ಸಮಾವೇಶಕ್ಕೆ ನೌಕರರು ಹಾಜರಾಗಲು ಅಂದು ರಜೆಯನ್ನು ನೀಡಲಾಗುತ್ತದೆ. ಈ ಕುರಿತು ಇನ್ನೂ ಆದೇಶ ಪ್ರಕಟವಾಗಬೇಕಿದೆ.
ಸರ್ಕಾರಿ ನೌಕರರು ಸಮಾವೇಶದಲ್ಲಿ ಭಾಗಿಯಾಗಲು ಓಓಡಿ ಆದೇಶವನ್ನು ಜಾರಿ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಹೇಳಿದೆ. ಇದರಿಂದಾಗಿ ಜಿಲ್ಲೆಗಳಿಂದ ಆಸಕ್ತ ಸರ್ಕಾರಿ ನೌಕರರು ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗಲಿದೆ. ಸಮಾವೇಶದಲ್ಲಿ ಭಾಗವಹಿಸುವ ಷರತ್ತಿಗೊಳಪಟ್ಟು ಓಓಡಿ ನೀಡಲಾಗುತ್ತದೆ.
ಸಮಾವೇಶದ ದಿನ 'ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ. 'ಆಡಳಿತದಲ್ಲಿ ದಕ್ಷತೆ-ಪಾರದರ್ಶಕತೆ-ಪ್ರಾಮಾಣಿಕತೆ' ವಿಷಯ ಕುರಿತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ.
'ಸಾರ್ವಜನಿಕ ಸೇವೆಯಲ್ಲಿ ನೌಕರರ ಪಾತ್ರ' ವಿಷಯದ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಉಪನ್ಯಾಸ ನೀಡಲಿದ್ದಾರೆ. 'ಮಾಹಿತಿ ಹಕ್ಕು ಅಧಿನಿಯಮ (2005) ಸವಾಲುಗಳು-ಪರಿಹಾರಗಳು' ವಿಷಯದ ಕುರಿತು ರಾಜ್ಯ ಮಾಹಿತಿ ಆಯೋಗ, ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಧಾಕಪ್ಪ ಉಪನ್ಯಾಸ ನೀಡಲಿದ್ದಾರೆ.
ಈ ಸಮಾವೇಶದಲ್ಲಿ ಸರ್ಕಾರಿ ನೌಕರ ಸಂಘ ಸರ್ಕಾರದ ಮುಂದೆ ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆಯ ಬೇಡಿಕೆಯನ್ನು ಮಂಡಿಸಲಿದೆ. ಸರ್ಕಾರ ಯಾವ ಘೋಷಣೆ ಮಾಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications