ಮೈಸೂರು, ಮದ್ದೂರು & ಮಂಡ್ಯದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭ: ಯತ್ನಾಳ್
ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಹತ್ವದ ಮಾಹಿತಿಯೊಂದನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಬಿಜೆಪಿಯಿಂದ ಉಚ್ಛಾಟನೆಯಾದ ಮೇಲೆ ಅವರು ರಾಜ್ಯ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ಮುಂದುವರಿಸಿದ್ದರು. ಅಲ್ಲದೇ ಹಿಂದೂಗಳಿಗಾಗಿ ಪ್ರತ್ಯೇಕ ಪಕ್ಷ ಕಟ್ಟುವುದಾಗಿಯೂ ಅವರು ಹೇಳಿದ್ದರು.
ಇದೀಗ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿರುವ ಅವರು, ಮೈಸೂರು, ಮದ್ದೂರು ಹಾಗೂ ಮಂಡ್ಯದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭ ಎಂದು ಅವರು ಹೇಳಿದ್ದಾರೆ. ಇದೀಗ ಬಂಧುಗಳೇ ಮಂಡ್ಯ, ಮದ್ದೂರಿನಲ್ಲಿ ಆದ ಗಣೇಶೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿ ಅದ್ದೂರಿ ಸ್ವಾಗತ ನೀಡಿದ ಸಮಸ್ತ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಾಗೂ ಈ ಭಾಗದ ಆಯೋಜಕರಿಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.

ಮೈಸೂರು, ಮದ್ದೂರು ಹಾಗೂ ಮಂಡ್ಯದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭವಾಗಿದೆ. ಇದಕ್ಕೆ ಸಾವಿರಾರು ಸಂಖ್ಯೆಗಳಲ್ಲಿ ಸೇರಿದ್ದ ಕಾರ್ಯಕರ್ತರೇ ಸಾಕ್ಷಿ. ಯದುವಂಶದ ಅರಸರ ಆಳ್ವಿಕೆಯಿಂದ ಸಮೃದ್ಧವಾಗಿರುವ ಈ ಭಾಗದಲ್ಲಿ ಹಿಂದೂ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಕಲ್ಲು ತೂರುವುದು, ಅಶಾಂತಿ ಸೃಷ್ಟಿಸುವುದು ಕಳೆದ ಎರಡು ವರ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿದೆ, ಇದಕ್ಕೆ ಆಳುವ ಸರ್ಕಾರದ ಅಲ್ಪ ಸಂಖ್ಯಾತ ಓಲೈಕೆ ನೀತಿಯೇ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಕ್ಷ ಆಡಳಿತ, ಸರ್.ಎಂ.ವಿಶ್ವೇಶರಯ್ಯರಂಥ ಅಪ್ರತಿಮ ಚಿಂತಕರು, ಅಭಿಯಂತರರಿಂದ ಬೆಳಗಿರುವ, ಅಭ್ಯುದಯ ಕಂಡಿರುವ ಈ ನಾಡಿನಲ್ಲಿ ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳು ಹಾಗೂ ಧರ್ಮದವರು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಆದರೆ, ಇಲ್ಲಿನ ಸ್ವಾಭಿಮಾನಿ ಹಿಂದೂಗಳು ಈ ರೀತಿಯಾದ ಯಾವುದೇ ಕಷ್ಟ ಬಂದರೂ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ತೋರಿಸಿದ್ದಾರೆ.
ಅಂದು ಸ್ವಾತಂತ್ರ್ಯ ಪಡೆಯಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಸಾರ್ವಜನಿಕ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವಂತೆ ಪರಿವರ್ತಿಸಿದರು, ಇಂದು ಮಂಡ್ಯದಲ್ಲಿ ಹಿಂದೂ ಒಗ್ಗಟ್ಟಿಗಾಗಿ ಇದು ಪುನರವಾರ್ತನೆಯಾಗುತ್ತಿರುವುದು ಸಂತಸ ತಂದಿದೆ. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ, ಪ್ರಮುಖ ವೃತ್ತಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ, ವೇದಿಕೆಯಲ್ಲಿ ನಿಂತು ನನ್ನನ್ನು ಸ್ವಾಗತಿಸಿ ನಿಮ್ಮ ಅಭಿಮಾನವನ್ನು ವ್ಯಕಪಡಿಸುತ್ತಿರುವುದಕ್ಕೆ ನಾನು ಸದಾ ಚಿರ ಋಣಿಯಾಗಿದ್ದೇನೆ.
ನಿಮ್ಮ ಆಶಯಗಳಿಗೆ ತಕ್ಕಂತೆ ಹಿಂದುತ್ವದ ಒಗ್ಗಟ್ಟು ಹಾಗೂ ಹಿಂದೂ ವಿರೋಧಿ ಧೋರಣೆಯ ವಿರುದ್ಧ ನಾನು ಸದಾ ನಿಲ್ಲುತ್ತೇನೆ. ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಆಯೋಜಕರು ಸುರಕ್ಷತೆಗೆ ಗಮನ ನೀಡಿ. ನಿಮಗೆಲ್ಲರಿಗೂ ಶುಭವಾಗಲಿ ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ, ಜಯತು ಜಯತು ಹಿಂದೂರಾಷ್ಟ್ರಂ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications