'ಕೆಟಿ'ಗೆ ಹೆಸರಾಗಿದ್ದ ಕಲ್ಲಡ್ಕದಲ್ಲಿ ಕೋಮು ಗಲಭೆಯ ಬಿರುಗಾಳಿ
ಕೆಟಿಗೆ (ಕಲ್ಲಡ್ಕ ಟೀ) ಹೆಸರಾಗಿದ್ದ ಕಲ್ಲಡ್ಕ ಪಟ್ಟಣ ಇಂದು ಮತಾಂಧರ ಅಟ್ಟಹಾಸಕ್ಕೆ ಸಿಲುಕಿ ನಲುಗುತ್ತಿದೆ, ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆಗಳು ಅವ್ಯಾಹುತವಾಗಿ ನಡೆಯುತ್ತಲೇ ಬರುತ್ತಿದೆ.
ಈ ಹಿಂದೆ ಕರ್ನಾಟಕ ಕರಾವಳಿಯ ಉಳ್ಳಾಲ ಮತ್ತು ಭಟ್ಕಳ ನಗರಗಳು ಅತಿಸೂಕ್ಷ್ಮ ಪ್ರದೇಶ ಎನ್ನುವ ಕುಖ್ಯಾತಿ ಪಡೆದಿದ್ದವು. ಒಂದಲ್ಲಾ ಒಂದು ಹಿಂದೂ, ಮುಸ್ಲಿಂ ಕೋಮು ದ್ವೇಷಗಳ ಕಾರಣಗಳಿಂದ ಕಪ್ಪುಹಣೆ ಪಟ್ಟಿ ಕಟ್ಟಿಕೊಂಡಿದ್ದ ಈ ಪಟ್ಟಣಗಳ ಸಾಲಿಗೆ ದಕ್ಷಿಣಕನ್ನಡದ ಮತ್ತೊಂದು ಊರು 'ಕಲ್ಲಡ್ಕ' ಸೇರ್ಪಡೆಯಾಗಿದೆ.
ಬೆಂಗಳೂರು-ಮಂಗಳೂರು ಬೈಪಾಸಿನ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬರುವ ಚಿಕ್ಕ ಪಟ್ಟಣ ಕಲ್ಲಡ್ಕ. ದಶಕಗಳ ಕೆಳಗೆ ಹೆದ್ದಾರಿಯ ಮಧ್ಯೆ ಬರುವ ಒಂದು ಊರು, ಅಥವಾ ಕೆಟಿಗೆ (ಕಲ್ಲಡ್ಕ ಟೀ) ಮಾತ್ರ ಹೆಸರಾಗಿದ್ದ ಕಲ್ಲಡ್ಕ ಪಟ್ಟಣ ಇಂದು ಮತಾಂಧರ ಅಟ್ಟಹಾಸಕ್ಕೆ ಸಿಲುಕಿ ನಲುಗುತ್ತಿದೆ, ಸಾರ್ವಜನಿಕರು ನಾಳೆ ಇನ್ನೇನು ಆಗುತ್ತೋ ಎನ್ನುವ ಭಯದಲ್ಲೇ ಜೀವಿಸುವಂತಾಗಿದೆ.
ರಾಷ್ಟ್ರಮಟ್ಟದಲ್ಲಿ ಬೇಡವಾದ ಕಾರಣಕ್ಕೆ ಹೆಸರು ಮಾಡಿರುವ ಕಲ್ಲಡ್ಕದ ಇತಿಹಾಸವನ್ನು ಕೆದಕಿದರೆ ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆಗಳು ಅವ್ಯಾಹುತವಾಗಿ ನಡೆಯುತ್ತಲೇ ಬರುತ್ತಿದೆ. ಇಲ್ಲಿ ಇತ್ತಂಡಗಳ ನಡುವೆ ಗಲಭೆ ಶುರುವಾಗಲು ಮಸೀದಿಯ ಮುಂದೆ ಹಂದಿ ಕಡಿಯಬೇಕಾಗಿಲ್ಲ, ದೇವಾಲಯದ ಮುಂದೆ ದನದ ಮಾಂಸ ಬೀಳಬೇಕಾಗಿಲ್ಲ.
ಆಟೋ ಓಡಿಸಿಕೊಂಡು ಹೋಗುವಾಗ ಕೆಸರು ಹಾರಿದರೆ ಸಾಕು, ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದರೆ ಪಟಾಕಿ ಸದ್ದು ಕೇಳಿಸಿದರೂ ಸಾಕು, ಹಿಂದೂ ಹೆಣ್ಣು, ಮುಸ್ಲಿಂ ಹುಡುಗನ ಜೊತೆ ಅಥವಾ ಮುಸ್ಲಿಂ ಹೆಣ್ಣು, ಹಿಂದೂ ಹುಡುಗನ ಜೊತೆ ಮಾತನಾಡುತ್ತಿದ್ದರೆ ಸಾಕು! ಮತಾಂಧ ವಿಕೃತ ಮನಸ್ಸುಗಳು ಜಾಗೃತವಾಗುತ್ತವೆ.
ಬೀಡಿ ಕಟ್ಟಿ ಅದನ್ನು ಅಂಗಡಿಗೆ ಮಾರಲು ದಿನಾ ಬರುವ ಮಹಿಳೆಯರನ್ನು ಅಪಹಾಸ್ಯ ಮಾಡುವ, ಕಷ್ಟಪಟ್ಟು ಬದುಕುವುದನ್ನು ಬಿಟ್ಟು ಕತ್ತಲಾದರೆ ಸಾಕು 'ಕೈಯಲ್ಲಿ ತಲ್ವಾರ್'ಎತ್ತುವುದನ್ನೇ ಕಾಯಕ ಮಾಡಿಕೊಂಡಿರುವ ಇತ್ತಂಡಗಳ ಸೋಂಬೇರಿ ಯುವಕರು ಇಲ್ಲಿನ ಜನತೆಯ ಶಾಂತಿಯನ್ನೇ ನುಂಗಿಹಾಕಿದ್ದಾರೆ. ಮಂದೆ ಓದಿ..(ಸಾಂದರ್ಭಿಕ ಚಿತ್ರ)

ಹಣದ ಆಮಿಷವೊಡ್ಡಿ ಯುವ ಸಮುದಾಯದ ಸೆಳೆತ
ಕೈಯಲ್ಲಿ ಕಾಸಿಲ್ಲಿ, ಮೋಜುಮಸ್ತಿಗೆ ಮೋಸವಿಲ್ಲ ಎನ್ನುವುದಾದರೆ, ಹಣದ ಆಮಿಷವೊಡ್ಡಿ ಯುವ ಸಮುದಾಯದ ಮೂಲಕ ಕೋಮು ಸೌಹಾರ್ದತೆ ಕದಡುತ್ತಿರುವ ಅತೃಪ್ತ ಆತ್ಮಗಳು ಯಾವುವು ಎಂದು ಪ್ರಶ್ನಿಸಿದರೆ, ಬೆರಳು ಸಾಗುವುದು ರಾಜಕೀಯ ಮುಖಂಡರತ್ತ ಮತ್ತು ಸಂಘಟನೆಯ ಪ್ರಮುಖರತ್ತ.

ಪರದೆಯ ಹಿಂದಿನಿಂದ ಎತ್ತಿಕಟ್ಟುತ್ತಿರುವ ಮುಖಂಡರು
ಎರಡೂ ಕೋಮಿನ ಯುವಕರನ್ನು ಪರದೆಯ ಹಿಂದಿನಿಂದ ಎತ್ತಿಕಟ್ಟುತ್ತಿರುವ ಮುಖಂಡರಿಂದಾಗಿ, ಹಿಂದೂ-ಮುಸ್ಲಿಂ ದ್ವೇಷದ ಬೆಂಕಿಯಲ್ಲಿ ಅನಾವಶ್ಯಕವಾಗಿ ಬಲಿಪಶುವಾಗುತ್ತಿರುವುದು ಬದುಕಿ ಬಾಳಬೇಕಾದ ಯುವಕರು ಮತ್ತು ಅವರನ್ನೇ ನಂಬಿಕೊಂಡಿರುವ ಕುಟುಂಬ ಎನ್ನುವುದು ಹಿಂದೂ-ಮುಸ್ಲಿಂ ಯುವಕರಿಗೆ ಅರ್ಥವಾಗುವುದು ಯಾವತ್ತೋ?

ಒಂದೆಡೆ ರಾಮಮಂದಿರ, ಮತ್ತೊಂದೆಡೆ ಮಸೀದಿ
ಒಂದು ಕಡೆ ಉಡುಪಿ ಪೇಜಾವರ ಶ್ರೀಗಳಿಂದ ಶಿಲಾನ್ಯಾಸಗೊಂಡ ಶ್ರೀರಾಮ ಮಂದಿರ, ಅನತಿ ದೂರದಲ್ಲೊಂದು ಮಸೀದಿ/ದರ್ಗಾ. ಎರಡೂ ಕೋಮಿನವರೂ ತಮ್ಮತಮ್ಮ ಅಷ್ಟಮಿ, ಚೌತಿ, ಈದ್ ಕಾರ್ಯಕ್ರಮಗಳನ್ನು ಪೈಪೋಟಿಗೆ ಬಿದ್ದಂತೆ ನಡೆಸಿಕೊಂಡು ಬರುತ್ತಲೇ ಇದ್ದಾರೆ. ಪೇಜಾವರರಿಂದ ಶಿಲಾನ್ಯಾಸಗೊಳ್ಳುವ ರಾಮಮಂದಿರ ಕಾರ್ಯಕ್ರಮದ ವೇಳೆ ಅಂದಿನ ಕಾಂಗ್ರೆಸ್ ಸರಕಾರ ಕಾರ್ಯಕ್ರಮ ನಡೆಯದಂತೆ ನಿಷೇದಾಜ್ಞೆ ಹೇರಿದ್ದನ್ನೂ ಇಲ್ಲಿನವರು ಮರೆತಿಲ್ಲ.

ಪಿಎಫ್ಐ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ
ಈ ಭಾಗದಲ್ಲಿ ಸದ್ಯ ತೀವ್ರ ಚಟುವಟಿಕೆಯಲ್ಲಿ ಇರುವುದು ಇತ್ತಂಡಗಳ ಒಂದೊಂದು ಸಂಘಟನೆಗಳು. ಕಲ್ಲಡ್ಕವನ್ನು ಕರಾವಳಿ ಕರ್ನಾಟಕದ ಹಿಂದುತ್ವದ ಪ್ರಯೋಗಶಾಲೆ ಎಂಬ ಮಾತನ್ನು ಒಂದು ಕೋಮಿನವರು ಹೇಳಿದರೆ, ಕಲ್ಲಡ್ಕವನ್ನು ಇನ್ನೊಂದು 'ದರಿದ್ರ' ಪಾಕಿಸ್ತಾನ ಮಾಡಲು ಬಿಡುವುದಿಲ್ಲ ಎನ್ನುವುದು ಇನ್ನೊಂದು ಕೋಮಿನ ಹಠ.

ಎಲ್ಲರಿಗೂ ಗೊತ್ತಿರುವ ವಿಚಾರ
ಇತ್ತೀಚಿನ ದಿನಗಳಲ್ಲಿ ಇಲ್ಲಿ ಅಶಾಂತಿ ತಾಂಡವಾಡುತ್ತಿರಲು ಕಾರಣ ಯಾರು ಎಂದರೆ ಅಲ್ಲಿನ ಜನರ ಕೈಬೆರಳು ತೋರುತ್ತಿರುವುದು ಇಬ್ಬರತ್ತ. ಕಲ್ಲಡ್ಕದ ಹಿಂದೂ-ಮುಸ್ಲಿಂ ಗಲಭೆಯ ಹಿಂದೆ ಕೆಲವೇ ಕೆಲವು ವ್ಯವಸ್ಥಿತ ಕೈಗಳು ಕೆಲಸ ಮಾಡುತ್ತಿರುವುದು, ಅಲ್ಲಿನ ಜನರಿಗೂ ಗೊತ್ತು, ಸರಕಾರಕ್ಕೂ ಗೊತ್ತು ಮತ್ತು ಈ ವಿಷಯ ಪೊಲೀಸ್ ಇಲಾಖೆಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ. (ಚಿತ್ರದಲ್ಲಿ ದ.ಕ ಜಿಲ್ಲಾ ಪೊಲೀಸ್ ಮುಖ್ಯಸ್ಥ)

ಕಲ್ಲಡ್ಕ ವಿಚಾರ ವೋಟ್ ಬ್ಯಾಂಕ್
ಆದರೂ ಈ ವಿಚಾರ ಇನ್ನೂ ಜೀವಂತವಾಗಿಯೇ ಇರುತ್ತದೆ, ಮುಂದೆಯೂ ಇರಬಹುದು.. ಯಾಕೆಂದರೆ ಇದು ವೋಟ್ ಬ್ಯಾಂಕ್. ಸತ್ತರೆ ಸಾಯಲಿ ಬಿಡಿ, ನಮ್ಮ ಮನೆಯವರು ಯಾರೂ ಸಾಯುವವರ ಪಟ್ಟಿಯಲ್ಲಿ ಇರಲಲ್ಲಾ ಅನ್ನುವ ತಾವು ನಂಬಿರುವ ಮುಖಂಡರ ಮುಖವಾಣಿಯ ಪರಿಚಯ ಇತ್ತಂಡಗಳ ಯುವ ಸಮುದಾಯಕ್ಕೆ ಅದ್ಯಾವಾಗ ಅರ್ಥವಾಗುತ್ತೋ?












Click it and Unblock the Notifications