ಸೆ. 14ರಂದು ಹಿಂದಿ ದಿವಸ್; ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 13; ಕರ್ನಾಟಕ ಸರ್ಕಾರದ ವತಿಯಿಂದ ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ಸೆಪ್ಟಂಬರ್ 14ರ ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಪಕ್ಷ ಕರೆ ನೀಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಹಿಂದಿ ದಿವಸ್ ಆಚರಣೆ ಮಾಡದಂತೆ ಆಗ್ರಹಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಪ್ರಕಟಣೆ ಮೂಲಕ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಸೂಚನೆಯೊಂದನ್ನು ನೀಡಿದ್ದಾರೆ. ಸೆ. 14ರಂದು ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಸಂಭಾವ್ಯ ಅಭ್ಯರ್ಥಿಗಳು ಪ್ರತಿಭಟನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.
* ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈ ಕುತಂತ್ರದ ವಿರುದ್ಧ ಪ್ರತಿಭಟಿಸುವುದು.
* ಕನ್ನಡ ಬಾವುಟ, ಶಾಲು ಮುಖಾಂತರ ಕನ್ನಡ ಶಕ್ತಿ ಪ್ರದರ್ಶನ.
* ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬ ಸತ್ಯದ ಅರಿವು ಮೂಡಿಸಬೇಕು ಎಂದು ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ನಿರ್ದೇಶನ ಕೊಟ್ಟಿದ್ದಾರೆ.

ಕನ್ನಡ ನೆನಪಿಗೆ ಬರುವುದಿಲ್ಲ
ಈ ಹಿಂದಿನಿಂದಲೂ ಭಾರತ ಒಕ್ಕೂಟ ಸರ್ಕಾರವು ಕುತಂತ್ರದಿಂದ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸ ಎಂಬ ಆಚರಣೆಯನ್ನು ಸೃಷ್ಟಿಸಿ, ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ವರ್ಷ ಇತಿಹಾಸವಿರುವ ಕನ್ನಡ ನೆನಪಿಗೂ ಬರುವುದಿಲ್ಲ ಎಂದು ಜೆಡಿಎಸ್ ಪಕ್ಷ ಆರೋಪಿಸಿದೆ.

ಆಚರಣೆ ಘೋರ ಅನ್ಯಾಯ
ಕರ್ನಾಟಕ ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯವೇ ಒಂದು ಅದ್ಬುತ ಪ್ರಪಂಚ. ಇಂತಹ ಪುಣ್ಯಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಎನ್ನುವುದು ಘೋರ ಅನ್ಯಾಯ ಎಂದು ಕರ್ನಾಟಕ ಜೆಡಿಎಸ್ ಹೇಳಿದೆ.

ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ
ಈ ಹಿಂದಿ ದಿವಸ್ ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ. ನಮಗೆ ಅದರ ಅವಶ್ಯಕತೆ ಇಲ್ಲ. ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದಾರೆ. ಈಗಲೂ ಸಹ ಈ ಬಲವಂತ ಹೇರಿಕೆಯನ್ನು ವಿರೋಧಿಸುತ್ತಾ ಈ ಆಚರಣೆಯಲ್ಲಿ ಪಾಲ್ಗೊಳ್ಳದಂತೆ ಮತ್ತು ಯಾವುದೇ ಬೆಂಬಲ ನೀಡದಂತೆ ಕರ್ನಾಟಕ ಜೆಡಿಎಸ್ ಮನವಿ ಮಾಡಿದೆ.

ಬಸವರಾಜ ಬೊಮ್ಮಾಯಿಗೆ ಪತ್ರ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಸೆಪ್ಟೆಂಬರ್ 14ರಂದು ಸರ್ಕಾರದ ವತಿಯಿಂದ ಹಿಂದಿ ದಿವಸ್ ಆಚರಣೆ ಮಾಡದಂತೆ ಆಗ್ರಹಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ಜನತೆಗೆ ಮಾಡುವ ಪರಮ ಅನ್ಯಾಯ. ಹಿಂದಿ ದಿವಸ್ ಅನ್ನು ಕರ್ನಾಟಕ ಸರ್ಕಾರವು ಒತ್ತಾಯಪೂರ್ವಕವಾಗಿ ಆಚರಣೆ ಮಾಡುವುದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಯೂ ಪ್ರತಿಭಟನೆ
ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಜೆಡಿಎಸ್ ಸೆ. 14ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಚೇರಿ ಜೆಪಿ ಭವನದ ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, ಶಾಸಕರು, ವಿಧಾನ ಪರಿಷತ ಸದಸ್ಯರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications