Hijab Verdict; ಉಡುಪಿ ಕಾಲೇಜಿನಿಂದ ಕರ್ನಾಟಕ ಹೈಕೋರ್ಟ್ ತನಕ
ಬೆಂಗಳೂರು, ಮಾರ್ಚ್ 15; ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ನ ತ್ರಿಸದಸ್ಯ ಪೀಠ ಮಂಗಳವಾರ ಆದೇಶ ನೀಡಿದೆ. ಇದರಿಂದಾಗಿ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿದ್ದ ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಿನ್ನಡೆ ಉಂಟಾಗಿದೆ.
ಮೊದಲು ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ. ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಈ ವಿವಾದ ಸದ್ದು ಮಾಡಿತು. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸ ತೊಡಗಿದರು.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ತರಗತಿಯಲ್ಲಿ ಹಿಜಾಬ್ ಧರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದರಿಂದಾಗಿ ವಿದ್ಯಾರ್ಥಿನಿಯರು ತರಗತಿಯಿಂದ ಹೊರಗುಳಿದರು. ವಿದ್ಯಾರ್ಥಿನಿಯರು, ಪೋಷಕರು, ಕಾಲೇಜಿನ ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆಯಿತು.
ವಿವಾದ ಬೇರೆ ಜಿಲ್ಲೆಗಳಿಗೆ ಹರಡುತ್ತಿದ್ದಂತೆ ಕೇಸರಿ ಶಾಲಿನ ಆಗಮನವಾಯಿತು. ಅವರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಅಂತಿಮವಾಗಿ ಜನವರಿ 31ರಂದು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಯಿತು.

ಏಕ ಸದಸ್ಯ ಪೀಠದಲ್ಲಿ ವಿಚಾರಣೆ
ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂಬ ವಿದ್ಯಾರ್ಥಿನಿಯರ ಅರ್ಜಿಯನ್ನು ಮೊದಲು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಆಗ ಹಲವು ಅರ್ಜಿಗಳು ಇದೇ ವಿಚಾರದಲ್ಲಿ ಸಲ್ಲಿಕೆಯಾದವು. ಅಲ್ಲದೇ ಸಂವಿಧಾನದ ಹಲವು ಅಂಶಗಳು ಸಹ ಇದರಲ್ಲಿ ಸೇರಿವೆ ಎಂದು ವಾದ-ಪ್ರತಿವಾದ ನಡೆಯಿತು. ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅರ್ಜಿಯನ್ನು ಮುಖ್ಯ ನ್ಯಾಯೂರ್ತಿಗಳ ಪೀಠಕ್ಕೆ ವರ್ಗಾಯಿಸಿದರು. ಎಲ್ಲಾ ಅರ್ಜಿಗಳನ್ನು ಅದೇ ಪೀಠಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು.

ತ್ರಿಸದಸ್ಯ ಪೀಠ ರಚನೆ
ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ತ್ರಿಸದಸ್ಯ ಪೀಠ ರಚನೆ ಮಾಡಿದರು. ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದರು. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಧ್ಯಂತರ ಆದೇಶ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದರು. ಆಗ ನ್ಯಾಯಾಲಯ ಅರ್ಜಿಗಳ ವಿಚಾರಣೆ ನಡೆದು ತೀರ್ಪು ಪ್ರಕಟವಾಗುವ ತನಕ ಧಾರ್ಮಿಕ ಚಿನ್ಹೆ ಬಿಂಬಿಸುವ ಹಿಜಾಬ್, ಕೇಸರಿ ಶಾಲು ವಸ್ತ್ರಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದುವರೆಸಿತು. ಹಿಜಾಬ್ ಧರಿಸುವುದು ಸಂವಿಧಾನದ ಅಡಿ ನಮ್ಮ ಮೂಲಭೂತ ಹಕ್ಕು, ಇಸ್ಲಾಂನಲ್ಲಿಯೂ ಇದು ಅಗತ್ಯ ಎಂದು ಹೇಳಿದೆ ಎಂದು ಕೋರ್ಟ್ಗಮನ ಸೆಳೆದರು.

ಕಾಲೇಜುಗಳಲ್ಲಿ ಭುಗಿಲೆದ್ದ ವಿವಾದ
ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾಲೇಜಿಗೆ ಬರದಂತೆ ತಡೆಯಲಾಯಿತು. ಕೆಲವು ಜಿಲ್ಲೆಗಳಲ್ಲಿ ಕಾಲೇಜಿನ ಆಡಳಿತ ಮಂಡಳಿ ಗೇಟ್ಗಳನ್ನು ಬಂದ್ ಮಾಡಿತು. ಹಿಜಾಬ್ ಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಗೇಟ್ ಬಳಿ ಕುಳಿತು ಧರಿಣಿ ನಡೆಸಿದರು. ರಾಜ್ಯದ ಹಲವು ಕಾಲೇಜುಗಳಲ್ಲಿ ತರಗತಿಗೆ ಅಡ್ಡಿ ಉಂಟಾಯಿತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಿಜಾಬ್ ಕಳಚಿಟ್ಟು ಕಾಲೇಜಿಗೆ ಬರುವಂತೆ ಆಯಿತು. ಕೋರ್ಟ್ನಲ್ಲಿ ಅರ್ಜಿಗಳ ವಿಚಾರಣೆ ನಡೆಯುವಾಗಲೇ ವಕೀಲರು ಮಧ್ಯಂತರ ಆದೇಶಕ್ಕೆ ಸ್ಪಷ್ಟನೆ ಕೇಳಿದರು. ಆಗ ಕೋರ್ಟ್ ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಉಪನ್ಯಾಸಕರಿಗೆ ಅಲ್ಲ ಎಂದು ಸ್ಪಷ್ಟನೆ ನೀಡಿತು.

ಅಂತಿಮ ತೀರ್ಪು ಪ್ರಕಟ
ಕರ್ನಾಟಕ ಹೈಕೋರ್ಟ್ನಲ್ಲಿ 11 ದಿನಗಳ ಕಾಲ ಹಿಜಾಬ್ ಕುರಿತು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳ ವಿಚಾರಣೆ ನಿರಂತರವಾಗಿ ನಡೆಯಿತು. ಫೆಬ್ರವರಿ 25ರಂದು ನ್ಯಾಯಪೀಠ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ಕಾಯ್ದಿರಿಸಿತು. ಮಾರ್ಚ್ 14ರ ಸೋಮವಾರ ಮಂಗಳವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಕೋರ್ಟ್ ಹೇಳಿತು. ಮಂಗಳವಾರ ಕೋರ್ಟ್ ಕಲಾಪ ಆರಂಭವಾದಾಗ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ 6 ನಿಮಿಷದ ಕಲಾಪದಲ್ಲಿ ಹಿಜಾಬ್ ವಿವಾದದ ಕುರಿತ ತೀರ್ಪು ನೀಡಿದರು. ಅಂತಿಮ ತೀರ್ಪು ಒಟ್ಟು 129 ಪುಟಗಳನ್ನು ಒಳಗೊಂಡಿದೆ. ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಗಿದ್ದ ಹಿಜಾಬ್ ವಿವಾದ ಕರ್ನಾಟಕ ಹೈಕೋರ್ಟ್ನಲ್ಲಿ ಅಂತ್ಯಗೊಂಡಿದೆ.












Click it and Unblock the Notifications