ಹಿಜಾಬ್; ಮಧ್ಯಂತರ ಆದೇಶದ ಬಗ್ಗೆ ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು, ಫೆಬ್ರವರಿ 23; ಪದವಿ ಕಾಲೇಜು ಅಥವಾ ಪದವಿ ಪೂರ್ವ ಕಾಲೇಜು ಆಗಿರಲಿ, ಅಲ್ಲಿ ಸಮವಸ್ತ್ರವನ್ನು ನಿಗದಿಪಡಿಸಲಾಗಿದೆ ಎಂದರೆ ನಮ್ಮ ಆದೇಶವನ್ನು ಪಾಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಬುಧವಾರ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಪೀಠದಲ್ಲಿದ್ದಾರೆ.
ಬುಧವಾರದ ಅರ್ಜಿಯ ವಿಚಾರಣೆ ಅಂತ್ಯಗೊಂಡ ಬಳಿಕ ಅರ್ಜಿದಾರರ ಪರ ವಕೀಲರಾದ ಮೊಹಮ್ಮದ್ ತಾಹೀರ್, ಕೋರ್ಟ್ ಮಧ್ಯಂತರ ಆದೇಶ ಮುಂದಿಟ್ಟುಕೊಂಡು ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸುತ್ತಿಲ್ಲ. ಆದ್ದರಿಂದ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದರು.

ಆಗ ಮುಖ್ಯ ನ್ಯಾಯಮೂರ್ತಿಗಳು ನಮ್ಮ ಆದೇಶವು ಸ್ಪಷ್ಟವಾಗಿದೆ, ಇದು ಸಮವಸ್ತ್ರ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು. ಸಮವಸ್ತ್ರವನ್ನು ಸೂಚಿಸಿದ್ದರೆ ಅದನ್ನು ಪದವಿ ಅಥವಾ ಪಿಯು ಕಾಲೇಜು ಅನುಸರಿಸಬೇಕು ಎಂದು ಸ್ಪಷ್ಟಪಡಿಸಿದರು.
ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಅದು ಪದವಿ ಕಾಲೇಜು ಅಥವಾ ಪದವಿಪೂರ್ವ ಕಾಲೇಜು ಆಗಿರಲಿ. ಅಲ್ಲಿ ಸಮವಸ್ತ್ರವನ್ನು ನಿಗದಿಪಡಿಸಲಾಗಿದೆ ಎಂದರೆ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವ ತನಕ ನಮ್ಮ ಆದೇಶವನ್ನು ಪಾಲಿಸಬೇಕು ಎಂದು ಮೌಖಿಕವಾಗಿ ತಿಳಿಸಿದರು.
ವಕೀಲರಾದ ಮೊಹಮ್ಮದ್ ತಾಹೀರ್ ಹಿಜಾಬ್ ತೆಗೆದು ಹಾಕಲು ಶಿಕ್ಷಕರನ್ನು ಸಹ ಕೇಳಲಾಗುತ್ತಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ಮುಖ್ಯ ನ್ಯಾಯಮೂರ್ತಿಗಳು ನಮ್ಮ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
ಬುಧವಾರ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಕೀಲ ಸಜ್ಜನ್ ಪೂವಯ್ಯ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷ, ಉಪಾಧ್ಯಕ್ಷ ಪರವಾಗಿ ವಾದ ಮಂಡಿಸಿದರು. ವಕೀಲ ಎಸ್. ಎಸ್. ನಾಗಾನಂದ್ ಕಾಲೇಜಿನ ಪ್ರಾಂಶುಪಾಲರ ಪರವಾಗಿ ವಾದ ಮಂಡಿಸಿದ್ದರು.












Click it and Unblock the Notifications