ಹಿಜಾಬ್ ವಿವಾದ: ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆ ಇಲ್ಲ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಫೆಬ್ರವರಿ 23: "ಹಿಜಾಬ್ ವಿವಾದದ ಕಾರಣಕ್ಕೆ ವಿದ್ಯಾರ್ಥಿಗಳು ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಅವರಿಗೆ ಮರುಪರೀಕ್ಷೆ ಇರುವುದಿಲ್ಲ. ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಯಾರೂ ಕೂಡ ಹಠ ಮಾಡಿ ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳಬಾರದು," ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಕೆಲವರು ವಿರೋಧಿಸಿದ್ದಾರೆ. ಅಂತಹವರ ಪರವಾಗಿ ಕಾಂಗ್ರೆಸ್ನವರು ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲಿಸಿ, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಬರಬೇಕು. ಹಿಜಾಬ್ಗಾಗಿ ಹಠ ಹಿಡಿದು ಕೂತರೆ ಇಡೀ ವರ್ಷದ ಶೈಕ್ಷಣಿಕ ಜೀವನ ವ್ಯರ್ಥವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು," ಎಂದು ವಿನಂತಿಸಿದ್ದಾರೆ.
ಕೇಸು ವಾಪಸ್ ಪಡೆದಿದ್ದರಿಂದ ಹತ್ಯೆ
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, "ಕೊಲೆ ಮಾಡಿದ ಆರೋಪಿಗಳ ಮೇಲಿನ ಪ್ರಕರಣಗಳನ್ನು ಈ ಹಿಂದಿನ ಸರ್ಕಾರಗಳು ವಾಪಸ್ ಪಡೆದಿದ್ದೇ ಮತ್ತೆ ಮತ್ತೆ ಹತ್ಯೆ ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ," ಎಂದು ಇದೇ ವೇಳೆ ಸಚಿವ ನಾಗೇಶ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಐದು ವರ್ಷದ ಅಧಿಕಾರಾವಧಿ ನೋಡಿದರೆ ಮಂಗಳೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಎಸಗಿದವರ ಮೇಲೆನ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಅವರಿಗೆ ಭಯವಿಲ್ಲದಂತಾಗಿದೆ ಎಂದರು.
ಶಿವಮೊಗ್ಗದಲ್ಲಿ ಶಾಲಾ- ಕಾಲೇಜು ಯಾವಾಗ ಆರಂಭ?
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ರಜೆ ನೀಡಲಾಗಿರುವ ಶಾಲೆ, ಕಾಲೇಜುಗಳನ್ನು ಪುನಾರಂಭಿಸುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಜಿಲ್ಲಾಧಿಕಾರಿ ನಿರ್ಧಾರ ಮಾಡುತ್ತಾರೆ ಎಂದರು. ಶಿವಮೊಗ್ಗ ನಗರದಲ್ಲಿ ಇನ್ನೆರಡು ದಿನ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಫೆಬ್ರವರಿ 25ರ ಶುಕ್ರವಾರ ಬೆಳಗ್ಗೆ ತನಕ ಕರ್ಫ್ಯೂ ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು, ""ಬುಧವಾರ ಬೆಳಗ್ಗೆವರೆಗೆ ಕರ್ಫ್ಯೂ ಇತ್ತು. ಆದರೆ ಕೆಲವು ಘಟನೆಗಳು ಹಿನ್ನೆಲೆ ಶುಕ್ರವಾರ ಬೆಳಗ್ಗೆವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗುತ್ತಿದೆ,'' ಎಂದರು.

ಅನುದಾನಿತ ಪ್ರೌಢಶಾಲೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ
ರಾಜ್ಯದಲ್ಲಿ 2015ರ ಡಿಸೆಂಬರ್ವರೆಗೆ ನಿವೃತ್ತಿ, ಮರಣ ಹಾಗೂ ರಾಜೀನಾಮೆಯಿಂದ ಖಾಲಿ ಇರುವ 2181 ಹುದ್ದೆಗಳ ಪೈಕಿ 257 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಉಳಿದ 1924 ಹುದ್ದೆಗಳ ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬಿಜೆಪಿಯ ಶಶೀಲ್ ಜಿ. ನಮೋಶಿ, ಪುಟ್ಟಣ್ಣ ಹಾಗೂ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ನೇಮಕಾತಿಗೆ ಈಗಾಗಲೇ ಅನುಮತಿಸಿರುವ 257 ಹುದ್ದೆಗಳ ಪೈಕಿ 54 ಹುದ್ದೆಗಳನ್ನು ಆಯುಕ್ತಾಲಯಗಳ ಹಂತದಲ್ಲಿ ಭರ್ತಿ ಮಾಡಿದ್ದು, ಇನ್ನುಳಿದ 203 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದು ವಿವರಿಸಿದರು.
ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ ಕಾರ್ಯಭಾರದ ಮೇಲೆ ಪರಿಗಣಿತವಾಗಿ ಒಟ್ಟು 998 ಹುದ್ದೆಗಳ ಪೈಕಿ 323 ಹುದ್ದೆಗಳನ್ನು ಈವರೆಗೆ ಭರ್ತಿ ಮಾಡಲಾಗಿದೆ. ಉಳಿದ ಖಾಲಿ ಇರುವ 675 ಹುದ್ದೆಗಳ ಪೈಕಿ 436 ಹುದ್ದೆಗಳಿಗೆ ಆಡಳಿತ ಮಂಡಳಿಗಳು ಈವರೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ನಿರ್ದೇಶನಾಲಯದ ಹಂತದಲ್ಲಿ 239 ಹುದ್ದೆಗಳ ಪ್ರಸ್ತಾವನೆಗಳನ್ನು ವಿವಿಧ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.












Click it and Unblock the Notifications