ಪ್ರೀತಿಸುತ್ತಿದ್ದ ಯುವತಿ ಮದುವೆಯಾಗಲು ಅಪರಾಧಿಗೆ ಪೆರೋಲ್!
ಬೆಂಗಳೂರು, ಏಪ್ರಿಲ್ 05; ಸಾಮಾನ್ಯವಾಗಿ ಬೇರೆಯವರ ಮದುವೆಗೆ ಭಾಗವಹಿಸಲು ಅಥವಾ ತಮ್ಮ ಸಂಬಂಧಿಗಳ ಮದುವೆ ಮಾಡಿಸಲು ಅಪರಾಧಿಗಳಿಗೆ ಪೆರೋಲ್ ನೀಡಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಹೈಕೋರ್ಟ್ ಕೊಲೆ ಕೇಸ್ ಅಪರಾಧಿಯೊಬ್ಬನಿಗೆ 9 ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿರುವ ಯುವತಿಯೊಂದಿಗೆ ಮದುವೆಯಾಗಲು 15 ದಿನ ಪೆರೋಲ್ ನೀಡಿದೆ.
ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ಕೋಲಾರದ ಅಪರಾಧಿಗೆ ನ್ಯಾಯಾಲಯ ಪೆರೋಲ್ ಮಂಜೂರು ಮಾಡಿದೆ. ಹೀಗಾಗಿ 9 ವರ್ಷಗಳ ಆತನ ಮತ್ತು ಆ ಯುವತಿಯ ಪ್ರೀತಿ ಫಲಿಸಲು ನ್ಯಾಯಾಲಯ ನೆರವಾಗಿದೆ. ಆದರೂ ಆತ ಮದುವೆ ಮಾಡಿಕೊಂಡು ಕೆಲ ದಿನಗಳಷ್ಟೇ ಪ್ರೀತಿಯ ಮಡದಿ ಜತೆ ಇರಬಹುದು. ಆಮೇಲೆ ಜೈಲಿಗೆ ವಾಪಸ್ ಬಂದು ಶರಣಾಲೇಬೇಕು. ಏಕೆಂದರೆ ಕೋರ್ಟ್ ಪೆರೋಲ್ ನೀಡುವ ಮುನ್ನ ಹಲವು ಷರತ್ತುಗಳನ್ನು ವಿಧಿಸಿದೆ.

ಏನೇ ಆದರೂ ಅಪರಾಧಿ ಅನಂದನ ಬಾಳಿನಲ್ಲಿ ಇದೊಂದು ಅಪೂರ್ವ ಕ್ಷಣವಾಗಿ ದಾಖಲಾಗಲಿದೆ. ಬೇರೆಯವರ ಜತೆ ಮದುವೆ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದಾರೆಂದು 30 ವರ್ಷದ ಯುವತಿ ನೀತಾ ಹಾಗೂ ಶಿಕ್ಷೆಗೆ ಒಳಗಾಗಿರುವ ಯುವಕನ 63 ವರ್ಷದ ತಾಯಿ ರತ್ನಮ್ಮ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೇ , ಪೆರೋಲ್ ಅವಧಿಯಲ್ಲಿಯಾವುದೇ ಅಪರಾಧ ಕೃತ್ಯ ಎಸಗಬಾರದು, ಪೆರೋಲ್ ಅವಧಿ ಮುಗಿದ ತಕ್ಷಣ ಬಂದು ಪುನಃ ಜೈಲಿಗೆ ಆಗಮಿಸಬೇಕು ಎಂಬುದು ಸೇರಿದಂತೆ ಕಠಿಣ ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಏಪ್ರಿಲ್ 5ರ ಸಂಜೆ 5 ಗಂಟೆಯಿಂದ ಏಪ್ರಿಲ್ 20ರವರೆಗೆ ಅಪರಾಧಿ ಆನಂದ್ಗೆ ಪೆರೋಲ್ ನೀಡಿ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬೇರೆಯವರ ಮದುವೆಯಲ್ಲಿ ಭಾಗವಹಿಸಲು ಅಥವಾ ಬೇರೆಯವರ ಮದುವೆ ಮಾಡಲು ಪೆರೋಲ್ ನೀಡಬಹುದು. ಆದರೆ ಮದುವೆಯಾಗಲು ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿಯಮದಲ್ಲಿ ಅವಕಾಶವಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಪೆರೋಲ್ ನೀಡಲು ಇದೊಂದು ಅಸಾಧಾರಣ ಸಂದರ್ಭವಾಗಿದೆ ಎಂದು ಹೇಳಿದೆ.
ಅಸಾಧಾರಣ ಸಂದರ್ಭ: ಕಾರಾಗೃಹದ ಮ್ಯಾನುಯಲ್ ನಿಯಮ 636(12) ಅನ್ನು ಉಲ್ಲೇಖಿಸಿರುವ ನ್ಯಾಯಾಲಯ, ಕಾರಾಗೃಹದ ಮುಖ್ಯಸ್ಥರು ಅಸಾಧಾರಣ ಸಂದರ್ಭವನ್ನು ಪರಿಗಣಿಸಿ ಪೆರೋಲ್ ನೀಡಬಹುದು. ಈ ಕುರಿತು ಹಲವು ಹೈಕೋರ್ಟ್ ತೀರ್ಪು ನೀಡಿವೆ ಮತ್ತು ಮದುವೆಗಾಗಿ ಪೆರೋಲ್ ಮಂಜೂರು ಮಾಡಿವೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಯುವತಿ, ಅಮ್ಮನ ಮನವಿ ಏನು?; ಅರ್ಜಿದಾರ ನೀತಾ, ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯದಲ್ಲಿ ಜೀವಾವಧಿಗೆ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಹೈಕೋರ್ಟ್ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಇಳಿಸಿದೆ. ಇದೀಗ ಆರು ವರ್ಷ ಜೈಲು ವಾಸ ಅನುಭವಿಸಿದ್ದಾನೆ. ತಾನು 9 ವರ್ಷದಿಂದ ಆರೋಪಿ ಆನಂದ್ ನನ್ನು ಪ್ರೀತಿಸುತ್ತಿದ್ದೇನೆ. ಇದೀಗ ಮನೆಯವರು ಬೇರೆ ಹುಡುಗ ಜತೆ ಮದುವೆಗೆ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಮದುವೆಯಾಗಲು ಪೆರೋಲ್ ನೀಡಬೇಕೆಂದು ಕೋರಿದ್ದರು.
ತಾಯಿ ರತ್ನಮ್ಮ, ತಾನು ನಾನಾ ಕಾಯಿಲೆಗಳಿಂದ ಬಳುತ್ತಿದ್ದೇನೆ, ಇಬ್ಬರು ಮಕ್ಕಳು ಜೈಲಿನಲ್ಲಿದ್ದಾರೆ. ನೀತಾ ಮತ್ತು ಆನಂದ್ ಅವರ ಮದುವೆ ನೋಡಬೇಕು ಎಂಬುದು ತನ್ನ ಆಸೆಯಾಗಿದೆ. ಹಾಗಾಗಿ ತಾವು ಮಗ ಆನಂದ್ ನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದರೂ ಸಹ ಕಾರಾಗೃಹದ ಅಧಿಕಾರಿಗಳು ಅದನ್ನು ಪರಿಗಣಿಸಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.












Click it and Unblock the Notifications