ಕಾಂಗ್ರೆಸ್ ಸಚಿವರ ಬಾಯಿಗೆ ಬೀಗ: ಹೈಕಮಾಂಡ್ ಸಂದೇಶ ರವಾನಿಸಿದ ಪರಮೇಶ್ವರ್
ಬೆಂಗಳೂರು, ಜೂನ್ 28: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಕುರಿತು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತಾಗಿ ಯಾವುದೇ ಸಚಿವರು ಮಾತನಾಡದಂತೆ ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಕಟ್ಟೆಚ್ಚರ ನೀಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೈಕಮಾಂಡ್ ಯಾವುದೇ ಸಚಿವರು ಮಾತನಾಡದಂತೆ ಸೂಚನೆ ನೀಡುವಂತೆ ತಿಳಿಸಿದೆ ಎಂದು ತಾಕೀತು ಮಾಡಿದ್ದಾರೆ.
ಎಚ್.ಡಿ.ಕೆ, ಕಾಂಗ್ರೆಸ್ ಹೈಕಮಾಂಡಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿದ್ದರಾಮಯ್ಯ
ಹೈಕಮಾಂಡ್ನ ಎಲ್ಲಾ ಸೂಚನೆಗಳನ್ನು ಸಚಿವರಿಗೆ ರವಾನಿಸಿರುವ ಪರಮೇಶ್ವರ್ ಇನ್ನುಮುಂದೆ ಸರ್ಕಾರದ ಯಾವುದೇ ನಿರ್ಧಾರ ಕುರಿತಂತೆ ತಾವು ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಮಾತನಾಡತಕ್ಕದ್ದು, ಬೇರೆ ಯಾವುದೇ ಸಚಿವರು ಪಕ್ಷದ ಅಥವಾ ಸರ್ಕಾರದ ಆಂತರಿಕ ವಿಚಾರಗಳ ಕುರಿತು ಮಾತನಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಗೆ ಭಾರಿ ಹಿನ್ನೆಡೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ, ಸಮ್ಮಿಶ್ರ ಸರ್ಕಾರದ ಒಂದೇ ವರ್ಷ ಭವಿಷ್ಯ ಎಂದು ಹೇಳಿದ ವಿಚಾರಗಳನ್ನು ಸಭೆಯ ಗಮನಕ್ಕೆ ತಂದ ಅವರು ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯ ಎಂದರು.
ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರದ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಜೆಡಿಎಸ್ಗಿಂತ ಈ ಮೈತ್ರಿ ಕಾಂಗ್ರೆಸ್ಗೆ ಅನಿವಾರ್ಯವಾಗಿದೆ. ಆದರೂ ನಮ್ಮ ನಾಯಕರು ಹೇಳಿಕೆ ಕೊಡುವುದು ಬಿಡುತ್ತಿಲ್ಲ, ಅಧಿವೇಶನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ ಹೀಗಾಗಿ ನಾವು ಒಟ್ಟಾಗಿ ಇರಬೇಕು ಎಂದರು.
ಪಕ್ಷವನ್ನು ಬಲಗೊಳಿಸಲು, ಉತ್ತಮ ಆಡಳಿತ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸಭೆಯಲ್ಲಿ ಡಾ. ಜಿ. ಪರಮೇಶ್ವರ್, ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ, ಪುಟ್ಟರಂಗ ಶೆಟ್ಟಿ, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಶಿವಾನಂದ ಪಾಟೀಲ್, ಶಂಕರ್, ರಾಜಶೇಖರ ಪಾಟೀಲ ಹುಮ್ನಾಬಾದ್, ವೆಂಕಟ ರಮಣಪ್ಪ, ಜಯಮಾಲಾ, ರಮೇಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಿವಶಂಕರರೆಡ್ಡಿ, ಕೆ.ಜೆ ಜಾರ್ಜ್ ಹಾಜರಿದ್ದರು.