ಪತ್ರಕರ್ತರಿಗಾಗಿ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ಥಾಪನೆ
ಬೆಂಗಳೂರು, ಆ.4 : ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಹರ್ಮನ್ ಮೊಗ್ಲಿಂಗ್ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸ್ಥಾಪನೆ ಮಾಡಿದೆ. ಕರ್ನಾಟಕ ಮೂಲದ ಒಬ್ಬ ಪತ್ರಕರ್ತರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪರಿಣಿತರು ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಿದ್ದಾರೆ. ಈ ಪ್ರಶಸ್ತಿಯು ಒಂದು ಪ್ರಶಸ್ತಿ ಪತ್ರ, ಮೊಗ್ಲಿಂಗ್ ಅವರ ಉಬ್ಬುಚಿತ್ರವಿರುವ ಸ್ಮರಣಿಕೆ ಮತ್ತು ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ಓರ್ವ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ವಿಜೇತರನ್ನು ಆಯ್ಕೆ ಮಾಡಲಿದೆ. ಪ್ರತಿ ವರ್ಷ ಕೇವಲ ಒಬ್ಬರು ಪತ್ರಕರ್ತರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೈರಸಂದ್ರ ಗಂಗರಾಜು ಅವರು ಈ ಕುರಿತು ಮಾಹಿತಿ ನೀಡಿದ್ದು, 'ಪ್ರಶಸ್ತಿಯು ಕರ್ನಾಟಕದಲ್ಲಿನ ಆಂಗ್ಲ ಮತ್ತು ಪ್ರಾದೇಶಿಕ ಮುಖ್ಯವಾಹಿನಿಯ ಎಲ್ಲಾ ಪತ್ರಕರ್ತರಿಗೆ ಮುಕ್ತವಾಗಿರುತ್ತದೆ. ಕರ್ನಾಟಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ 20 ಪತ್ರಕರ್ತರ ಪಟ್ಟಿಯನ್ನು ಮಾಡಿ ಅದರಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ' ಎಂದರು.
2017ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 12, 2017 ರಂದು ಏಟ್ರಿಯಾ ಹೋಟೆಲ್ ನಲ್ಲಿ ನಡೆಯಲಿದೆ. ಹೆರ್ಬಲೈಫ್, ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಮೂಹ ಮತ್ತು ಪ್ರೆಸ್ಟೀಜ್ ಸಮೂಹಗಳು ಇದಕ್ಕೆ ಬೆಂಬಲ ನೀಡುತ್ತಿವೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹಲವು ರಾಜಕಾರಣಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾರು ಹರ್ಮನ್ ಮೊಗ್ಲಿಂಗ್? : ಜರ್ಮನ್ ಪ್ರಜೆಯಾದ ಹರ್ಮನ್ ಮೊಗ್ಲಿಂಗ್ 1836ರಲ್ಲಿ ತಮ್ಮ ಕಿಸೆಯಲ್ಲಿ ಕೇವಲ ಒಂದು ಬೈಬಲ್ ಇರಿಸಿಕೊಂಡು ಮಂಗಳೂರಿಗೆ ಬಂದಿದ್ದರು. ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದಾಗಿ ಅದನ್ನು ಕಲಿತು ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ನಂತರ ಕನ್ನಡದಲ್ಲಿ ಮೊಟ್ಟ ಮೊದಲ ಪ್ರಾದೇಶಿಕ ಭಾಷೆಯ ವಾರ್ತಾ ಪತ್ರಿಕೆ ಮಂಗಳೂರು ಸಮಾಚಾರವನ್ನು ಆರಂಭಿಸಿದರು.












Click it and Unblock the Notifications