ಘಟಾನುಘಟಿಗಳ ಒಡನಾಟವಿದ್ದರೂ ರಾಗಿಣಿಗೆ ಸಂಕಷ್ಟ ಎದುರಾಗಿದ್ದು ಹೇಗೆ?
ಬೆಂಗಳೂರು, ಸೆ. 05: ಘಟಾನುಘಟಿ ರಾಜಕೀಯ ನಾಯಕರ ಒಡನಾಟ, ಪ್ರಭಾವಿಗಳೊಂದಿಗೆ ಸ್ನೇಹವಿದ್ದರೆ ಎಲ್ಲದರಿಂದ ಪಾರಾಗಬಹುದು ಎಂಬ ಮನೋಭಾವನೆಯಿದೆ. ಅಷ್ಟಿದ್ದರೆ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಹುಂಬ ಧೈರ್ಯ ಕೂಡ ಕೆಲವರಿಗೆ ಇರುತ್ತದೆ. ನಿನ್ನೆ ಇಡೀ ದಿನ ನಟಿ ರಾಗಿಣಿ ಅವರ ನಡವಳಿಕೆಯನ್ನು ಗಮನಿಸಿದಾಗ ಕಂಡು ಬಂದಿದ್ದು ಕೂಡ ಅದೇ ರೀತಿಯ ವರ್ತನೆ. ಆದರೆ ತಪ್ಪು ಮಾಡಿ ಕಾನೂನಿನ ಕೈಗೆ ಸಿಲುಕಿದಾಗ ಏನಾಗುತ್ತದೆ ಎಂಬುದು ರಾಗಿಣಿ ಅವರಿಗೆ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆಯೆ ಅರಿವಾಗಿತ್ತು.
Recommended Video
ಇದೀಗ ಎರಡನೇ ದಿನದ ವಿಚಾರಣೆ ಆರಂಭವಾಗುತ್ತಿದ್ದಂತೆಯೆ ಕಾನೂನಿನ ಸಂಪೂರ್ಣ ಅರಿವು ನಟಿ ರಾಗಿಣಿ ಅವರಿಗೆ ಆದಂತಿದೆ. ಜೊತೆಗೆ ಅವರ ಸಹಚರರಿಗೂ ಸಿಸಿಬಿ ಪೊಲೀಸರ ಪ್ರಶ್ನೆಗಳು ಡ್ರಗ್ಸ್ ಕಳ್ಳಸಾಗಣೆ ಮಾಡಿದಷ್ಟು ಸುಲಭವಲ್ಲ ಎಂಬ ಅರಿವಾಗಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವಂತೆ ಕಂಡು ಬರುತ್ತಿದ್ದರೂ, ಅದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೆಲ್ಲದರ ಮಧ್ಯೆ ನಟಿ ರಾಗಿಣಿ ಅವರು ಪ್ರಭಾವಿಗಳ ಒಡನಾಟ ಹೊಂದಿದ್ದರೂ ಯಾರೂ ಅವರ ರಕ್ಷಣೆಗೆ ಬರಲಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಡ್ರಗ್ಸ್, ನಟಿ ರಾಗಿಣಿ ಅರೆಸ್ಟ್: ಇಕ್ಕಟ್ಟಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ
ರಾಗಿಣಿ ಮೇಲೆ ಗಂಭೀರ ಪ್ರಕರಣ
ಸ್ಯಾಂಡಲ್ವುಡ್ಗೆ ಡ್ರಗ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ದಾಖಲಿಸಿರುವ ಸುಮೋಟೋ ಪ್ರಕರಣದಲ್ಲಿ ಯಾರೆಲ್ಲಾ ಆರೋಪಿಗಳು ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ಈಗಾಗಲೇ ಸಿಸಿಬಿ ರಾಗಿಣಿ ಅವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ.
ನಟಿ ರಾಗಿಣಿ ಅವರ ವಿರುದ್ಧ ಕೇವಲ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಫಿಕ್ ವಸ್ತು ಕಾಯ್ದೆ ಮಾತ್ರ ಹಾಕಿಲ್ಲ. ಬದಲಿಗೆ ಇನ್ನಷ್ಟು ಗಂಭೀರ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ. 1985ರ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಫಿಕ್ ವಸ್ತು ಕಾಯ್ದೆ ಮತ್ತು ಮಾದಕ ದ್ರವ್ಯ ಅಕ್ರಮ ಸಾಗಣೆ ನಿಯಂತ್ರಣ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಎನ್ಡಿಪಿಎಸ್ ಆ್ಯಕ್ಟ್ನ ಸೆಕ್ಷನ್ 21, 21c, 27b, 27A, 29, IPC 120B ಅಡಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ಜೊತೆಗೆ ಪ್ರಕರಣದಲ್ಲಿ 12 ಜನರ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಖಚಿತ ಮಾಹಿತಿಯಿದೆ.
ರಾಗಿಣಿ ದ್ವಿವೇದಿ A2
ಸಿಸಿಬಿ ಉನ್ನತ ಮೂಲಗಳಿಂದ 'ಒನ್ಇಂಡಿಯಾ ಕನ್ನಡ'ಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಆರೋಪಿ ನಂಬರ್ 2 ಎಂದು ತಿಳಿದು ಬಂದಿದೆ.
ಹಾಗೆ, ಶಿವಪ್ರಕಾಶ್ ಮೊದಲ ಆರೋಪಿ (A1) ಆಗಿದ್ದಾರೆ. ರಾಗಿಣಿ ದ್ವಿವೇದಿ A2, ವಿರೇನ್ ಖನ್ನಾ A3, ಪ್ರಶಾಂತ್ ರಂಕಾ A4, ವೈಭವ್ ಜೈನ್ A5, ಆದಿತ್ಯ ಆಳ್ವಾ A6, ಲೂಮ್ ಪೆಪ್ಪರ್ A7, ಪ್ರಶಾತ್ ರಿಜು A8, ಅಶ್ವಿನ್ A9, ಅಭಿ ಸ್ವಾಮಿ A10, ರಾಹುಲ್ A11 ಹಾಗೂ ವಿನಯ್ A12 ಅವರು ಕ್ರಮವಾಗಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಬಚಾವಾಗದಿರಲು ಕಾರಣ!
ನಟಿ ರಾಗಿಣಿ ಅವರ ಬಂಧನದ ಕುರಿತು ಪ್ರಮುಖವಾಗಿ ಎರಡು ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ರಾಗಿಣಿ ದ್ವಿವೇದಿ ಅವರು ಹಾಲಿ ಆಡಳಿತ ಪಕ್ಷ ಬಿಜೆಪಿಯ ಹಲವು ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರೂ ಯಾರೂ ರಕ್ಷಣೆಗೆ ಬಂದಿಲ್ಲ ಯಾಕೆ? ಹೌದು, ನಟಿ ರಾಗಿಣಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದರು.
ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ಬಹುತೇಕ ಬಿಜೆಪಿ ನಾಯಕರೊಂದಿಗೆ ರಾಗಿಣಿ ಅವರು ಒಡನಾಟ ಹೊಂದಿದ್ದರು. ಲಾಕ್ಡೌನ್ ವೇಳೆಯಲ್ಲಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಶಾಲಾ ಮಕ್ಕಳಲ್ಲಿ, ಸಮುದಾಯದಲ್ಲಿ ಮಾದಕವಸ್ತುಗಳ ಕುರಿತು ಜಾಗೃತಿ ಮೂಡಿಸುವ ಕುರಿತು ಚರ್ಚಿಸಿದ್ದರು.
ಕಾನೂನಾತ್ಮಕ ಸಂಕಷ್ಟ
ಇನ್ನು ಡ್ರಗ್ಸ್ ದಂಧೆ ಹಾಗೂ ಸಿನಿಮಾ ರಂಗದ ನಂಟಿನ ಕುರಿತು ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದ ಸಾಕ್ಷಿಗಳು ಅತ್ಯಂತ ಬಲವಾಗಿದ್ದವು. ಹೀಗಾಗಿ ರಾಗಿಣಿ ಅವರನ್ನು ರಕ್ಷಣೆ ಮಾಡುವುದು ಯಾರಿಂದಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಇಡೀ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ರಾಗಿಣಿ ಅವರ ಡ್ರಗ್ಸ್ ನಂಟನ್ನು ಖಚಿತಪಡಿಸಿದ್ದವು. ಈ ಸಂದರ್ಭದಲ್ಲಿ ಯಾರೂ ಅನಗತ್ಯವಾಗಿ ಪ್ರಕರಣದಲ್ಲಿ ಮಧ್ಯೆ ಪ್ರವೇಶ ಮಾಡಲು ಹೋಗಿಲ್ಲ. ಹೀಗಾಗಿ ನಟಿ ರಾಗಿಣಿ ಅವರು ಸಂಕಷ್ಟಕ್ಕೆ ಸಿಲುಕಿದರು ಎನ್ನಲಾಗಿದೆ.