ಈಶ್ವರಪ್ಪ ವಿಚಾರದಲ್ಲಿ ಅಮಿತ್ ಶಾ ತಲೆ ಕೆಟ್ಟು ಮೊಸರು ಗಡಿಗೆ
ರಾಜ್ಯ ಕಾರ್ಯಕಾರಿಣಿ ಸಭೆ ಆರಂಭ ಆಗುವುದರೊಳಗೆ ಕರ್ನಾಟಕ ಬಿಜೆಪಿಯ ಭಿನ್ನಮತ ಶಮನವಾಗಿರಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ. ಈ ಮಧ್ಯೆ ಈಶ್ವರಪ್ಪನವರ ಹೇಳಿಕೆಗಳು ಕೇಂದ್ರ ನಾಯಕರಲ್ಲಿ ಮುಜುಗರ ಉಂಟುಮಾಡಿವೆ
ಬೆಂಗಳೂರು, ಮೇ 3: ಇದೀಗ ಕರ್ನಾಟಕ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮೇ 6ರಿಂದ ಮೈಸೂರಿನಲ್ಲಿ ಸಭೆ ನಡೆಯಲಿದ್ದು, ಬಿಜೆಪಿಯು ಭಿನ್ನಮತದ ಮುಜುಗರ ಎದುರಿಸುವಾಗಲೇ ಕಾರ್ಯಕಾರಿಣಿ ನಿಗದಿಯಾಗಿದೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯೊಂದನ್ನು ಕಳುಹಿಸಿದ್ದು, ಸಭೆಗೂ ಮುನ್ನ ಭಿನ್ನಮತಕ್ಕೆ ಕೊನೆ ಹಾಡಿರಬೇಕು ಎಂದಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಅಮಿತಾ ಶಾ ಒಪ್ಪಿಗೆ ಇದೆ ಎಂಬ ಕೆಎಸ್ ಈಶ್ವರಪ್ಪ ಅವರ ಮಾತಿಗೆ ಕೇಂದ್ರ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಗೆ ವಿಷಯ ಸ್ಪಷ್ಟಪಡಿಸಿರುವ ಅಮಿತ್ ಶಾ, ಸದ್ಯದಲ್ಲೇ ಕ್ರಮ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.[ರಾಜ್ಯ ಬಿಜೆಪಿಯ ಎರಡು ಒಡೆದ ಮನಸ್ಸುಗಳು ಮತ್ತಷ್ಟು ದೂರ..ದೂರ?]

ಜನವರಿ ಇಪ್ಪತ್ತೇಳರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ರಾಯಣ್ಣ ಬ್ರಿಗೇಡ್ ಗೆ ಒಪ್ಪಿಗೆ ಸೂಚಿಸಿದ್ದರು ಎಂದು ಈಶ್ವರಪ್ಪ ಏನು ಹೇಳುತ್ತಿದ್ದಾರೋ ಅದು ಶುದ್ಧ ಸುಳ್ಳು ಎಂದು ದೆಹಲಿಯಲ್ಲಿರುವ ಬಿಜೆಪಿ ಮೂಲಗಳು ಹೇಳುತ್ತಿವೆ. ಬ್ರಿಗೇಡ್ ನಿಂದ ದೂರವಿದ್ದು, ಪಕ್ಷದ ಕೆಲಸ ಮಾಡಿಕೊಂಡು ಹೋಗಿ ಎಂದು ಈಶ್ವರಪ್ಪನವರಿಗೆ ಸೂಚನೆ ಇತ್ತು.

ಆದರೆ, ಆ ಸೂಚನೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬ್ರಿಗೇಡ್ ಸಭೆಗಳಲ್ಲಿ ಈಶ್ವರಪ್ಪ ಮುಂದುವರಿದಿದ್ದಾರೆ. ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ನನ್ನ ಹೋರಾಟ ಎನ್ನುತ್ತಾರೆ ಈಶ್ವರಪ್ಪ. ಬ್ರಿಗೇಡ್ ಗೆ ಅಮಿತ್ ಶಾ ವಿರೋಧ ಮಾಡಿಲ್ಲ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. ನಾನು ಕೇಂದ್ರ ನಾಯಕತ್ವದ ವಿರುದ್ಧ ಹೋಗುವ ಮಾತಿಲ್ಲ. ರಾಜ್ಯದಲ್ಲಿ ದಲಿತರಿಗೆ ಒಂದು ವೇದಿಕೆ ಕಲ್ಪಿಸಿಕೊಡುತ್ತಿದೆ ರಾಯಣ್ಣ ಬ್ರಿಗೇಡ್ ಎಂದು ಸಹ ಈಶ್ವರಪ್ಪ ಹೇಳಿದ್ದಾರೆ.











Click it and Unblock the Notifications