ಮಲ್ಲಿಕಾರ್ಜುನ ಖರ್ಗೆ ಸೇಡಿನಾಟದಲ್ಲಿ ಸಿದ್ದುಗೆ ಭಾರೀ ಮುಖಭಂಗ!
ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎನ್ನುವ ಪಕ್ಷದೊಳಗಿನ ಆಂತರಿಕ ಬೇಗುದಿ ಶತಮಾನದ ಇತಿಹಾಸವಿರುವ ಕಾಂಗ್ರೆಸ್ಸಿನಲ್ಲಿ ಇಂದು ನಿನ್ನೆಯದಲ್ಲ. ಉಪ ಚುನಾವಣೆ ನಡೆಯುತ್ತಿರುವ ಬೆಂಗಳೂರು ನಗರ ವ್ಯಾಪ್ತಿಯ ಹೆಬ್ಬಾಳ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ.
ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲೂ ಮೂಲ ಕಾಂಗ್ರೆಸ್ಸಿಗರು ತಮ್ಮ ನೋವನ್ನು ಬಹಿರಂಗವಾಗಿಯೇ ತೋಡಿಕೊಂಡಿದ್ದುಂಟು.
ಎಸ್ ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಹಿರಿಯ ಮುಖಂಡರು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಉದಾಹರಣೆಗಳೂ ಇವೆ. (3 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಟ್ಟಿ)
ಇನ್ನು ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ಏನೇನೂ ಸರಿಯಿಲ್ಲ ಎನ್ನುವುದಕ್ಕೆ ಎಷ್ಟೋ ಘಟನೆಗಳು ಸಾಕ್ಷಿಯಾಗಿವೆ, ಆಗುತ್ತಲೂ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ತೋರಿದ ನಂತರ ಮೂಲ ಕಾಂಗ್ರೆಸ್ಸಿಗರು ಹಿನ್ನಡೆ ಅನುಭವಿಸಿದ್ದಂತೂ ಹೌದು.
ಮೂರು ಶಾಸಕರ ನಿಧನದ ನಂತರ ಖಾಲಿಯಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ (ಹೆಬ್ಬಾಳ, ಬೀದರ್, ದೇವದುರ್ಗ) ಶನಿವಾರ ಫೆಬ್ರವರಿ 13ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಇಂದೇ (ಜ27) ಕೊನೆಯ ದಿನ. ಮತಎಣಿಕೆ ಫೆಬ್ರವರಿ 16 ಮಂಗಳವಾರದಂದು ನಡೆಯಲಿದೆ.( 3ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆ)
ಮೂರು ಕ್ಷೇತ್ರಗಳ ಪೈಕಿ, ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದ್ದು ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ. ಕಾರಣವೇನಂದರೆ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಇದು ಪ್ರತಿಷ್ಠೆ ಪ್ರಶ್ನೆಯಾಗಿದ್ದದ್ದು. ಹೈಕಮಾಂಡ್ ನೆಲದಲ್ಲಿ ಖರ್ಗೆ ದಾಳ, ಮುಂದೆ ಓದಿ..
ಸಿದ್ದರಾಮಯ್ಯ ಆಪ್ತ ಬೈರತಿ ಸುರೇಶ್
ಇನ್ನೇನು ಸಿದ್ದರಾಮಯ್ಯ ಆಪ್ತ ಬೈರತಿ ಸುರೇಶ್ ಅವರಿಗೆ ಕಾಂಗ್ರೆಸ್ಸಿನ ಬಿಫಾರಂ ಸಿಕ್ಕೇಬಿಡ್ತು ಅನ್ನೋವಷ್ಟರಲ್ಲಿ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಆವರಣದಲ್ಲಿ ಉರುಳಿಸಿದ ದಾಳ ಚೆನ್ನಾಗಿ ವರ್ಕೌಟ್ ಆಗಿ, ಖರ್ಗೆ ತಮ್ಮ ಬಿಳಿಪಂಚೆಯನ್ನು ಕೊಡವಿದ್ದಾರೆ, ಚುನಾವಣೆ ಗೆದ್ದಷ್ಟೇ ಸಂತುಷ್ಟರಾಗಿದ್ದಾರೆ. ಸೋನಿಯಾ ಮುಂದೆ ಪಟ್ಟು ಹಿಡಿದು, ಜಾಫರ್ ಷರೀಫ್ ಮೊಮ್ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖರ್ಗೆ Vs ಸಿದ್ದು
ಚುನಾವಣೆಯ ಫಲಿತಾಂಶ ಏನೇ ಬರಲಿ ಖರ್ಗೆ Vs ಸಿದ್ದು ಇದರಲ್ಲಿ ಯಾರಿಗೆ ಗೆಲುವು ಎನ್ನುವ ರೀತಿಯಲ್ಲಿ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಜಾಫರ್ ಷರೀಫ್ ಮೊಮ್ಮಗನಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಸಂಜೆ ಈ ಬೆಳವಣಿಗೆಗಳಿಗೆ ಫುಲ್ ಸ್ಟಾಪ್ ಇಟ್ಟಿದೆ. ತಾನು ಬಯಸಿದ ಅಭ್ಯರ್ಥಿಯ ಹೆಸರಿನಲ್ಲೇ ಬಿಫಾರಂಗೆ ಸೋನಿಯಾ ಗಾಂಧಿಯವರ ಬಳಿ ಸಹಿ ಹಾಕಿಸುವಲ್ಲಿ ಖರ್ಗೆ ಯಶಸ್ವೀಯಾಗುವ ಮೂಲಕ ಸಿದ್ದು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಬೈರತಿ ಸುರೇಶ್
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ದ ಕಣಕ್ಕಿಳಿದು, ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಜೊತೆಗೆ ಆರ್ಥಿಕವಾಗಿ ಬಲಾಢ್ಯವಾಗಿರುವ ಬೈರತಿ ಸುರೇಶ್ ಹೆಸರನ್ನು ಪಕ್ಷದ ಟಿಕೆಟಿಗೆ ಅನುಮೋದನೆ ಮಾಡಿದ್ದಕ್ಕಾಗಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ವಿರುದ್ದ ಬೇಸರಗೊಳ್ಳುವಂತಾಗಲು ಖರ್ಗೆಯವರ ಪಾಲು ಕಮ್ಮಿ ಏನೂ ಇಲ್ಲ.
ಜಗದೀಶ್ ಕುಮಾರ್ ನಿಧನದಿಂದ ತೆರವಾದ ಕ್ಷೇತ್ರ
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಂದ ತೆರವಾದ ಸ್ಥಾನಕ್ಕೆ ಅವರ ಶಿಷ್ಯ ಜಗದೀಶ್ ಕುಮಾರ್ ಸ್ಪರ್ಧಿಸಿ ಗೆದ್ದಿದ್ದರು. ಮಾಜಿ ರೈಲ್ವೆ ಸಚಿವ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಜಾಫರ್ ಶರೀಫ್ ಮೊಮ್ಮಗ (ರೆಹಮಾನ್ ಷರೀಫ್) ಜಗದೀಶ್ ಅವರಿಗೆ ತೀವ್ರ ಪೈಪೋಟಿ ನೀಡಿ ಕಮ್ಮಿ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈಗ ಜಗದೀಶ್ ಅಕಾಲಿಕ ನಿಧನದಿಂದ ಮತ್ತೆ ಚುನಾವಣೆ ನಡೆಯುತ್ತಿದೆ.
ಮೂಲ ಕಾಂಗ್ರೆಸ್ಸಿಗರ ಲಾಬಿ
ಮೊಮ್ಮಗನಿಗೆ ಟಿಕೆಟ್ ನೀಡಲೇ ಬೇಕೆಂದು ಹಠಕ್ಕೆ ಬಿದ್ದಿದ್ದ ಹಿರಿಯ ಮುಖಂಡ ಜಾಫರ್ ಷರೀಫ್, ಖರ್ಗೆ ಮೂಲಕ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಮೊಮ್ಮಗ ಸೋತಿದ್ದಾನೆ, ಅವನಿಗೆ ಈ ಬಾರಿ ಚುನಾವಣೆಗೆ ಟಿಕೆಟ್ ನೀಡಬೇಕು ಎನ್ನುವುದು ಜಾಫರ್ ಷರೀಫ್ ಒತ್ತಾಯವಾಗಿದ್ದರೂ, ಸಿದ್ದು ಅವರನ್ನು ಮಣಿಸಲೇ ಬೇಕು ಎನ್ನುವ ಮೂಲ ಕಾಂಗ್ರೆಸ್ಸಿಗರ ಲಾಬಿ ಇಲ್ಲಿ ಗೆದ್ದಿದೆ.
ರೆಹಮಾನ್ ಷರೀಫ್
ಕಳೆದ ಚುನಾವಣೆಯಲ್ಲಿ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ, ಕಾಂಗ್ರೆಸ್ಸಿನ ಯುವ ಮುಖಂಡ ರೆಹಮಾನ್ ಷರೀಫ್, ಟಿಕೆಟ್ ಲಭಿಸುತ್ತಿದ್ದಂತೇ ತನ್ನ ನೂರಾರು ಅಭಿಮಾನಿಗಳ ಜೊತೆ ಕೆಪಿಸಿಸಿ ಕಚೇರಿ ಮುಂದೆ ಜಮಾಯಿಸಿ, ಚುನಾವಣೆ ಗೆದ್ದಷ್ಟೇ ಸಂತೋಷದಿಂದ ಪಟಾಕಿ ಹೊಡೆದು ಸಂಭ್ರಾಮಚರಣೆ ನಡೆಸಿದ್ದಾರೆ.
ಹೆಬ್ಬಾಳ ಉಪಚುನಾವಣೆಯಲ್ಲಿ ಅಂತಿಮವಾದ ಮೂರು ಪಕ್ಷದ ಅಭ್ಯರ್ಥಿಗಳು
ಬಿಜೆಪಿ:
ವೈ
ಎ
ನಾರಾಯಣಸ್ವಾಮಿ
ಕಾಂಗ್ರೆಸ್
:
ರೆಹಮಾನ್
ಷರೀಫ್
ಜೆಡಿಎಸ್
:
ಇಸ್ಮಾಯಿಲ್
ಷರೀಫ್