ಭಾರೀ ಮಳೆಯಿಂದ ಪ್ರವಾಹ ಸ್ಥಿತಿ: ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಜೆಡಿಎಸ್ ಮನವಿ
ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಸುರಿದಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೆರೆ, ಮಳೆ ಹೇಳಿ ಬರುವುದಿಲ್ಲ, ನಿಜ. ಈ ಪ್ರಾಕೃತಿಕ ವಿಕೋಪ ಪ್ರತೀ ವರ್ಷ ಮರುಕಳಿಸುತ್ತಿದೆ. ಆದರೆ ಜನರು, ಜನಜೀವನವನ್ನು ರಕ್ಷಿಸುವ ಯಾವುದೇ ಮುಂದಾಲೋಚನೆ, ದೂರದೃಷ್ಟಿ ಸರ್ಕಾರಕ್ಕಿಲ್ಲ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಆಡಳಿತಗಾರರು ವರ್ತಿಸುತ್ತಿರುವುದು ದುರದೃಷ್ಟಕರ ಎಂದು ರಾಜ್ಯ ಸರ್ಕಾರವನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ಪ್ರಕೃತಿ ವಿಕೋಪಗಳ ಕುರಿತು ರಾಜಕೀಯ ಖಂಡಿತ ಕೂಡದು. ಆದರೆ ಆಡಳಿತ ನಡೆಸುವವರ ಅಸಡ್ಡೆ-ಉಪೇಕ್ಷೆ ಸಹಿಸಲು ಸಾಧ್ಯವಿಲ್ಲ. ಕಲಬುರಗಿ ಸೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸಂಭವಿಸಿರುವ ಪರಿಸ್ಥಿತಿ ನೋಡಿದರೆ, ಗಾಬರಿ ಆಗುತ್ತದೆ. ಹಳ್ಳಿಗಳಿಗೆ ಹಳ್ಳಿಗಳೇ ನದಿ ನೆರೆಗೆ ಸಿಕ್ಕಿ ಮುಳುಗಿವೆ. ಜಲಾವೃತಗೊಂಡ ಹಳ್ಳಿಗಳ ದೃಶ್ಯಗಳನ್ನು ಕಂಡರೆ ಮೈ ನಡುಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಸರ್ಕಾರ ತುರ್ತಾಗಿ ಇಷ್ಟನ್ನು ಮಾಡಲೇಬೇಕು. ಭವಿಷ್ಯದಲ್ಲಿ ಈ ಎಲ್ಲ ನೆರೆಪೀಡಿತ ಗ್ರಾಮಗಳನ್ನು ರಕ್ಷಿಸಲು ಸಮಗ್ರ ಯೋಜನೆ ರೂಪಿಸಬೇಕು. ಸರ್ಕಾರವು ಸಮರೋಪಾದಿಯಲ್ಲಿ ನೆರೆಪೀಡಿತರಿಗೆ ಆಹಾರ, ನೀರು, ಔಷಧಿ ಸೇರಿ ಇತ್ಯಾದಿ ತುರ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಗಂಜಿಕೇಂದ್ರಗಳನ್ನು ಕ್ಷಿಪ್ರವಾಗಿ ತೆರೆಯಿರಿ. ಪರಿಕಾರ ಕಾರ್ಯಗಳಿಗೆ ಉಸ್ತುವಾರಿಗಳನ್ನಾಗಿ ಹಿರಿಯ ಸಚಿವರನ್ನು ನೇಮಿಸಿ, ಅವರ ಸಹಕಾರಕ್ಕೆ ದಕ್ಷ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ. ಬೆಳೆ ನಷ್ಟವನ್ನು ತುರ್ತಾಗಿ ಅಂದಾಜಿಸಿ ತಕ್ಷಣವೇ ರೈತರಿಗೆ ಪರಿಹಾರ ನೀಡಿ. ಪ್ರಾಣ ನಷ್ಟ, ಜಾನುವಾರು-ಆಸ್ತಿ ನಷ್ಟ ಅನುಭವಿಸಿರುವ ಕುಟುಂಬಳಿಗೆ ಕೂಡಲೇ ಪರಿಹಾರ ನೀಡಿ ಮುಖ್ಯಮಂತ್ರಿಗಳು ತುರ್ತಾಗಿ ಇಷ್ಟೂ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ವತಃ ತಾವೇ ಇಡೀ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ ನಿರ್ವಹಿಸಬೇಕು ಎಂದು ಒತ್ತಾಯಿಸಿದೆ.
ಸಿಎಂ ಸಿದ್ದರಾಮಯ್ಯ ಸೂಚನೆ
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಕೃಷ್ಣಾ ನದಿಗೆ ಮಹಾರಾಷ್ಟ್ರದ ಉಜನಿ, ನೀರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಭೀಮಾ ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿ, ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಭಾರೀ ಮಳೆಯಿಂದಾಗಿ ಭೀಮ ನದಿ ತೀರ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ. ಸಂತ್ರಸ್ತರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಶೀಘ್ರದಲ್ಲೇ ನಾನೂ ಸಹ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮಗಳ ಬಗ್ಗೆ ಪರಿಶೀಲಿಸಲಿದ್ದೇನೆ ಎಂದಿದ್ದಾರೆ.












Click it and Unblock the Notifications