ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಬಿರುಸುಗೊಂಡ ಮಳೆ
ಬೆಂಗಳೂರು, ಜುಲೈ 8: ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಮಲೆನಾಡಿನಲ್ಲಿ ಮಳೆ ಬಿರುಸುಗೊಂಡಿದೆ.
ದಕ್ಷಿಣ ಕನ್ನಡ, ಮಂಗಳೂರು, ಬೆಳ್ತಂಗಡಿ, ಉಡುಪಿ, ಕುಮಟ, ಕಾರವಾರ, ಶಿರಸಿ, ಸಾಗರ ಹಾಗೂ ಶಿವಮೊಗ್ಗ ಭಾಗದಲ್ಲಿ ಮಳೆ ಆಗುತ್ತಿದೆ. ಹೀಗಾಗಿ, ಕೃಷಿ ಚಟುವುಟಿಕೆಗೆ ಚುರುಕು ಸಿಕ್ಕಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಬೆಳಗಾವಿ ಸೇರಿ ಕೆಲವು ಭಾಗಗಳಲ್ಲಿ ತುಂತುರು ಮಳೆ ಆಗುತ್ತಿದೆ.
ಜೂನ್ ತಿಂಗಳಲ್ಲಿ ಕೈ ಕೊಟ್ಟಿದ್ದ ಮಾನ್ಸೂನ್ ಕೊನೆಗೂ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಮಳೆ ಮುಂದುವರಿದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡದ ಕವಿದ ವಾತಾವರಣ ಇದೆ.
ಇನ್ನು, ಅಣೆಕಟ್ಟುಗಳು ಕೂಡ ಅಂದುಕೊಂಡ ಮಟ್ಟಿಗೆ ತುಂಬಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಮಳೆ ಆಗುತ್ತಿದ್ದ ರೈತರಲ್ಲಿ ಸಂತಸ ಮೂಡಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇದೇ 8 ರಿಂದ 12ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿತ್ತು
ಮೇ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ, ಈಗ ಮತ್ತೆ ಮಳೆ ಆಗುತ್ತಿರುವದರಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ.

ಮುಂದಿನ 5 ದಿನಗಳ ಕಾಲ ಎಲ್ಲೆಲ್ಲಿ ಮಳೆ?
ಇಂದಿನಿಂದ 5 ದಿನಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಹೀಗಾಗಿ ಈ ವಾರ ಪೂರ್ತಿ ಮಳೆ ಆಗಲಿದೆ.

ತಲಕಾವೇರಿಯಲ್ಲಿ ಭೂಕುಸಿತ
ಭಾಗಮಂಡಲ-ತಲ ಕಾವೇರಿ ನಡುವೆ ಮಂಗಳವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಈ ಭಾಗದಲ್ಲಿ ಜನವಸತಿಯಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ತಲಕಾವೇರಿಗೆ ವಾಹನ ಸಂಚಾರ ಬಂದ್ ಆಗಿದೆ. ಮಡಿಕೇರಿಯ ಆಕಾಶವಾಣಿ ಟವರ್ ಬಳಿಯೂ ಮಣ್ಣು ಕುಸಿದಿದ್ದು, ತಡೆಗೋಡೆ ಕಾಮಗಾರಿಯಲ್ಲಿ ನಿರತರಾಗಿದ್ದ 7 ಮಂದಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಎಲ್ಲಿ ಎಷ್ಟು ಮಳೆಯಾಗಿದೆ?
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಮಂಗಳವಾರ 15 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಭಾಗಮಂಡಲ 13, ಕೊಲ್ಲೂರು 7, ಸಿದ್ದಾಪುರ, ಪುತ್ತೂರು, ಹೊಸನಗರ 6, ಸುಬ್ರಹ್ಮಣ್ಯ 5, ಬೆಳ್ತಂಗಡಿ, ಕೋಟಾ 4, ಮಂಗಳೂರು, ಕಾರ್ಕಳ, ಕುಂದಾಪುರ, ಗೋಕರ್ಣ, ಮೂಡಬಿದಿರೆ, ಶೃಂಗೇರಿ, ಸಾಗರ 3, ಹಾಸನ 2, ಶಿವಮೊಗ್ಗ, ಶಿಕಾರಿಪುರ, ಬೇಲೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.












Click it and Unblock the Notifications