ಬೇಸಿಗೆ ಬೇಗೆ ತಣಿಸಿದ ವರುಣ, ರೋಗಗಳಿಗೂ ಇದು ಕಾರಣ
ಬೆಂಗಳೂರು, ಏ. 12: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರ ಮತ್ತು ಭಾನುವಾರ ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ಸಂಜೆಯಿಂದ ಆರಂಭವಾದ ಗುಡುಗು ಸಹಿತ ಮಳೆ ರಾತ್ರಿವರೆಗೂ ಮುಂದುವರಿದಿತ್ತು.
ವೀಕೆಂಡ್ ಹುಮ್ಮಸ್ಸಿನಲ್ಲಿದ್ದ ಜನರಿಗೆ ಮಳೆ ತಣ್ಣೀರೆರೆಚಿತು. ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಮಳೆ ಆರಂಭವಾಗಿದೆ. ಶನಿವಾರ ರಾತ್ರಿ ಸುರಿದಂತೆ ತುಂತುರು ಮಳೆ ಸುರಿಯುತ್ತಿದೆ.[ಅಕಾಲಿಕ ಮಳೆಗೆ ಕಾರಣವೇನು]

ಬೀಸಿಲಿನ ಬೇಗೆಗೆ ತತ್ತರಿಸಿದ್ದ ಬೆಂಗಳೂರು ನಾಗರೀಕರಿಗೆ ಮಳೆಯ ಅನುಭವ ಹಿತವನ್ನೇನೋ ನೀಡಿದೆ. ಆದರೆ ಅದರೊಂದಿಗೆ ರೋಗಗಳ ಭಯವನ್ನು ತಂದಿಟ್ಟಿದೆ. ನಗರದಲ್ಲಿ ಇನ್ನು ಇಂದು ವಾರ ಕಾಲ ಇದೇ ಬಗೆಯ ವಾತಾವರಣ ಮುಂದುವರಿಯಲಿದ್ದು ಸಂಜೆ ಗುಡುಗಿನಿಂದ ಕೂಡುದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. 36-37 ಡಿಗ್ರಿಗೆ ತಲುಪಿದ್ದ ಉಷ್ಣಾಂಶ ಒಮ್ಮೆಲೆ 24 ಕ್ಕೆ ಇಳಿದಿದೆ.
ಶನಿವಾರ ರಾಜ್ಯದ ಬೀದರ್, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬೀದರ್ ಜಿಲ್ಲೆ ಔರಾದ ತಾಲೂಕಿನಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆ-ಗಾಳಿಗೆ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ನೆಲಕ್ಕುರುಳಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಕಡೂರು, ಬೆಳಗಾವಿ, ಪುತ್ತೂರು, ಸುಬ್ರಹ್ಮಣ್ಯ, ಬಾದಾಮಿ, ಕೆರೂರು, ಝಳಕಿ, ಭಾಲ್ಕಿ, ತರೀಕೆರೆ, ಯೆಗಚಿ, ಸಕಲೇಶಪುರ, ಅಥಣಿ, ಮಹಾಲಿಂಗಪುರ, ಕುಂದರಗಿ, ಜಮಖಂಡಿ, ನಾಗಠಾಣ, ಕಲಬುರುಗಿ, ಚಿಂಚೋಳಿ, ರಾಯಚೂರು, ದೇವದುರ್ಗ, ನಾಪೋಕ್ಲು, ಭದ್ರಾವತಿ, ಲಕ್ಕವಳ್ಳಿ, ಬಾವಿಕೆರೆ, ಆಲೂರು, ಹಳೇಬೀಡು, ಬಂಡೀಪುರದಲ್ಲೂ ಮಳೆಯಾದ ವರದಿಯಾಗಿದೆ.
ಮುಂಗಾರು ಮಳೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಎಲ್ ನಿನೋ (ಪೆಸಿಫಿಕ್ ಸಾಗರದಲ್ಲಿನ ತಾಪಮಾನ ವಿಚಿತ್ರ ರೀತಿಯಲ್ಲಿ ಏರಿಕೆ ಕಾಣುವುದು) ಪರಿಣಾಮದ ಸಾಧ್ಯತೆ ಈ ಬಾರಿ ಶೇ.50ರಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದಕ್ಕೆ ಅಮೆರಿಕ ಸಹ ಧ್ವನಿ ಗೂಡಿಸಿದ್ದು 2015ರ ವರ್ಷಾಂತ್ಯದವರೆಗೂ ಎಲ್ ನಿನೋ ಪ್ರಭಾವ ಕಂಡುಬರಲಿದೆ ಎಂದು ಹೇಳಿದೆ. ಹಾಗಾಗಿ ಈ ಬಾರಿ ಮುಂಗಾರು ಕೈ ಕೊಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

ಮಳೆಯಲ್ಲಿ ಗಲ್ಲಿ ಕ್ರಿಕೆಟ್
ವಾರಾಂತ್ಯದ ಮೂಡ್ ನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಕಿರಿಕಿರಿ ತಂದಿದ್ದೆಂತೂ ಸತ್ಯ. ಆದರೆ ಜಯನಗರದ ಹುಡುಗರು ಇದರಲ್ಲೇ ಸಂಭ್ರಮಿಸಿದರು. ಅತ್ತ ಐಪಿಲ್ ಪಂದ್ಯಗಳು ನಡೆಯುತ್ತಿದ್ದರೆ ಇತ್ತ ಬೆಂಗಳೂರಿಗರು ಗಲ್ಲಿ ಕ್ರಿಕೆಟ್ ಆಡುತ್ತಿದ್ದ ದೃಶ್ಯ ನಮ್ಮ ಕ್ಯಾಮರಾ ಕಣ್ಣಿಗೆ ಬಿತ್ತು.












Click it and Unblock the Notifications