ಕರ್ನಾಟಕದಲ್ಲಿ ಮುಂದುವರೆದ ಮಳೆ, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಬೆಂಗಳೂರು, ಜುಲೈ 24:ಕರ್ನಾಟಕದಲ್ಲಿ ಮುಂಗಾರು ಮುಂದುವರೆದಿದೆ. ದಕ್ಷಿಣ ಕನ್ನಡ, ಕೇರಳ, ಕಾಸರಗೋಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಜುಲೈ 26ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೋಳಿಕ್ಕೊಡ್, ಮಲಪ್ಪುರಂ , ವಯನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಪಾಲಕ್ಕಾಡ್, ತ್ರಿಶುರ್, ಎರ್ನಾಕ್ಯುಲಮ್, ಇಡುಕ್ಕಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತ ಗಾಳಿಯು ಕೇರಳದಿಂದ ಕರ್ನಾಟಕದ ಕಡೆಗೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ತಮಿಳುನಾಡು, ಲಕ್ಷದ್ವೀಪದಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿ, ಕೇರಳದಲ್ಲಿ ಇನ್ನೆರೆಡು ಮೂರು ದಿನಗಳ ಕಾಲ ಪ್ರವಾಹವನ್ನು ತಂದೊಡ್ಡುವಂತಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನೈಋತ್ಯ ಮುಂಗಾರು ಕರಾವಳಿ ಕರ್ನಾಟಕದಲ್ಲಿ ಚುರುಕಾಗಿದ್ದು, ಉತ್ತರ ಕರ್ನಾಟಕದಲ್ಲಿ ಕಡಿಮೆಯಾಗಿದೆ. ಉತ್ತರ ಕನ್ನಡ, ಉಡುಪಿಯಲ್ಲಿ ವಿಪರೀತ ಮಳೆಯಾಗುತ್ತಿದೆ. ಭಟ್ಕಳದಲ್ಲಿ ಮಂಗಳವಾರ 23 ಸೆಂ.ಮೀ ಮಳೆಯಾಗಿದೆ. ಉಡುಪಿಯಲ್ಲಿ 21 ಸೆಂಮೀ, ಶಿರಾಲಿ 18 ಸೆಂ.ಮೀ, ಕೋಟಾ 17 ಸೆಂ,ಮೀ, ಕುಂದಾಪುರ 6 ಸೆಂ.ಮೀ, ಮಾಣಿ , ಅಂಕೋಲಾ, ಕಾರವಾರ ತಲಾ 14 ಸೆಂ.ಮೀ, ಮಂಗಳೂರು, ಸಿದ್ದಾಪುರ, ಹೊನ್ನಾವರ ತಲಾ 13 ಸೆಂ.ಮೀ ಮಳೆಯಾಗಿದೆ.
ಮಂಗಳೂರು, ಮುಲ್ಕಿ, ಉಪ್ಪಿನಂಗಡಿ,ಗೋಕರ್ಣ, ಕಾರ್ಕಳ, ಪಣಂಬೂರು, ಸುಳ್ಯ, ಹೊಸನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಒಟ್ಟು 135 ಮಿಲಿ ಮೀಟರ್ ಸರಾಸರಿ ಮಳೆ ದಾಖಲಾಗಿದೆ. ಕುಂದಾಪುರದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದ್ದು, 155 ಮಿಲಿ ಮೀಟರ್ ಮಳೆ ಸುರಿದಿದೆ.
ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿ ಮೀಟರ್ ಮಳೆಯಾಗಿದೆ ಎಂದು ಉಡುಪಿ ಹವಾಮಾನ ಇಲಾಖೆ ತಿಳಿಸಿದೆ. ನಾಳೆ ಕೂಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.












Click it and Unblock the Notifications